* ಹಿಂದುತ್ವ ಮತ್ತು ಕೋಮುವಾದದ ರಾಜಕಾರಣದ ವಿರುದ್ಧ ಸಂವಿಧಾನಾತ್ಮಕ ಮೌಲ್ಯಗಳನ್ನು ಯುವಜನರಲ್ಲಿ ಬಿತ್ತುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ದೇಶದಲ್ಲೇ ಮೊದಲ ಬಾರಿಗೆ ಸಂಘಟಿತ ತರಬೇತಿ ಕೇಂದ್ರವನ್ನು ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿ ಆರಂಭಿಸಲು ಮುಂದಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಡಾ. ನಾರಾಯಣ ಸುಬ್ಬರಾವ್ ಹರ್ಡೀಕರ್ ಅವರ ಕರ್ಮಭೂಮಿಯಾದ ಕರ್ನಾಟಕ ಆರೋಗ್ಯ ಸಂಸ್ಥೆ ಆವರಣದಲ್ಲಿ ಈ ಕೇಂದ್ರ ಸ್ಥಾಪನೆಯಾಗುತ್ತಿದೆ.* ಡಾ. ನಾ.ಸು. ಹರ್ಡೀಕರ್ ರಾಷ್ಟ್ರೀಯ ಸೇವಾದಳ ತರಬೇತಿ ಅಕಾಡೆಮಿ ಮತ್ತು ಶಿಕ್ಷಣ ಸಂಸ್ಥೆ’ ಎಂಬ ಹೆಸರಿನಲ್ಲಿ ಆರಂಭವಾಗುವ ಈ ಕೇಂದ್ರವು, ಕಾಂಗ್ರೆಸ್‌ನ ತತ್ವ, ಸಿದ್ಧಾಂತ, ಸಂವಿಧಾನದ ಆಶಯಗಳು ಹಾಗೂ ರಾಷ್ಟ್ರೀಯ ಮೌಲ್ಯಗಳನ್ನು ಯುವಕರಲ್ಲಿ ಬೆಳೆಸುವ ಗುರಿ ಹೊಂದಿದೆ. ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಈ ಕೇಂದ್ರದಲ್ಲಿ ಅತ್ಯಾಧುನಿಕ ಸಭಾಂಗಣ, ವಸತಿ ಗೃಹಗಳು, ಊಟದ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ.* ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ತಮ್ಮ ಶಾಸಕರ ನಿಧಿಯಿಂದ ₹1 ಕೋಟಿಗೂ ಅಧಿಕ ಅನುದಾನ ನೀಡಿದ್ದು, ಕಾಂಗ್ರೆಸ್‌ನ ಹಲವರು ಸಹ ಆರ್ಥಿಕ ನೆರವು ನೀಡಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಸಹಕಾರದಿಂದ ಕೇಂದ್ರವು ಸಮಗ್ರ ರೂಪ ಪಡೆದುಕೊಂಡಿದೆ.* ಪ್ರತಿ ವರ್ಷ ಕನಿಷ್ಠ 12 ತರಬೇತಿ ಶಿಬಿರಗಳನ್ನು ಆಯೋಜಿಸುವ ಯೋಜನೆ ಹೊಂದಿರುವ ಈ ಕೇಂದ್ರದಲ್ಲಿ ಒಮ್ಮೆಗೆ 500ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲು ಅವಕಾಶವಿದೆ. ಯುವಕ-ಯುವತಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಹಾಗೂ ತರಬೇತಿ ಅವಧಿಯಲ್ಲಿ ಉಚಿತ ಊಟ–ಉಪಾಹಾರ ಒದಗಿಸಲಾಗುತ್ತದೆ.* ಮೊದಲ ಹಂತದಲ್ಲಿ ‘ಕಾಂಗ್ರೆಸ್ ಸೇವಾ’, ರಾಷ್ಟ್ರಭಾವ ಬೆಳೆಸುವ ‘ಜೈಜಗತ್’, ಸಹಬಾಳ್ವೆ ಮತ್ತು ಮಾನವ ಬಂಧುತ್ವ ಕಲಿಸುವ ‘ಸಂಗಂ’ ಎಂಬ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಮಾನತೆ, ಜಾತ್ಯತೀತತೆ, ಸಮಾಜವಾದ, ಸರ್ವಧರ್ಮ ಸಮನ್ವಯ, ಸ್ವಾತಂತ್ರ್ಯ, ಭ್ರಾತೃತ್ವ, ಗಾಂಧೀಜಿಯ ಆದರ್ಶಗಳು ಹಾಗೂ ಕಾಂಗ್ರೆಸ್ ಪಕ್ಷದ ಇತಿಹಾಸ–ಮೌಲ್ಯಗಳು ತರಬೇತಿಯ ಪ್ರಮುಖ ಅಂಶಗಳಾಗಿವೆ.* ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ತತ್ವಗಳಿಗೆ ಪರ್ಯಾಯವಾಗಿ ಯುವಜನರಲ್ಲಿ ಜಾತ್ಯತೀತ ಮನೋಭಾವ, ಸಹಿಷ್ಣುತೆ ಮತ್ತು ಸಂವಿಧಾನಪರ ಚಿಂತನೆ ಬೆಳೆಸುವುದು ಈ ಕೇಂದ್ರದ ಮೂಲ ಉದ್ದೇಶ. ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್‌ಎಸ್‌ಯುಐ ಕಾರ್ಯಕರ್ತರ ಜೊತೆಗೆ ಅಂಬೇಡ್ಕರ್‌ವಾದಿಗಳು ಸೇರಿದಂತೆ ಬಿಜೆಪಿ–ಆರ್‌ಎಸ್‌ಎಸ್ ವಿರೋಧಿಸುವ ಎಲ್ಲರಿಗೂ ಇಲ್ಲಿ ತರಬೇತಿ ಪಡೆಯುವ ಅವಕಾಶವಿರುತ್ತದೆ ಎಂದು ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.