*  ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಿ ಸಬಲೀಕರಣವನ್ನು ಉತ್ತಮ ರೀತಿಯಲ್ಲಿ ಮಾಡಿರುವ ಬಿಬಿಎಂಪಿಗೆ ‘ಮೆಗಾ ಮತ್ತು ಮಿಲಿಯನ್ ಪ್ಲಸ್ ನಗರಗಳಡಿ’ ದೇಶದಲ್ಲೇ ಎರಡನೇ ರ‍್ಯಾಂಕ್ ಗಳಿಸಿದೆ.* ದೆಹಲಿಯ ಇಂಡಿಯಾ ಹ್ಯಾಬಿಟೇಟ್ ಸೆಂಟರ್‌ನಲ್ಲಿ ಜುಲೈ 18 ರಂದು (ಗುರುವಾರ) ನಡೆದ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಈ ಪ್ರಶಸ್ತಿ ನೀಡಿದ್ದಾರೆ.* ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ವತಿಯಿಂದ ಪಿಎಂ ಸ್ವನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. * ಜೂನ್ 1, 2020 ರಂದು ಪ್ರಾರಂಭಿಸಲಾದ ಪಿಎಂ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯು ನಗರ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ಷ್ಮ ಸಾಲ ಯೋಜನೆಯಾಗಿದ್ದು, ಇದು 50,000 ರೂ.ಗಳವರೆಗೆ ಮೇಲಾಧಾರ ರಹಿತ ದುಡಿಯುವ ಬಂಡವಾಳ ಸಾಲವನ್ನು ಒದಗಿಸುವ ಗುರಿಯನ್ನು ಹೊಂದಿದೆ.* ಇದರಡಿ ಬಿಬಿಎಂಪಿ ವ್ಯಾಪ್ತಿಯ 1.64 ಲಕ್ಷಕ್ಕೂ ಹೆಚ್ಚು ಮಂದಿ ಬೀದಿ ಬದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ 2,04,173 ಬೀದಿ ವ್ಯಾಪಾರಿಗಳು ಅರ್ಜಿ ಸಲ್ಲಿಕೆ ಮಾಡಿದ್ದು, 1,64,276 ಮಂದಿಗೆ ಕಿರು ಸಾಲ ಅನುಮೋದನೆ ಆಗಿದೆ. ಈ ಪೈಕಿ 1,28,844 ಮಂದಿ ಸಾಲ ಪಡೆದುಕೊಂಡಿದ್ದಾರೆ. ಒಟ್ಟಾರೆ ₹184.36 ಕೋಟಿ ಸಾಲ ವಿವರಣೆ ಮಾಡಲಾಗಿದೆ.* ಮೊದಲ ಸ್ಥಾನ ದೆಹಲಿ ಮಹಾನಗರ ಪಾಲಿಕೆ ಪಡೆದಿದೆ. ಎರಡನೇ ಸ್ಥಾನ ಬಿಬಿಎಂಪಿ ಹಾಗೂ ಮೂರನೇ ಸ್ಥಾನವನ್ನು ಗುಜರಾತ್‌ನ ಅಹ್ಮದಾಬಾದ್ ಮಹಾನಗರ ಪಾಲಿಕೆ ಪಡೆದಿದೆ.