Job Description: ➤ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಬರೆದಿರುವ ‘ಅಪ್ನಾಪನ್: ನರೇಂದ್ರ ಮೋದಿ ಸಂಗ್ ಮೇರೆ ಅನುಭವ್’ (Apnapan: My Experiences With Narendra Modi) ಎಂಬ ನೂತನ ಪುಸ್ತಕವು ಮೇ 26, 2026 ರಂದು ನವದೆಹಲಿಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಳೆದ ಮೂರು ದಶಕಗಳಿಗೂ ಹೆಚ್ಚಿನ ಸಾರ್ವಜನಿಕ ಮತ್ತು ರಾಜಕೀಯ ಜೀವನದ ನೆನಪುಗಳನ್ನು ಈ ಪುಸ್ತಕದಲ್ಲಿ ಚೌಹಾಣ್ ಅವರು ಹಂಚಿಕೊಂಡಿದ್ದಾರೆ.➤ ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಲೋಕಾರ್ಪಣೆಗೊಳಿಸಿದ ಹಾಗೂ ‘ಪ್ರಭಾತ್ ಪ್ರಕಾಶನ’ ಪ್ರಕಟಿಸಿದ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರಲ್ಲದೆ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ವಿಷ್ಣು ದೇವ್ ಸಾಯ್ ಮತ್ತು ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಕೇಂದ್ರ ಸಚಿವರು ಉಪಸ್ಥಿತರಿದ್ದರು.➤ ಅಪ್ನಾಪನ್’ ಪುಸ್ತಕದ ಆಶಯ ಮತ್ತು ಹಿನ್ನೆಲೆ: ಈ ಪುಸ್ತಕವು ಕೇವಲ ಒಂದು ಆತ್ಮಕಥೆಯಾಗಿರದೆ, ನಾಯಕತ್ವ, ಸಾರ್ವಜನಿಕ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ತತ್ವಗಳನ್ನು ಒಳಗೊಂಡಿದೆ. 1991 ರ ಪ್ರಸಿದ್ಧ 'ಏಕತಾ ಯಾತ್ರೆ'ಯಿಂದ ಆರಂಭಗೊಂಡು ಇಂದಿನವರೆಗಿನ ಸುಮಾರು 35 ವರ್ಷಗಳ ಸುದೀರ್ಘ ಒಡನಾಟದ ಅನುಭವಗಳನ್ನು ಶಿವರಾಜ್ ಸಿಂಗ್ ಚೌಹಾಣ್ ಅವರು ಅಪ್ನಾಪನ್ (ಆಪ್ತತೆ) ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ತಂತ್ರಜ್ಞಾನದ ಮುನ್ನೋಟ (Visionary Leadership): 1990 ರ ದಶಕದಲ್ಲೇ ಇಮೇಲ್ ಮತ್ತು ಇಂಟರ್ನೆಟ್‌ನಂತಹ ಆಧುನಿಕ ತಂತ್ರಜ್ಞಾನಗಳು ಭಾರತದ ಭವಿಷ್ಯವನ್ನು ಹೇಗೆ ಬದಲಾಯಿಸಬಲ್ಲವು ಎಂಬುದನ್ನು ಮೋದಿ ಅವರು ಅಂದೇ ಗುರುತಿಸಿದ್ದರು ಎಂಬ ಸ್ವಾರಸ್ಯಕರ ಪ್ರಸಂಗಗಳನ್ನು ಚೌಹಾಣ್ ವಿವರಿಸಿದ್ದಾರೆ. ಆಡಳಿತದ ಮೂಲಮಂತ್ರಗಳು: ಆಡಳಿತದಲ್ಲಿ ಪ್ರಧಾನಿ ಮೋದಿ ಅಳವಡಿಸಿಕೊಂಡ ‘ಸೇವಾ’, ‘ಅಂತ್ಯೋದಯ’ (ಕೊನೆಯ ವ್ಯಕ್ತಿಗೂ ಅಭಿವೃದ್ಧಿ), ‘ಜನ ಭಾಗಿ ದಾರಿ’ (ಸಾರ್ವಜನಿಕ ಸಹಭಾಗಿತ್ವ), ಮತ್ತು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ತತ್ವಗಳು ದೇಶವನ್ನು ಹೇಗೆ ಪ್ರಭಾವಿಸಿವೆ ಎಂಬುದನ್ನು ಈ ಪುಸ್ತಕ ವಿಶ್ಲೇಷಿಸುತ್ತದೆ. ಸಂಕಷ್ಟ ನಿರ್ವಹಣೆ: ಕೋವಿಡ್-19 ಸಾಂಕ್ರಾಮಿಕದಂತಹ ಕಠಿಣ ಸಮಯದಲ್ಲಿ ಪ್ರಧಾನಿಯವರು ಕೈಗೊಂಡ ಧೈರ್ಯದ ನಿರ್ಧಾರಗಳು ಮತ್ತು ವಿಪತ್ತನ್ನು ಹೇಗೆ ಅವಕಾಶವನ್ನಾಗಿ ಪರಿವರ್ತಿಸಿದರು ಎಂಬುದನ್ನು ಪುಸ್ತಕದಲ್ಲಿ ಶ್ಲಾಘಿಸಲಾಗಿದೆ. ➤ ಶಿವರಾಜ್ ಸಿಂಗ್ ಚೌಹಾಣ್: 1959ರಲ್ಲಿ ಮಧ್ಯಪ್ರದೇಶದಲ್ಲಿ ಜನಿಸಿ, ತಮ್ಮ 15ನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್ ಸೇರಿ ಆ ರಾಜ್ಯದ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಹೊಂದಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು, ಪ್ರಸ್ತುತ ವಿದಿಶಾ ಕ್ಷೇತ್ರದಿಂದ ಲೋಕಸಭೆಗೆ ಮರು ಆಯ್ಕೆಯಾಗಿ ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.