* 2027ರ ಜನಗಣತಿ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ಆರ್‌ಜಿಐ) ಅವರು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ, ಮುಂದಿನ ವರ್ಷದ ಜನವರಿ 15ರೊಳಗೆ ಜನಗಣತಿ ಕಾರ್ಯಕ್ಕೆ ಅಗತ್ಯವಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಕಾತಿ ಪ್ರಕ್ರಿಯೆ ಮೂಲಕ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.* ಜನಗಣತಿ ವೇಳೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಗಣತಿದಾರರು ನಿರ್ವಹಿಸಲಿದ್ದು, ಒಬ್ಬ ಗಣತಿದಾರನು ಸರಾಸರಿ 700 ರಿಂದ 800 ಜನರ ಮಾಹಿತಿಯನ್ನು ದಾಖಲಿಸಲಿದ್ದಾರೆ. ಪ್ರತಿ ಆರು ಗಣತಿದಾರರಿಗೆ ಒಬ್ಬ ಮೇಲ್ವಿಚಾರಕ ನೇಮಕವಾಗಲಿದ್ದು, ಅಚಾನಕ್ ಅಗತ್ಯ ಅಥವಾ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಶೇ.10ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮೀಸಲಿಡಲಾಗುತ್ತದೆ.* ಈ ಕಾರ್ಯಕ್ಕಾಗಿ ಮುಖ್ಯವಾಗಿ ಶಿಕ್ಷಕರು, ಸರ್ಕಾರಿ ಕಚೇರಿಗಳ ನೌಕರರು ಹಾಗೂ ಸ್ಥಳೀಯ ಆಡಳಿತದ ಸಿಬ್ಬಂದಿಗಳನ್ನು ಗಣತಿದಾರರಾಗಿ ನೇಮಕ ಮಾಡಲಾಗುತ್ತದೆ. ಉನ್ನತ ಹುದ್ದೆಯ ಅಧಿಕಾರಿಗಳನ್ನು ಮೇಲ್ವಿಚಾರಕರಾಗಿ ನೇಮಿಸಲಾಗುತ್ತದೆ ಎಂದು ಆರ್‌ಜಿಐ ಸ್ಪಷ್ಟಪಡಿಸಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಖ್ಯ ಜನಗಣತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ವಿಭಾಗ ಮಟ್ಟದಲ್ಲಿ ಕಮೀಷನರ್‌ಗಳು ಮೇಲ್ವಿಚಾರಣೆ ವಹಿಸುತ್ತಾರೆ. ಮಹಾನಗರ ಪಾಲಿಕೆಗಳಲ್ಲಿ ಕಮೀಷನರ್ ಅಥವಾ ಹೆಚ್ಚುವರಿ ಕಮೀಷನರ್‌ಗಳು ಮುಖ್ಯ ಜನಗಣತಿ ಅಧಿಕಾರಿಗಳಾಗಿರುತ್ತಾರೆ.* ದೆಶದಾದ್ಯಂತ ಸುಮಾರು 30 ಲಕ್ಷ ಸಿಬ್ಬಂದಿ ಈ ಮಹತ್ವದ ಜನಗಣತಿ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಜನಗಣತಿ ಕಾರ್ಯದ ನಿರ್ವಹಣೆಯನ್ನು ಸುಗಮಗೊಳಿಸಲು ಸಿಎಂಎಂಎಸ್ (CMMS) ಎಂಬ ಆನ್‌ಲೈನ್ ವೆಬ್ ಪೋರ್ಟಲ್ ಈಗಾಗಲೇ ಸಿದ್ಧವಾಗಿದ್ದು, ಇದರ ಮೂಲಕ ಸಿಬ್ಬಂದಿಗಳ ನೋಂದಣಿ, ಕೆಲಸ ಹಂಚಿಕೆ ಹಾಗೂ ಪ್ರಗತಿ ಪರಿಶೀಲನೆ ಸಂಪೂರ್ಣವಾಗಿ ಡಿಜಿಟಲ್‌ವಾಗಿ ನಡೆಯಲಿದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಸಿಬ್ಬಂದಿಗಳ ವಿವರಗಳನ್ನು ಈ ಪೋರ್ಟಲ್‌ನಲ್ಲಿ ನೋಂದಾಯಿಸುವುದು ಕಡ್ಡಾಯ ಎಂದು ಆರ್‌ಜಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.