➤ ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧ ಅನಾದಿಕಾಲದ್ದು. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಮಾನವನ ಅತಿಯಾದ ದುರಾಸೆಯಿಂದಾಗಿ ಪ್ರಕೃತಿಯ ಸಮತೋಲನ ತಪ್ಪುತ್ತಿದೆ. ವನ್ಯಜೀವಿಗಳು ವಿನಾಶದ ಅಂಚಿಗೆ ತಲುಪುತ್ತಿದ್ದು, ಮುಂದೊಂದು ದಿನ ಅವುಗಳನ್ನು ಕೇವಲ ಚಿತ್ರಗಳಲ್ಲಿ ಅಥವಾ ವಿಡಿಯೋಗಳಲ್ಲಿ ಮಾತ್ರ ನೋಡುವ ಪರಿಸ್ಥಿತಿ ಬರಬಹುದು. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡ ವಿಶ್ವಸಂಸ್ಥೆಯು ವನ್ಯಜೀವಿಗಳ ಸಂರಕ್ಷಣೆಗಾಗಿ ಪ್ರತಿವರ್ಷ ಮಾರ್ಚ್ 3 ರಂದು 'ವಿಶ್ವ ವನ್ಯಜೀವಿ ದಿನ' (World Wildlife Day) ಆಚರಿಸಲು ಕರೆ ನೀಡಿದೆ.➤ 2026ರ ವಿಶ್ವ ವನ್ಯಜೀವಿ ದಿನದ ಘೋಷವಾಕ್ಯ (Theme): ಔಷಧೀಯ ಮತ್ತು ಪರಿಮಳಯುಕ್ತ ಸಸ್ಯಗಳು: ಆರೋಗ್ಯ, ಪರಂಪರೆ ಮತ್ತು ಜೀವನೋಪಾಯಗಳ ಸಂರಕ್ಷಣೆ➤ 2013ರ ಡಿಸೆಂಬರ್ 20ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) 68ನೇ ಅಧಿವೇಶನದಲ್ಲಿ ಮಾರ್ಚ್ 3 ಅನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ಘೋಷಿಸಲಾಯಿತು. ವಿಶೇಷವೆಂದರೆ, 1973ರ ಮಾರ್ಚ್ 3ರಂದು 'ವಿನಾಶದಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯಸಂಕುಲದ ಅಂತರಾಷ್ಟ್ರೀಯ ವ್ಯಾಪಾರ ಒಪ್ಪಂದ'ಕ್ಕೆ (CITES) ಸಹಿ ಹಾಕಲಾಗಿತ್ತು. ಈ ಐತಿಹಾಸಿಕ ದಿನದ ನೆನಪಿಗಾಗಿ ಮಾರ್ಚ್ 3ನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪ್ರಸ್ತಾವನೆಯನ್ನು ಮೊದಲು ಮಂಡಿಸಿದ್ದು ಥೈಲ್ಯಾಂಡ್ ಸರ್ಕಾರ ಎಂಬುದು ಗಮನಾರ್ಹ.➤ ನಗರೀಕರಣದಿಂದ ವಾಸಸ್ಥಾನದ ಕೊರತೆ, ಅಕ್ರಮ ಬೇಟೆ ಹಾಗೂ ವ್ಯಾಪಾರ ಮತ್ತು ಹವಾಮಾನ ಬದಲಾವಣೆಯು ಇಂದು ವಿಶ್ವದಾದ್ಯಂತ ವನ್ಯಜೀವಿಗಳ ಅಸ್ತಿತ್ವಕ್ಕೆ ಎದುರಾಗಿರುವ ಅತಿ ದೊಡ್ಡ ಸವಾಲುಗಳಾಗಿವೆ.➤ ಭಾರತದ ಬದ್ಧತೆ ಮತ್ತು ನಾಯಕರ ಸಂದೇಶ: ವಿಶ್ವ ವನ್ಯಜೀವಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ವನ್ಯಜೀವಿ ಸಂರಕ್ಷಣೆಯ ಬಗ್ಗೆ ತಮ್ಮ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.- ಪ್ರಧಾನಿ ಮೋದಿ: "ನಮ್ಮ ಭೂಮಿಯನ್ನು ಸಮೃದ್ಧಗೊಳಿಸುವ ಮತ್ತು ಪರಿಸರ ವ್ಯವಸ್ಥೆಯನ್ನು ಕಾಪಾಡುವ ಅದ್ಭುತ ಪ್ರಾಣಿ ವೈವಿಧ್ಯತೆಯನ್ನು ಸಂಭ್ರಮಿಸುವ ದಿನವಿದು. ವನ್ಯಜೀವಿ ರಕ್ಷಣೆಯಲ್ಲಿ ತೊಡಗಿರುವ ಎಲ್ಲರನ್ನೂ ನಾವು ಗೌರವಿಸೋಣ," ಎಂದು ತಿಳಿಸಿದ್ದಾರೆ.- ಅಮಿತ್ ಶಾ: "ರಾಯಲ್ ಬೆಂಗಾಲ್ ಟೈಗರ್‌ನಿಂದ ಹಿಡಿದು ಅತ್ಯಂತ ಚಿಕ್ಕ ಜೀವಿಗಳವರೆಗೆ ಪ್ರತಿಯೊಂದೂ ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ನಮ್ಮ ಸಂಸ್ಕೃತಿಯಾಗಿದೆ," ಎಂದು ಹೇಳಿದ್ದಾರೆ.