➤ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಶನಿವಾರ (07-02-2026) ಭುವನೇಶ್ವರದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ರಾಜಕಾರಣಿ ಹಾಗೂ ಮಾಜಿ ರಾಜ್ಯಪಾಲ ಬಿಸ್ವಭೂಷಣ್ ಹರಿಚಂದನ್ ಅವರು ರಚಿಸಿದ ಎರಡು ಪ್ರಮುಖ ಪುಸ್ತಕಗಳಾದ 'ಬಕ್ಸಿ ಜಗಬಂಧು: ದಿ ಗ್ರೇಟ್ ಕಮಾಂಡರ್' (ಇಂಗ್ಲಿಷ್ ಇತಿಹಾಸ ಗ್ರಂಥ) ಮತ್ತು 'ಏ ಮಾಟಿ ಕಥಾ ಕಹೇ' (ಒಡಿಯಾ ಪ್ರಬಂಧ ಸಂಕಲನ) ಇವುಗಳನ್ನು ಲೋಕಾರ್ಪಣೆ ಮಾಡಿದರು.➤ ಬಕ್ಸಿ ಜಗಬಂಧು ಮತ್ತು ಪೈಕಾ ದಂಗೆ (1817): ಬಕ್ಸಿ ಜಗಬಂಧು: ದಿ ಗ್ರೇಟ್ ಕಮಾಂಡರ್' ಪುಸ್ತಕವು ಒಡಿಶಾದ ಖೋರ್ಧಾದಲ್ಲಿ 1817 ರಲ್ಲಿ ನಡೆದ ಐತಿಹಾಸಿಕ ಪೈಕಾ ದಂಗೆಯ (Paika Rebellion) ನಾಯಕ ಬಕ್ಸಿ ಜಗಬಂಧು ಅವರ ಜೀವನ ಮತ್ತು ಸಾಹಸದ ಮೇಲೆ ಬೆಳಕು ಚೆಲ್ಲುತ್ತದೆ. ಇದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ನಡೆದ ಆರಂಭಿಕ ಸಶಸ್ತ್ರ ದಂಗೆಯಾಗಿದೆ. 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ 40 ವರ್ಷಗಳ ಮೊದಲೇ ಈ ದಂಗೆ ನಡೆದಿತ್ತು. ಪೈಕಾಗಳು ಒಡಿಶಾದ ಸಾಂಪ್ರದಾಯಿಕ ಭೂಮಾಲೀಕ ಮಿಲಿಟರಿ ಪಡೆಯಾಗಿದ್ದರು. ಬ್ರಿಟಿಷರ ಭೂ ಕಂದಾಯ ನೀತಿ ಮತ್ತು ಉಪ್ಪಿನ ಮೇಲಿನ ತೆರಿಗೆಯ ವಿರುದ್ಧ ಇವರು ದಂಗೆ ಎದ್ದಿದ್ದರು.➤  ‘ಏ ಮಾಟಿ ಕಥಾ ಕಹೇ’ (ಈ ಮಣ್ಣು ಮಾತನಾಡುತ್ತದೆ) : ಈ ಒಡಿಯಾ ಪುಸ್ತಕವು ಒಟ್ಟು 30 ಪ್ರಬಂಧಗಳ ಸಂಕಲನವಾಗಿದೆ. ಇದು ನೇತಾಜಿ ಸುಭಾಷ್ ಚಂದ್ರ ಬೋಸ್, ಅಟಲ್ ಬಿಹಾರಿ ವಾಜಪೇಯಿ, ಪ್ರಜಾಪ್ರಭುತ್ವ, ಮಾಧ್ಯಮದ ಪಾತ್ರ, ಒಡಿಯಾ ಅಸ್ಮಿತೆ ಮತ್ತು ಜಗನ್ನಾಥನ ನಬಕಳೇಬರ (Nabakalebara) ಉತ್ಸವದಂತಹ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ.➤ ಬಿಸ್ವಭೂಷಣ್ ಹರಿಚಂದನ್: ಇವರು ಒಡಿಶಾ ಬಿಜೆಪಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. 5 ಬಾರಿ ಶಾಸಕರಾಗಿ ಮತ್ತು 4 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಆಂಧ್ರಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ ಹಾಗೂ  1975-77ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇವರು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡಿ ಜೈಲು ವಾಸ ಅನುಭವಿಸಿದ್ದರು .➤ ಇವರ ಆತ್ಮಕಥೆಯ ಹೆಸರು 'ಸಂಗ್ರಾಮ್ ಸರಿನಾಹಿ' (Sangram Sarinahi).