* ರಾಜ್ಯದ ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅತಿವಿರಳವಾದ ಚಿರತೆಯೊಂದು ಪತ್ತೆಯಾಗಿದ್ದು, ಇದಕ್ಕೆ ‘ಚಂದನ ಚಿರತೆ’ ಎಂದು ಹೆಸರಿಡಲಾಗಿದೆ. ಸಾಮಾನ್ಯವಾಗಿ ಹಳದಿ–ಕಂದು ಬಣ್ಣದ ಚರ್ಮ ಮತ್ತು ಗಾಢ ಕಪ್ಪು ಚುಕ್ಕೆಗಳನ್ನು ಹೊಂದಿರುವ ಚಿರತೆಗಳಿಗಿಂತ ವಿಭಿನ್ನವಾಗಿ, ಈ ಚಿರತೆಯು ಗಂಧದ ಬಣ್ಣವನ್ನು ಹೋಲುವ ಕೆಂಪು–ಗುಲಾಬಿ ಮಿಶ್ರಿತ ತುಪ್ಪಳ ಹಾಗೂ ಮಂಕಾದ ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿದೆ.*ಜಾಗತಿಕವಾಗಿ ಈ ಸ್ವರೂಪದ ಚಿರತೆಯನ್ನು ‘ಸ್ಟ್ರಾಬೆರಿ ಚಿರತೆ’ (Strawberry Leopard) ಎಂದು ಕರೆಯಲಾಗುತ್ತದೆ. ಆದರೆ, ಸ್ಥಳೀಯ ಸಾಂಸ್ಕೃತಿಕ ಗುರುತನ್ನು ನೀಡುವ ಉದ್ದೇಶದಿಂದ ಹಾಗೂ ಕರ್ನಾಟಕದ ಪರಂಪರೆಯನ್ನು ಪ್ರತಿಬಿಂಬಿಸಲು ಇದಕ್ಕೆ ‘ಚಂದನ ಚಿರತೆ’ ಎಂದು ನಾಮಕರಣ ಮಾಡಲಾಗಿದೆ ಎಂದು ಎಚ್‌ಎನ್‌ಎಫ್ ತಿಳಿಸಿದೆ.* ಕಲ್ಯಾಣ ಕರ್ನಾಟಕ ಭಾಗದಲ್ಲಿ ವನ್ಯಜೀವಿ ಅಧ್ಯಯನ ನಡೆಸುತ್ತಿರುವ ಹೊಳೆಮತ್ತಿ ನೇಚರ್ ಫೌಂಡೇಶನ್ (HNF) ತಂಡವು ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿ ಈ ಅಪರೂಪದ ಚಿರತೆ ಹಲವು ಬಾರಿ ಸೆರೆಯಾಗಿದೆ. ವನ್ಯಜೀವಿ ತಜ್ಞರ ಪ್ರಕಾರ, ಜಗತ್ತಿನಾದ್ಯಂತ ಈ ರೀತಿಯ ಬಣ್ಣದ ಚಿರತೆಗಳು ಅತಿ ವಿರಳವಾಗಿ ಮಾತ್ರ ಕಾಣಿಸಿಕೊಂಡಿವೆ.* ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕೆಲ ಬಾರಿ, ತಾಂಜೇನಿಯಾದಲ್ಲಿ ಒಮ್ಮೆ ಹಾಗೂ 2021ರಲ್ಲಿ ರಾಜಸ್ಥಾನದ ರಣಕಪುರದಲ್ಲಿ ಇಂತಹ ಚಿರತೆ ಪತ್ತೆಯಾಗಿತ್ತು. ಭಾರತದಲ್ಲಿ ಇದು ಎರಡನೇ ಬಾರಿ, ಮತ್ತು ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಈ ಬಣ್ಣದ ಚಿರತೆ ಕಾಣಿಸಿಕೊಂಡಿದೆ.* ವನ್ಯಜೀವಿ ತಜ್ಞರ ಅಂದಾಜಿನ ಪ್ರಕಾರ, ಇದು 6–7 ವರ್ಷ ವಯಸ್ಸಿನ ಹೆಣ್ಣು ಚಿರತೆ ಆಗಿದ್ದು, ಸಾಮಾನ್ಯ ಬಣ್ಣದ ಮರಿಚಿರತೆಯೊಂದಿಗೆಯೇ ಅರಣ್ಯದಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಈ ಅಪರೂಪದ ಪತ್ತೆ ಕರ್ನಾಟಕದ ವನ್ಯಜೀವಿ ವೈವಿಧ್ಯತೆಗೆ ಮತ್ತೊಂದು ಮಹತ್ವದ ಸಾಕ್ಷಿಯಾಗಿದೆ.