* ಕರ್ನಾಟಕ ರಾಜ್ಯ 5ನೇ ಹಣಕಾಸು ಆಯೊಗದ ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ಸಿ. ನಾರಾಯಣಸ್ವಾಮಿ ನೇಮಕಗೊಂಡಿದ್ದಾರೆ. ಆಯೋಗದ ಸದಸ್ಯರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಮೊಹಮ್ಮದ್‌ ಸನಾವುಲ್ಲಾ ಹಾಗೂ ಆರ್‌.ಎಸ್‌. ಪೊಂಡೆ ಅವರನ್ನು ನೇಮಕ ಮಾಡಲಾಗಿದೆ.* ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯಿತಿ ರಾಜ್‌ ಕಾಯಿದೆ 1993ರಡಿ ರಾಜ್ಯಪಾಲರು ಆಯೋಗವನ್ನು ರಚಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ. ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳು, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳ ಹಣಕಾಸು ಸ್ಥಿತಿಗತಿ ಕುರಿತಂತೆ ಪರಿಶೀಲಿಸಿ ಸೂಕ್ತ ಶಿಫಾರಸು ಮಾಡುವ ಜವಾಬ್ದಾರಿಯನ್ನು ಆಯೋಗ ನಿರ್ವಹಿಸಲಿದ್ದು, 2024ರ ಫೆಬ್ರವರಿ 28ರೊಳಗೆ ವರದಿ ಸಲ್ಲಿಸಲು ಆಯೋಗಕ್ಕೆ ಸೂಚಿಸಲಾಗಿದೆ.* ಸ್ಥಳೀಯ ಸಂಸ್ಥೆಗಳ ವೆಚ್ಚಗಳ ಸರಿದೂಗಿಸಲು ಕೈಗೊಳ್ಳಬೇಕಾದ ಆರ್ಥಿಕ ಸಂಪನ್ಮೂಲ ಸುಧಾರಣೆ ಕ್ರಮಗಳು, ಸರ್ಕಾರಕ್ಕೆ ಬಾಕಿ ಮರುಪಾವತಿ, ಭವಿಷ್ಯದ ಹಂಚಿಕೆ ಇನ್ನಿತರ ಅಂಶಗಳ ಬಗ್ಗೆಯೂ ಅಧ್ಯಯನ ನಡೆಸಿ ಆಯೋಗವು ಸಲಹೆ ನೀಡಲಿದೆ. * ರಾಜ್ಯ ಸರ್ಕಾರದ ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣ, ಬೇಡಿಕೆ, ನಾಗರಿಕ ಆಡಳಿತ ವೆಚ್ಚ, ಸಾಲ ವ್ಯವಸ್ಥೆ, ಅಭಿವೃದ್ದಿ ಮತ್ತು ಬದ್ಧತಾ ವೆಚ್ಚಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ವಿಚಾರಗಳ ಕುರಿತು ಆಯೋಗ ಶಿಫಾರಸು ಮಾಡಲಿದೆ.