* ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಇತ್ತೀಚೆಗೆ ಪ್ರಕಟಿಸಿರುವ ವರದಿ ಜಾಗತಿಕ ಮಟ್ಟದಲ್ಲಿ ಮಕ್ಕಳ ಬಡತನ ಎಷ್ಟು ತೀವ್ರವಾಗಿದೆ ಎಂಬುದನ್ನು ಸ್ಪಷ್ಟವಾಗಿ ಬಹಿರಂಗಪಡಿಸಿದೆ. ಕಡಿಮೆ ಹಾಗೂ ಕೆಳ ಮಧ್ಯಮ ಆದಾಯದ ರಾಷ್ಟ್ರಗಳಲ್ಲಿನ ಲಕ್ಷಾಂತರ ಮಕ್ಕಳು ಇಂದಿಗೂ ಮೂಲಭೂತ ಅಗತ್ಯಗಳಿಂದ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.* ಈ ಸಮಗ್ರ ಸಮೀಕ್ಷೆಯನ್ನು 130 ದೇಶಗಳಲ್ಲಿ ನಡೆಸಲಾಗಿದ್ದು, ಅದರ ಪ್ರಕಾರ ಜಗತ್ತಿನಲ್ಲಿ ಸುಮಾರು 41.2 ಕೋಟಿ ಮಕ್ಕಳು ಕಡುಬಡತನದಲ್ಲಿ ಬದುಕುತ್ತಿದ್ದಾರೆ. ಅಂದರೆ, ಪ್ರಪಂಚದ ಪ್ರತಿ ಐದು ಮಕ್ಕಳಲ್ಲಿ ಒಬ್ಬ ಮಗು ಕಡುಬಡತನದಿಂದ ಬಳಲುತ್ತಿದ್ದು, ಇದು ಮಾನವೀಯ ದೃಷ್ಟಿಯಿಂದ ಗಂಭೀರ ಆತಂಕಕ್ಕೆ ಕಾರಣವಾಗಿದೆ.* ಭಾರತದ ಸ್ಥಿತಿಯೂ ಕೂಡ ಚಿಂತಾಜನಕವಾಗಿದೆ. ವರದಿ ಪ್ರಕಾರ, ಭಾರತದಲ್ಲಿ 20.6 ಕೋಟಿ ಮಕ್ಕಳು ಬಡತನದ ಚೌಕಟ್ಟಿನೊಳಗೆ ಬದುಕುತ್ತಿದ್ದು, ಅವರಿಗೆ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಶುದ್ಧ ನೀರಿನಂತಹ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ.* ಯುನಿಸೆಫ್ ವರದಿ ಕಡುಬಡತನವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ :  ಕಡಿಮೆ ಆದಾಯದ ರಾಷ್ಟ್ರಗಳಲ್ಲಿ ಒಬ್ಬ ವ್ಯಕ್ತಿ ದಿನಂಪ್ರತಿ ಬದುಕಲು ಕನಿಷ್ಠ ರೂ.270 ಅಗತ್ಯವಾಗಿದ್ದು, ಕೆಳ ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಈ ಮೊತ್ತ ರೂ.379 ಆಗಿದೆ. ಈ ವೆಚ್ಚವನ್ನು ಕೂಡ ಭರಿಸಲು ಆಗದ ಸ್ಥಿತಿಯಲ್ಲಿ ಅನೇಕ ಕುಟುಂಬಗಳು ಬದುಕುತ್ತಿರುವುದು ವರದಿಯ ಗಂಭೀರ ಅಂಶವಾಗಿದೆ.* ಮಕ್ಕಳ ಬಡತನವನ್ನು ಅಳೆಯಲು ಯುನಿಸೆಫ್ ಆರು ಪ್ರಮುಖ ಮಾನದಂಡಗಳನ್ನು ಬಳಸಿದೆ. ಅವುಗಳೆಂದರೆ – ಶಿಕ್ಷಣ, ಆರೋಗ್ಯ, ವಸತಿ, ಪೌಷ್ಟಿಕತೆ, ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರು. ಈ ಅಂಶಗಳಲ್ಲೊಂದರಲ್ಲಿ ತೀವ್ರ ಕೊರತೆ ಇದ್ದರೂ ಮಗು ಬಡತನದೊಳಗೆ ಸೇರಿಕೊಳ್ಳುತ್ತದೆ ಎಂದು ವರದಿ ಹೇಳುತ್ತದೆ.* ಮಕ್ಕಳ ಬಡತನ ಹೆಚ್ಚಾಗಲು ಹಲವು ಕಾರಣಗಳಿವೆ. ಹವಾಮಾನ ಬದಲಾವಣೆ ಮತ್ತು ಪ್ರಕೃತಿ ವಿಕೋಪಗಳು, ರಾಜಕೀಯ ಅಸ್ಥಿರತೆ ಹಾಗೂ ಸಂಘರ್ಷಗಳು, ರಾಷ್ಟ್ರಗಳ ಮೇಲಿನ ಸಾಲದ ಒತ್ತಡ, ಮತ್ತು ಕುಟುಂಬದ ಕಡಿಮೆ ಆದಾಯ ಹಾಗೂ ಉದ್ಯೋಗದ ಕೊರತೆ ಪ್ರಮುಖ ಕಾರಣಗಳಾಗಿವೆ. ವರದಿ ಪ್ರಕಾರ, ಪ್ರಪಂಚದ ಪ್ರತಿಯೊಂದು ಐದು ಮಕ್ಕಳಲ್ಲಿ ನಾಲ್ಕು ಮಕ್ಕಳು ಹವಾಮಾನ ವಿಕೋಪದ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ ಮತ್ತು ಪ್ರತಿ ಐದು ಮಕ್ಕಳಲ್ಲಿ ಒಬ್ಬ ಮಗು ಸಂಘರ್ಷಪೀಡಿತ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ.* ಈ ಗಂಭೀರ ಪರಿಸ್ಥಿತಿಗೆ ಪರಿಹಾರವಾಗಿ ಯುನಿಸೆಫ್ ಹಲವು ಶಿಫಾರಸ್ಸುಗಳನ್ನು ಮಾಡಿದೆ. - ಮಕ್ಕಳ ಬಡತನ ನಿರ್ಮೂಲನೆಗೆ ರಾಷ್ಟ್ರೀಯ ಮಟ್ಟದಲ್ಲಿ ಆದ್ಯತೆ ನೀಡಬೇಕು. - ಮಕ್ಕಳಿಗೆ ಸಂಬಂಧಿಸಿದ ವೆಚ್ಚಗಳನ್ನು ರಕ್ಷಿಸುವ ಕಾನೂನು ಮತ್ತು ನೀತಿಗಳನ್ನು ಜಾರಿಗೊಳಿಸಬೇಕು. - ಜೊತೆಗೆ, ಶಿಕ್ಷಣ, ಆರೋಗ್ಯ, ಶುದ್ಧ ನೀರು ಮತ್ತು ಪೌಷ್ಟಿಕ ಆಹಾರವನ್ನು ಎಲ್ಲಾ ಮಕ್ಕಳಿಗೂ ಖಚಿತಪಡಿಸುವುದು.- ಮಕ್ಕಳ ಪೋಷಕರಿಗೆ ಆರ್ಥಿಕ ಭದ್ರತೆ ಒದಗಿಸುವುದು.- ಕನಿಷ್ಠ ವೇತನ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿಸ್ತರಿಸುವುದು. ಅತ್ಯಗತ್ಯವೆಂದು ವರದಿ ಸೂಚಿಸುತ್ತದೆ.* ಜಾಗತಿಕ ಮಕ್ಕಳ ಬಡತನವು ಕೇವಲ ಆರ್ಥಿಕ ಸಮಸ್ಯೆಯಲ್ಲ; ಅದು ಮಾನವೀಯ, ಸಾಮಾಜಿಕ ಮತ್ತು ಭವಿಷ್ಯದ ತಲೆಮಾರಿಗೆ ಸಂಬಂಧಿಸಿದ ಗಂಭೀರ ಸವಾಲಾಗಿದೆ. ತಕ್ಷಣದ ಕ್ರಮಗಳು ಮತ್ತು ದೀರ್ಘಕಾಲೀನ ನೀತಿಗಳ ಮೂಲಕ ಮಾತ್ರ ಮಕ್ಕಳ ಭವಿಷ್ಯವನ್ನು ರಕ್ಷಿಸಬಹುದು ಎಂಬುದು ಯುನಿಸೆಫ್ ವರದಿಯ ಪ್ರಮುಖ ಸಂದೇಶವಾಗಿದೆ.