* ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ 'ಜಲ ವಿಮಾನದ ಪ್ರಾಯೋಗಿಕ ಹಾರಾಟ' (ಸೀ ಪ್ಲೇನ್‌ ಡೆಮಾನ್‌ಸ್ಟ್ರೇಷನ್‌) ನಡೆಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಯ ಹಿನ್ನೀರಿನ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಸ್ಥಳವನ್ನು ನಿಗದಿ ಮಾಡಿದೆ. * ರಾಜ್ಯದ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ವಿವಿಧ ಇಲಾಖೆಗಳ ಸಹಯೋಗದಲ್ಲಿ ನವೆಂಬರ್‌ 10ರಂದು ಇದರ ಪ್ರಾಯೋಗಿಕ ಹಾರಾಟ ನಡೆಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.* ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಜಲ ವಿಮಾನದ ಪ್ರಾಯೋಗಿಕ ಹಾರಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇನ್ನು 12 ಪ್ರವಾಸಿಗರನ್ನು ಹೊತ್ತ ಮೊದಲ ಸೀ ಪ್ಲೇನ್‌ ಕೆಆರ್‌ಎಸ್ ಹಿನ್ನೀರಿನಲ್ಲಿ 4 ಬಾರಿ ಹಾರಾಟ ನಡೆಸಲಿದೆ. ನೀರಿನ ಮೇಲೆಯೇ ಹಾರಾಟ ನಡೆಸುವ ಮತ್ತು ಇಳಿಯುವ ಈ ಪ್ಲೇನ್‌ಗಳು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಸಾರಿಗೆ ಕೇಂದ್ರವಾಗಿ  ಬಳಸಲಿವೆ.* 2020ರಲ್ಲಿ ಗುಜರಾತ್‌ನ ನರ್ಮದಾ ಜಿಲ್ಲೆಯ ಸಬರಮತಿ ನದಿಯಲ್ಲಿ ಮೊದಲನೇ 'ಜಲವಿಮಾನ ಸೇವೆ'ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಕೇರಳ, ಆಂಧ್ರಪ್ರದೇಶದಲ್ಲೂ ಯಶಸ್ವಿಯಾಗಿ ಪರಿಚಯಿಸಿದ ನಂತರ ಈಗ ರಾಜ್ಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಭವಿಷ್ಯದಲ್ಲಿ 'ಉಡಾನ್‌' (Ude Desh ka Aam Nagrik) ಯೋಜನೆಯಡಿ ಸೇವೆ ಸೇರ್ಪಡೆಯಾಗುವ ಸಾಧ್ಯತೆಯಿದೆ.