* ನಗರ ಪ್ರದೇಶದ ಮಕ್ಕಳಿಗೆ ಗ್ರಾಮೀಣ ಜೀವನದ ನೈಜ ಅನುಭವ ಒದಗಿಸುವ ಉದ್ದೇಶದಿಂದ ‘ಹಳ್ಳಿ ವಾಸ್ತವ್ಯ’ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸುವ ಚಿಂತನೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಯೋಜನೆಯ ಮೂಲಕ ನಗರ ವಿದ್ಯಾರ್ಥಿಗಳು ಹಳ್ಳಿಗಳಲ್ಲಿ 2–3 ದಿನ ವಾಸ್ತವ್ಯ ಮಾಡಿ ಕೃಷಿ ಚಟುವಟಿಕೆಗಳು, ಪಶುಪಾಲನೆ, ಕೋಳಿ ಸಾಕಣೆ ಸೇರಿದಂತೆ ರೈತರ ದಿನನಿತ್ಯದ ಬದುಕನ್ನು ನೇರವಾಗಿ ಅರಿತುಕೊಳ್ಳಲಿದ್ದಾರೆ.* ಇಂದಿನ ಪೀಳಿಗೆ ಮಕ್ಕಳಿಗೆ ಆಹಾರ ಉತ್ಪನ್ನಗಳ ಮೂಲ, ರೈತರ ಶ್ರಮ ಹಾಗೂ ಗ್ರಾಮೀಣರ ಬದುಕುಬವಣೆ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಹಳ್ಳಿಗರೊಂದಿಗೆ ಸಂವಹನ ನಡೆಸುವಂತೆ ವಿಶೇಷ ಪ್ರವಾಸ ಪ್ಯಾಕೇಜ್ ಹಾಗೂ ಪಠ್ಯಕ್ರಮವನ್ನು ರೂಪಿಸಲಾಗುತ್ತದೆ. ಇದರ ಹೊಣೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳು ವಹಿಸಲಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.* ಈ ಯೋಜನೆಗೆ ಐಟಿ ತಜ್ಞ ಸ್ಯಾಮ್ ಪಿತ್ರೋಡಾ ಕಳೆದ ವರ್ಷ ಅಮೆರಿಕ ಪ್ರವಾಸದ ವೇಳೆ ಸಲಹೆ ನೀಡಿದ್ದು, ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ನೀಡಲಾಗುವುದು ಎಂದು ಡಿಸಿಎಂ ಭರವಸೆ ನೀಡಿದ್ದಾರೆ. ತಾವೂ ವಿದ್ಯಾರ್ಥಿ ಜೀವನದಲ್ಲಿ ಕೃಷಿ ಕಾಲೇಜಿನಲ್ಲಿ ಕೋಳಿ ಸಾಕಣೆ ತರಬೇತಿ ಪಡೆದಿದ್ದು, ಇಂದಿಗೂ ಕುಟುಂಬದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಹಾಗೂ ಹೈನುಗಾರಿಕೆ ಜೊತೆಗೆ ರೇಷ್ಮೆ ಕೃಷಿಯನ್ನೂ ನಡೆಸುತ್ತಿರುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.