* ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರ ಅವರು ಫಿಲಿಫೈನ್ಸ್‌ನ ಮನಿಲಾದಲ್ಲಿ ನಡೆದ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ 2025 ಸ್ಪರ್ಧೆಯ ಜಾಗತಿಕ ಅಂತಿಮ ಸುತ್ತಿನಲ್ಲಿ ಭಾರತವನ್ನು ಪ್ರತಿನಿಧಿಸಿ 22 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡು ದೇಶಕ್ಕೆ ಅಪಾರ ಕೀರ್ತಿ ತಂದಿದ್ದಾರೆ. ಡಿಸೆಂಬರ್ 1ರಿಂದ 8ರವರೆಗೆ ನಡೆದ ಈ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಅವರ ಆತ್ಮವಿಶ್ವಾಸ, ಪ್ರತಿಭೆ ಮತ್ತು ಸಂಸ್ಕೃತಿಯ ಪ್ರಸ್ತುತಿ ಜುರಿ ಹಾಗೂ ಪ್ರೇಕ್ಷಕರ ಮನ ಗೆದ್ದಿತು.* ಪ್ರತಿಭಾ ಪ್ರದರ್ಶನ ಸುತ್ತಿನಲ್ಲಿ ವಿದ್ಯಾ ಸಂಪತ್ ಅವರು ಭಾರತದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ವಿಶಿಷ್ಟ ಸಾಂಪ್ರದಾಯಿಕ ಉಡುಗೆಯನ್ನು ಪ್ರದರ್ಶಿಸಿದರು. ಮಂಗಳೂರಿನಲ್ಲಿ ಪರಿಕಲ್ಪನೆಗೊಂಡ ಈ ವಿನ್ಯಾಸದಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ, ರಾಷ್ಟ್ರೀಯ ಹೂ ಕಮಲ ಹಾಗೂ ರಾಷ್ಟ್ರೀಯ ಪಕ್ಷಿ ನವಿಲಿನ ಚಿತ್ರಣಗಳಿದ್ದು, ಭಾರತೀಯ ಸಂಸ್ಕೃತಿಯ ಜೊತೆಗೆ ಕರ್ನಾಟಕದ ಸಾಂಸ್ಕೃತಿಕ ಸೊಬಗನ್ನು ಸುಂದರವಾಗಿ ಬಿಂಬಿಸಿತು.* ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾ ಸಂಪತ್ ಕರ್ಕೇರ, ತಮ್ಮ ಈ ಯಶಸ್ಸಿಗೆ ಆಸ್ಟ್ರಲ್ ಪೇಜೆಂಟ್ಸ್ ನೀಡಿದ ವೇದಿಕೆ, ಪತಿ ಕರ್ಕೇರ ಅವರ ಬೆಂಬಲ ಹಾಗೂ ಪ್ರಾದೇಶಿಕ ನಿರ್ದೇಶಕ ದೀಪಕ್ ಗಂಗೂಲಿ ಅವರ ಮಾರ್ಗದರ್ಶನವೇ ಪ್ರಮುಖ ಕಾರಣವೆಂದು ತಿಳಿಸಿದರು.* ಈ ಕುರಿತು ಮಾತನಾಡಿದ ಕರ್ನಾಟಕದ ಆಸ್ಟ್ರಲ್ ಪೇಜೆಂಟ್ಸ್ ನಿರ್ದೇಶಕಿ ಪ್ರತಿಭಾ ಸಂಶಿಮಠ್, 2026ರಲ್ಲಿ ಆಸ್ಟ್ರಲ್ ಪೇಜೆಂಟ್ಸ್ ತನ್ನ 10ನೇ ಆವೃತ್ತಿಯನ್ನು ಆಯೋಜಿಸಲು ಸಜ್ಜಾಗುತ್ತಿದ್ದು, ವಿದ್ಯಾ ಸಂಪತ್ ಅವರ ಈ ಸಾಧನೆ ಸಂಸ್ಥೆಗೆ ಹೆಮ್ಮೆಯ ಹಾಗೂ ಐತಿಹಾಸಿಕ ಕ್ಷಣವಾಗಿದೆ ಎಂದು ಹೇಳಿದರು. ಅವರ ಗೆಲುವು ಕಠಿಣ ತರಬೇತಿ, ಸಮರ್ಪಣೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತೀಯ ಪ್ರತಿಭೆಯನ್ನು ಪ್ರದರ್ಶಿಸುವ ಆಸ್ಟ್ರಲ್ ಪೇಜೆಂಟ್ಸ್‌ನ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ ಎಂದರು.* ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರ ಅವರು ಕರ್ನಾಟಕವನ್ನು ಪ್ರತಿನಿಧಿಸಿ ಇಂದು ದೇಶದಾದ್ಯಂತದ ಮಹಿಳೆಯರಿಗೆ, ವಿಶೇಷವಾಗಿ ಟಿಯರ್–2 ನಗರಗಳ ಮಹಿಳೆಯರಿಗೆ ಪ್ರೇರಣೆಯ ದೀಪವಾಗಿದ್ದಾರೆ. ಅವರ ಈ ವಿಜಯವು ಭಾರತೀಯ ಮಹಿಳೆಯರು ಜಾಗತಿಕ ವೇದಿಕೆಯಲ್ಲಿ ಸಾಧನೆ ಮಾಡಬಹುದೆಂಬುದಕ್ಕೆ ಜೀವಂತ ಉದಾಹರಣೆಯಾಗಿದೆ.