* ಕೇಂದ್ರ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿದ ವರದಿಯ ಪ್ರಕಾರ ಶೈಕ್ಷಣಿಕ ಹಂತದಲ್ಲಿ ಪ್ರಮುಖ ಘಟ್ಟವಾದ SSLC ಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಘಟನೆಗಳು ಹೆಚ್ಚುತ್ತಿವೆ ಎಂದು ಕೇಂದ್ರ ಶಿಕ್ಷಣ ಇಲಾಖೆಯ ಸಚಿವ ಧರ್ಮೇಂದ್ರ ಪ್ರಧಾನ ಅವರು ತಿಳಿಸಿದ್ದಾರೆ.* ವರ್ಷದಿಂದ ವರ್ಷಕ್ಕೆ 10ನೇ ತರಗತಿಯನ್ನು ಮಧ್ಯದಲ್ಲಿಯೇ ಬಿಡುವವರ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೇ ಪರೀಕ್ಷೆಗೆ ಹಾಜರಾದವರ ಪೈಕಿ ಹೆಚ್ಚಿನವರು ಅನುತ್ತೀರ್ಣರಾಗುತ್ತಿದ್ದಾರೆ. * ಎಸ್‌ಎಸ್‌ಎಲ್‌ಸಿ ಅಧ್ಯಯನದ ನಂತರ ಸುಮಾರು ಇಲಾಖೆಯ 3.5 ಮಿಲಿಯನ್ ವಿದ್ಯಾರ್ಥಿಗಳು ಕಲಿಕೆಯನ್ನು ಸ್ಥಗಿತಗೊಳಿಸುತ್ತಿದ್ದಾರೆ ಎಂದು ಕೇಂದ್ರ ಶಿಕ್ಷಣ ಇಲಾಖೆಯ ವರದಿ ತಿಳಿಸಿದೆ ಎಂದು ಧರ್ಮೇಂದ್ರ ಹೇಳಿದ್ದಾರೆ. * 2022ರ 10ನೇ ತರಗತಿ ಪರೀಕ್ಷೆಗೆ ಹಾಜರಾದ 1,89,90,809 ವಿದ್ಯಾರ್ಥಿಗಳ ಪೈಕಿ 29,56,138 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ದೇಶಾದ್ಯಂತ 2021-22ರ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ಡ್ರಾಪ್‌ಔಟ್ ದರ ಶೇ.20.6ರಷ್ಟಿದೆ ಎಂದು ತಿಳಿಸಿದ್ದಾರೆ. * ಕೇಂದ್ರ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿದ ವರದಿಯ ಪ್ರಕಾರ ಒಡಿಶಾದಲ್ಲಿ ಅತಿಹೆಚ್ಚು ದರ ದಾಖಲಾಗಿದ್ದು, ಶೇ.49.9 ವಿದ್ಯಾರ್ಥಿಗಳು ಮಧ್ಯದಲ್ಲೇ ಶಿಕ್ಷಣ ತೊರೆದಿದ್ದಾರೆ. ನಂತರದ ಸ್ಥಾನದಲ್ಲಿ ಬಿಹಾರ ಶೇ.42.1, ಮೇಘಾಲಯ ಶೇ.33.5, ಕರ್ನಾಟಕದಲ್ಲಿಯೂ ಶೇ.28.5ರಷ್ಟು ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಸರಿದಿದ್ದಾರೆ. ಮಧ್ಯಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ಹರಿಯಾಣ, ತ್ರಿಪುರಾ, ಹಿಮಾಚಲ ಪ್ರದೇಶ ಮತ್ತು ದೆಹಲಿ ರಾಜ್ಯಗಳಲ್ಲಿ ಶೇ.10ಕ್ಕಿಂತ ಕಡಿಮೆ ದರ ಕಂಡುಬಂದಿದೆ ಎಂದು ವರದಿ ತಿಳಿಸಿದೆ.