Job Description: ➤ ಭಾರತದಲ್ಲಿ ದಿನೇದಿನೆ ಹೆಚ್ಚುತ್ತಿರುವ ಮಾನವ ಮತ್ತು ವನ್ಯಜೀವಿಗಳ ನಡುವಿನ ಘರ್ಷಣೆಗೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಪ್ರಸಿದ್ಧ ಸಲೀಂ ಅಲಿ ಪಕ್ಷಿವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ಕೇಂದ್ರ (WII-SACON) ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ 'ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣಾ ಶ್ರೇಷ್ಠತಾ ಕೇಂದ್ರ'ವನ್ನು (Centre of Excellence on Human-Wildlife Conflict - CoE-HWC) ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್‌ ಯಾದವ್ ಅವರು ಅಧಿಕೃತವಾಗಿ ಉದ್ಘಾಟಿಸಿದ್ದಾರೆ.➤ ಇದೇ ಸಂದರ್ಭದಲ್ಲಿ ದೇಶದಾದ್ಯಂತ ವನ್ಯಜೀವಿ ಸಂಘರ್ಷದ ದತ್ತಾಂಶಗಳನ್ನು ನಿರ್ವಹಿಸಲು 'ರಾಷ್ಟ್ರೀಯ ಮಾನವ-ವನ್ಯಜೀವಿ ಸಂಘರ್ಷ ಪೋರ್ಟಲ್' (National Human-Wildlife Conflict Portal) ಅನ್ನು ಸಹ ಲೋಕಾರ್ಪಣೆ ಮಾಡಲಾಗಿದೆ.➤ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) 7ನೇ ಸಭೆಯಲ್ಲಿ ಈ ಶ್ರೇಷ್ಠತಾ ಕೇಂದ್ರದ (CoE) ಸ್ಥಾಪನೆಯನ್ನು ಘೋಷಿಸಲಾಗಿತ್ತು. ಮುಖ್ಯ ಉದ್ದೇಶ: ಭಾರತದಲ್ಲಿ ಆನೆ, ಹುಲಿ, ಚಿರತೆ ಹಾಗೂ ಕಾಡುಹಂದಿಗಳಂತಹ ವನ್ಯಜೀವಿಗಳು ಮಾನವನ ಆವಾಸಸ್ಥಾನಗಳಿಗೆ ನುಗ್ಗುವುದರಿಂದ ಉಂಟಾಗುವ ಜೀವಹಾನಿ, ಬೆಳೆ ಹಾನಿ, ಜಾನುವಾರುಗಳ ಬಲಿ ಮತ್ತು ಆಸ್ತಿ ನಷ್ಟವನ್ನು ತಡೆಯುವುದು ಇದರ ಪ್ರಮುಖ ಗುರಿಯಾಗಿದೆ. ಕಾರ್ಯವೈಖರಿ: ಇದು ಕೇವಲ ಸಂಘರ್ಷದ ನಂತರ ಪರಿಹಾರ ನೀಡುವುದಕ್ಕೆ ಸೀಮಿತವಾಗಿರದೆ, ಆಧುನಿಕ ತಂತ್ರಜ್ಞಾನ ಮತ್ತು ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಜ್ಞಾನವನ್ನು ಬಳಸಿಕೊಂಡು ಸಂಘರ್ಷವನ್ನು ತಡೆಗಟ್ಟುವ "ಪರಿಹಾರ ಕೇಂದ್ರಿತ" (Solution-Oriented) ಮಾದರಿಯಲ್ಲಿ ಕೆಲಸ ಮಾಡಲಿದೆ. ➤ ಈ ನೂತನ ಡಿಜಿಟಲ್ ಪೋರ್ಟಲ್ ದೇಶದಾದ್ಯಂತ ನಡೆಯುವ ವನ್ಯಜೀವಿ ಸಂಘರ್ಷಗಳ ನೈಜ-ಸಮಯದ ದತ್ತಾಂಶಗಳನ್ನು (Real-time data) ಒಂದೇ ವೇದಿಕೆಯಲ್ಲಿ ಒದಗಿಸುವ ಮೂಲಕ, ಅಧಿಕಾರಿಗಳು ಮತ್ತು ವಿಜ್ಞಾನಿಗಳು ಜಂಟಿಯಾಗಿ ವಲಯವಾರು ಹಾಗೂ ಪ್ರಾಣಿ ಆಧಾರಿತ ಕಟ್ಟುನಿಟ್ಟಿನ ತಡೆ ಮುನ್ನೆಚ್ಚರಿಕೆ ಯೋಜನೆಗಳನ್ನು ರೂಪಿಸಲು ನೆರವಾಗುತ್ತದೆ.ಪ್ರತಿದಿನದ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ