➤ ನವದೆಹಲಿ: ರಾಷ್ಟ್ರೀಯ ಏಕತೆ ಮತ್ತು ದೇಶಪ್ರೇಮವನ್ನು ಸಾರುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯವು ಒಂದು ಐತಿಹಾಸಿಕ ಆದೇಶವನ್ನು ಹೊರಡಿಸಿದೆ. ಇನ್ನು ಮುಂದೆ ಎಲ್ಲಾ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ 'ಜನಗಣಮನ' ಹಾಡುವುದಕ್ಕಿಂತ ಮೊದಲು ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಅನ್ನು ಕಡ್ಡಾಯವಾಗಿ ಹಾಡಬೇಕು ಎಂದು ಸೂಚಿಸಲಾಗಿದೆ. ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ 'ವಂದೇ ಮಾತರಂ' ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಈ ಮಹತ್ವದ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ➤ ಕೇಂದ್ರ ಗೃಹ ಸಚಿವಾಲಯದ ದಿನಾಂಕ 06.02.2026 ರ ಆದೇಶದ ಪ್ರಕಾರ ಪ್ರಮುಖ ಬದಲಾವಣೆಗಳು ಇಲ್ಲಿವೆ:- ಆರು ಚರಣಗಳ ಗಾಯನ: ಈ ಹಿಂದೆ ವಂದೇ ಮಾತರಂನ ಮೊದಲ ಕೆಲವು ಸಾಲುಗಳನ್ನು ಮಾತ್ರ ಬಳಸಲಾಗುತ್ತಿತ್ತು. ಆದರೆ ಈಗ ಮೂಲ ಕೃತಿಯಲ್ಲಿರುವ ಎಲ್ಲಾ 6 ಚರಣಗಳನ್ನು ಹಾಡುವುದು ಕಡ್ಡಾಯ.- ವಂದೇ ಮಾತರಂ ಗೀತೆಯನ್ನು ಹಾಡಲು ಅಥವಾ ನುಡಿಸಲು ಒಟ್ಟು 3 ನಿಮಿಷ 10 ಸೆಕೆಂಡುಗಳ ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ.- ಹಾಡಬೇಕಾದ ಸಮಯ:# ತ್ರಿವರ್ಣ ಧ್ವಜ ಹಾರಿಸುವ ಸಂದರ್ಭದಲ್ಲಿ.# ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರ ಆಗಮನದ ಸಂದರ್ಭದಲ್ಲಿ.# ರಾಷ್ಟ್ರಪತಿಗಳು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಮೊದಲು ಮತ್ತು ನಂತರ.- ಶಿಕ್ಷಣ ಸಂಸ್ಥೆಗಳಿಗೆ ಸೂಚನೆ: ಶಾಲಾ-ಕಾಲೇಜುಗಳಲ್ಲಿ ಪ್ರತಿದಿನದ ಆರಂಭವನ್ನು ರಾಷ್ಟ್ರೀಯ ಗೀತೆಯ ಸಾಮೂಹಿಕ ಗಾಯನದೊಂದಿಗೆ ಮಾಡುವಂತೆ ಸೂಚಿಸಲಾಗಿದೆ.➤ ಶಿಷ್ಟಾಚಾರ ಮತ್ತು ನಿಯಮಗಳು (Protocol): ರಾಷ್ಟ್ರೀಯ ಗೀತೆ ಹಾಡುವಾಗ ಶಿಷ್ಟಾಚಾರದ ಪ್ರಕಾರ ಗೌರವ ಸಲ್ಲಿಸಬೇಕು. ಯಾವುದೇ ಸಾಕ್ಷ್ಯಚಿತ್ರ ಅಥವಾ ಚಲನಚಿತ್ರಗಳ ಮಧ್ಯೆ ಈ ಗೀತೆ ಬಂದಾಗ ಪ್ರೇಕ್ಷಕರು ಎದ್ದು ನಿಲ್ಲುವ ಅಗತ್ಯವಿಲ್ಲ. ಇದು ಪ್ರದರ್ಶನಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಈ ವಿನಾಯಿತಿ ನೀಡಲಾಗಿದೆ.➤ ಈ ಹಿಂದೆ ಜವಾಹರಲಾಲ್ ನೆಹರು ಅವರ ಸರ್ಕಾರವು ಕೆಲವು ಕಾರಣಗಳಿಂದಾಗಿ ಕೊನೆಯ ನಾಲ್ಕು ಚರಣಗಳನ್ನು ಕೈಬಿಟ್ಟಿತ್ತು. ಈಗ ಆ ಎಲ್ಲಾ ಚರಣಗಳನ್ನು ಸೇರಿಸಿ 'ಅಧಿಕೃತ ಆವೃತ್ತಿ'ಯನ್ನು ಪ್ರಕಟಿಸಲಾಗಿದೆ.➤ ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸರ್ಕಾರದ ಈ ಕ್ರಮವು ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ಮತ್ತು ನಾಗರಿಕರಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ಬಗ್ಗೆ ಹೆಚ್ಚಿನ ಗೌರವ ಮೂಡಿಸಲು ಇದು ಸಹಕಾರಿಯಾಗಲಿದೆ.