* ಭಾರತದ ಅತ್ಯಂತ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾದ ಅರಾವಳಿ (Aravalli Range) ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಗುಜರಾತ್‌ನಿಂದ ದಿಲ್ಲಿಯವರೆಗೆ ವಿಸ್ತರಿಸಿರುವ ಈ ಶ್ರೇಣಿಯಲ್ಲಿ ಯಾವುದೇ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು (New Mining Leases) ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೇಂದ್ರ ಪರಿಸರ ಸಚಿವಾಲಯವು (MoEF&CC) ಸಂಬಂಧಪಟ್ಟ ರಾಜ್ಯಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.ಈ ನಿರ್ಧಾರವು ರಾಜಸ್ಥಾನ, ಹರಿಯಾಣ, ಗುಜರಾತ್ ಮತ್ತು ದಿಲ್ಲಿಯ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.ಅರಾವಳಿ ಸಂರಕ್ಷಣೆಯ ಹಿನ್ನೆಲೆ ಮತ್ತು ಸುಪ್ರೀಂ ಕೋರ್ಟ್ ತೀರ್ಪು: ಅರಾವಳಿ ಬೆಟ್ಟಗಳಲ್ಲಿನ ಅಕ್ರಮ ಗಣಿಗಾರಿಕೆಯು ಮರುಭೂಮೀಕರಣಕ್ಕೆ (Desertification) ದಾರಿ ಮಾಡಿಕೊಡುತ್ತಿದೆ ಎಂದು ಪರಿಸರವಾದಿಗಳು ದಶಕಗಳಿಂದ ಆತಂಕ ವ್ಯಕ್ತಪಡಿಸುತ್ತಿದ್ದರು. 2025ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಅರಾವಳಿ ಬೆಟ್ಟಗಳಿಗೆ ಸಂಬಂಧಿಸಿದಂತೆ ಏಕರೂಪದ ಕಾನೂನು ವ್ಯಾಖ್ಯಾನವನ್ನು ನೀಡಿದ ಬೆನ್ನಲ್ಲೇ ಈ ನಿಷೇಧದ ಆದೇಶ ಹೊರಬಿದ್ದಿದೆ.* ಕೇಂದ್ರ ಸರ್ಕಾರದ ನಿರ್ದೇಶನಗಳಂತೆ, ಅರಾವಳಿ ಭೂದೃಶ್ಯ ವ್ಯಾಪ್ತಿಯಲ್ಲಿ ಯಾವುದೇ ಹೊಸ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಜೊತೆಗೆ, ಅರಾವಳಿಯ ಯಾವ ಭಾಗಗಳನ್ನು ಸಂಪೂರ್ಣವಾಗಿ ನಿಷೇಧಿತ ವಲಯವೆಂದು ಘೋಷಿಸಬೇಕು ಎಂಬುದನ್ನು ಗುರುತಿಸಲು ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ICFRE) ಗೆ ವೈಜ್ಞಾನಿಕ ಅಧ್ಯಯನದ ಜವಾಬ್ದಾರಿ ನೀಡಲಾಗಿದೆ. ಇನ್ನು ಅಸ್ತಿತ್ವದಲ್ಲಿರುವ ಗಣಿಗಾರಿಕೆ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲಾಗುವುದರೊಂದಿಗೆ, ಸುಸ್ಥಿರ ಗಣಿಗಾರಿಕೆ ನಿರ್ವಹಣಾ ಯೋಜನೆಯನ್ನು ಜಾರಿಗೊಳಿಸಲಾಗುವುದು, ಇದು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ್ದಾಗಿದೆ.* ಅರಾವಳಿ ಶ್ರೇಣಿಯ ಮಹತ್ವ ಅತ್ಯಂತ ವಿಶಿಷ್ಟವಾಗಿದೆ. ಇದು ಥಾರ್ ಮರುಭೂಮಿಯ ಮರಳು ಗಂಗಾ ಬಯಲು ಪ್ರದೇಶಕ್ಕೆ ಹರಡದಂತೆ ತಡೆಯುವ ನೈಸರ್ಗಿಕ ಮರುಭೂಮಿ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ಚಿರತೆಗಳು ಸೇರಿದಂತೆ ಅನೇಕ ಅಪರೂಪದ ಪ್ರಾಣಿ ಮತ್ತು ಸಸ್ಯ ಸಂಕುಲಗಳಿಗೆ ಪ್ರಮುಖ ಜೀವವೈವಿಧ್ಯ ಆವಾಸಸ್ಥಾನವಾಗಿದೆ. ಇನ್ನೂ, ದೆಹಲಿ–ಎನ್‌ಸಿಆರ್ ಪ್ರದೇಶದ ಅಂತರ್ಜಲ ಮರುಪೂರಣ ಮತ್ತು ಜಲಮಟ್ಟ ಕಾಪಾಡುವಲ್ಲಿ ಅರಾವಳಿ ಬೆಟ್ಟಗಳು ಮಹತ್ವದ ಪಾತ್ರ ವಹಿಸುತ್ತವೆ, ಇದರಿಂದ ಪರಿಸರ ಸಮತೋಲನ ಕಾಪಾಡಲಾಗುತ್ತದೆ.