* ಉತ್ತರ ಭಾರತದಲ್ಲಿ ಕೃಷಿ ತ್ಯಾಜ್ಯವನ್ನು ಸುಡುವಿಕೆ ಹೆಚ್ಚಾಗುತ್ತಿರುವುದರಿಂದ ವಾಯುಮಾಲಿನ್ಯ ತೀವ್ರವಾಗಿ ಏರುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಉಪಗ್ರಹ ಅವಲೋಕನ ಹಾಗೂ ಇತ್ತೀಚಿನ ಅಧ್ಯಯನಗಳ ಆಧಾರದ ಮೇಲೆ ತಿಳಿಸಿದೆ. ವಿಶೇಷವಾಗಿ ಭತ್ತದ ಕೊಯ್ಲಿನ ನಂತರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರೈತರು ಕೃಷಿ ತ್ಯಾಜ್ಯವನ್ನು ಸುಡುವುದರಿಂದ ದಟ್ಟ ಹೊಗೆ ವಾತಾವರಣವನ್ನು ಆವರಿಸುತ್ತದೆ.* ಈ ಅವಧಿಯಲ್ಲಿ ದಿಲ್ಲಿ–ಎನ್‌ಸಿಆರ್, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಗಂಭೀರವಾಗಿ ಹದಗೆಡುತ್ತದೆ. ಚಳಿಗಾಲದ ಆರಂಭದೊಂದಿಗೆ ಹಿಮ (ಮಂಜು) ಮತ್ತು ಹೊಗೆ ಒಂದಾಗಿ ವಾತಾವರಣದಲ್ಲಿ ತಂಗುವುದರಿಂದ ಮಾಲಿನ್ಯ ಇನ್ನಷ್ಟು ಹೆಚ್ಚಾಗುತ್ತದೆ. ಅಕ್ಟೋಬರ್ ಕೊನೆಯ ವಾರದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಗರಿಷ್ಠ ಮಟ್ಟ ತಲುಪುವುದರಿಂದ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತವೆ.* ಸುಮಾರು ಒಂದು ದಶಕದಿಂದ ಉಪಗ್ರಹ ದತ್ತಾಂಶವನ್ನು ವಿಶ್ಲೇಷಿಸುತ್ತಿರುವ ಅಮೆರಿಕದ ಮಾರ್ಗನ್ ಸ್ಟೇಟ್ ವಿಶ್ವವಿದ್ಯಾಲಯದ ವಾತಾವರಣ ವಿಜ್ಞಾನಿ ಹಿರೇನ್ ಜೇಥಾ ಅವರ ಅಧ್ಯಯನವು ಮಹತ್ವದ ಅಂಶವನ್ನು ಬಹಿರಂಗಪಡಿಸಿದೆ. ಹಿಂದಿನ ವರ್ಷಗಳಲ್ಲಿ ಮಧ್ಯಾಹ್ನ 1ರಿಂದ 2 ಗಂಟೆ ನಡುವೆ ಕೃಷಿ ತ್ಯಾಜ್ಯವನ್ನು ಸುಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಜೆ 4ರಿಂದ 6 ಗಂಟೆಯ ವೇಳೆಯಲ್ಲಿ ಸುಡುವಿಕೆ ಹೆಚ್ಚಾಗಿದೆ. ಈ ಸಮಯದಲ್ಲಿ ಮಂಜು ಬೀಳಲು ಆರಂಭವಾಗುವುದರಿಂದ ಹೊಗೆ ವಾತಾವರಣದಲ್ಲಿ ಹೆಚ್ಚು ಕಾಲ ತಂಗಿ ಮಾಲಿನ್ಯವನ್ನು ಗಂಭೀರಗೊಳಿಸುತ್ತದೆ.* ಈ ಹಿನ್ನೆಲೆಯಲ್ಲಿ ಕೃಷಿ ತ್ಯಾಜ್ಯ ನಿರ್ವಹಣೆಗೆ ಪರ್ಯಾಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಹಾಗೂ ರೈತರಿಗೆ ಸೂಕ್ತ ತಂತ್ರಜ್ಞಾನ ಮತ್ತು ಪ್ರೋತ್ಸಾಹ ನೀಡುವುದು ವಾಯುಮಾಲಿನ್ಯ ತಗ್ಗಿಸಲು ಅತ್ಯಾವಶ್ಯಕವಾಗಿದೆ.