* ಕರ್ನಾಟಕ ಸರ್ಕಾರವು 1999ರಲ್ಲಿ ಜಾರಿಯಲ್ಲಿದ್ದ ಬಾಡಿಗೆ ಕಾಯ್ದೆಯನ್ನು ಪರಿಷ್ಕರಿಸಿ ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆ–2025 ಅನ್ನು ವಿಧಾನಮಂಡಲದಲ್ಲಿ ಅಂಗೀಕರಿಸಿದೆ. ರಾಜ್ಯಪಾಲರ ಅಂಕಿತದ ಬಳಿಕ ಇದು ಅಧಿಕೃತವಾಗಿ ಕಾಯ್ದೆಯಾಗಲಿದೆ. ಕೇಂದ್ರ ಸರ್ಕಾರದ ಮಾದರಿ ಬಾಡಿಗೆ ಕಾಯ್ದೆ–2021 ಮತ್ತು ಜನವಿಶ್ವಾಸ (ನಿಯಮಗಳ ತಿದ್ದುಪಡಿ) ಕಾಯ್ದೆ–2023ಯ ಮಾರ್ಗಸೂಚಿಗಳನ್ನಾಧರಿಸಿ ಈ ತಿದ್ದುಪಡಿ ರೂಪಿಸಲಾಗಿದೆ.* ಸರ್ಕಾರದ ಪ್ರಕಾರ, ಈ ತಿದ್ದುಪಡಿಯಿಂದ ಮನೆ ಮಾಲೀಕರು ಮತ್ತು ಬಾಡಿಗೆದಾರರು – ಇಬ್ಬರಿಗೂ ನ್ಯಾಯ ದೊರೆಯಲಿದೆ. ಆದರೆ, ಹಳೆಯ ಕಾಯ್ದೆಯಂತೆ ಹೊಸ ನಿಯಮಗಳ ಅನುಷ್ಠಾನವೂ ಪರಿಣಾಮಕಾರಿಯಾಗುತ್ತದೆಯೇ ಎಂಬ ಅನುಮಾನಗಳು ಇನ್ನೂ ಉಳಿದಿವೆ.* ತಿದ್ದುಪಡಿಯ ಹಿನ್ನೆಲೆ:ಬಾಡಿಗೆ ವಿಷಯವು ರಾಜ್ಯ ಪಟ್ಟಿಗೆ ಸೇರಿರುವುದರಿಂದ ಪ್ರತಿ ರಾಜ್ಯವೂ ತನ್ನದೇ ಆದ ನಿಯಮಗಳನ್ನು ರೂಪಿಸಬೇಕು. ತಮಿಳುನಾಡು, ಆಂಧ್ರಪ್ರದೇಶ, ಉತ್ತರಪ್ರದೇಶ, ಅಸ್ಸಾಂ ಮುಂತಾದ ರಾಜ್ಯಗಳು ಈಗಾಗಲೇ ತಮ್ಮ ಬಾಡಿಗೆ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ್ದವು. ಆದರೆ ಕರ್ನಾಟಕದಲ್ಲಿ 1999ರ ಕಾಯ್ದೆಯೇ ಮುಂದುವರಿದಿತ್ತು. ಇದೀಗ ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸಿ ರಾಜ್ಯವೂ ಕಾಯ್ದೆ ಪರಿಷ್ಕರಣೆ ಮಾಡಿದೆ.* ಮುಖ್ಯ ತಿದ್ದುಪಡಿಗಳು:1.) ಜೈಲುಶಿಕ್ಷೆ ರದ್ದು – ದಂಡಕ್ಕೆ ಒತ್ತು: ಈ ತಿದ್ದುಪಡಿಯ ಪ್ರಮುಖ ಅಂಶವೆಂದರೆ ಸಣ್ಣಪುಟ್ಟ ಉಲ್ಲಂಘನೆಗಳನ್ನು ಅಪರಾಧದ ವ್ಯಾಪ್ತಿಯಿಂದ ಹೊರತರುವುದು. ಇದಕ್ಕಾಗಿ 1999ರ ಕಾಯ್ದೆಯ ಸೆಕ್ಷನ್ 53 ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.ಈ ಸೆಕ್ಷನ್ ಜೈಲುಶಿಕ್ಷೆ, ನ್ಯಾಯಾಂಗ ಪ್ರಕ್ರಿಯೆ ಮತ್ತು ಅಪರಾಧಗಳ ಬಗ್ಗೆ ಇದ್ದದ್ದು. ಇನ್ನು ಮುಂದೆ ಬಾಡಿಗೆ ಸಂಬಂಧಿತ ಉಲ್ಲಂಘನೆಗಳಿಗೆ ಜೈಲುಶಿಕ್ಷೆಯ ಬದಲು ಹೆಚ್ಚಿದ ದಂಡ ವಿಧಿಸುವ ವ್ಯವಸ್ಥೆ ಜಾರಿಯಾಗಲಿದೆ. ಇದು ಕೇಂದ್ರ ಸರ್ಕಾರದ ಜನವಿಶ್ವಾಸ ಕಾಯ್ದೆ–2023ಯ ತತ್ವದ ಅನುಸರಣೆಯಾಗಿದೆ.2.) ಸೆಕ್ಷನ್ 24: ನಿಯಂತ್ರಣಾಧಿಕಾರಿಯ ಅಧಿಕಾರ ವಿಸ್ತರಣೆ : ಮೂಲ ಕಾಯ್ದೆಯ ಸೆಕ್ಷನ್ 24 ನಿಯಂತ್ರಣಾಧಿಕಾರಿಗೆ ಸಿವಿಲ್ ನ್ಯಾಯಾಲಯದಷ್ಟೇ ಅಧಿಕಾರ ನೀಡಿತ್ತು. ತಿದ್ದುಪಡಿ ಮಸೂದೆಯಲ್ಲಿ ಹೊಸ ಉಪಸೆಕ್ಷನ್ (1–ಎ) ಸೇರಿಸಲಾಗಿದೆ.ಇದರ ಪ್ರಕಾರ:=> ಸೆಕ್ಷನ್ 54ರಲ್ಲಿ ಉಲ್ಲೇಖಿಸಿರುವ ದಂಡದ ಪ್ರಮಾಣವನ್ನು ನಿರ್ಧರಿಸುವ ಅಧಿಕಾರ ಈಗ ನಿಯಂತ್ರಣಾಧಿಕಾರಿಯವರಿಗೆ ಇರುತ್ತದೆ.=> ನ್ಯಾಯಾಲಯಗಳಿಗೆ ಹೋಗುವ ಅವಶ್ಯಕತೆ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದೆ.3.) ಸೆಕ್ಷನ್ 54: ದಂಡದ ಪ್ರಮಾಣ ಹೆಚ್ಚಳ : ಉಲ್ಲಂಘನೆಗಳನ್ನು ಅಪರಾಧದ ವ್ಯಾಪ್ತಿಯಿಂದ ಹೊರತಂದಿದ್ದರೂ, ಜೈಲುಶಿಕ್ಷೆ ರದ್ದುಪಡಿಸಿ ದಂಡದ ಮೊತ್ತವನ್ನು ಹೆಚ್ಚಿಸಿರುವುದು, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜನರ ಮೇಲೆ ಆರ್ಥಿಕ ಒತ್ತಡ ಉಂಟುಮಾಡುವ ಉದ್ದೇಶವನ್ನು ಹೊಂದಿದೆ.4.) ಸೆಕ್ಷನ್ 55: ಕಂಪನಿಗಳಿಗೆ ಸಂಬಂಧಿಸಿದ ಬದಲಾವಣೆ : 1999ರ ಕಾಯ್ದೆಯಲ್ಲಿ ಕಂಪನಿಗಳಿಂದ ನಡೆದ “ಅಪರಾಧಗಳು” ಎಂದು ಉಲ್ಲೇಖಿಸಿದ್ದನ್ನು, ತಿದ್ದುಪಡಿಯ ಮೂಲಕ “ಉಲ್ಲಂಘನೆಗಳು” ಎಂದು ಬದಲಾಯಿಸಲಾಗಿದೆ. ಅರ್ಥಾತ್, ಉಲ್ಲಂಘನೆಯಲ್ಲಿ ಕಂಪನಿಯ ನಿರ್ದೇಶಕ, ವ್ಯವಸ್ಥಾಪಕ ಅಥವಾ ಅಧಿಕಾರಿಯ ನೇರ ಅಥವಾ ಪರೋಕ್ಷ ಪಾತ್ರ ಸಾಬೀತಾದಲ್ಲಿ ಅವರಿಗೆ ದಂಡ ವಿಧಿಸಬಹುದು; ಆದರೆ ಆ ಉಲ್ಲಂಘನೆ ತನ್ನ ಅರಿವಿಲ್ಲದೆ ನಡೆದಿದೆ ಅಥವಾ ಅದನ್ನು ತಡೆಯಲು ತಾನು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ ಎಂದು ಸಾಬೀತುಪಡಿಸಿದರೆ, ಅಂತಹ ಅಧಿಕಾರಿಗೆ ದಂಡದಿಂದ ವಿನಾಯಿತಿ ನೀಡುವ ಅವಕಾಶವೂ ಇರುತ್ತದೆ.* ಒಟ್ಟಾರೆ ನೋಡಿದರೆ, ಈ ತಿದ್ದುಪಡಿ ಬಾಡಿಗೆ ಕಾಯ್ದೆಯನ್ನು ಹೆಚ್ಚು ಸಹಕಾರಮಯ ಮತ್ತು ಅಪರಾಧಮುಕ್ತಗೊಳಿಸಿ ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶ ಹೊಂದಿದ್ದರೂ, ದಂಡದ ಪ್ರಮಾಣ ಹೆಚ್ಚಳವು ಬಡ ಬಾಡಿಗೆದಾರರ ಮೇಲೆ ಹೆಚ್ಚುವರಿ ಒತ್ತಡ ತರುವ ಸಾಧ್ಯತೆ ಎಂಬ ಆತಂಕ ಉಳಿದಿದ್ದು, ಈ ಕಾಯ್ದೆಯ ನಿಯಮಗಳು ನಿಜವಾಗಿಯೂ ನೆಲಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವವೆಯೇ ಎಂಬುದು ಮುಂದಿನ ದಿನಗಳಲ್ಲಿ ಮಾತ್ರ ಸ್ಪಷ್ಟವಾಗಬೇಕಿದೆ.