➤ ಕೇರಳದ ನ್ಯಾಯಾಂಗ ವ್ಯವಸ್ಥೆಯು ಒಂದು ಐತಿಹಾಸಿಕ ಮೈಲಿಗಲ್ಲಿಗೆ ಸಾಕ್ಷಿಯಾಗುತ್ತಿದೆ. ಕಣ್ಣೂರು ಜಿಲ್ಲೆಯ 24 ವರ್ಷದ ಪ್ರತಿಭಾವಂತ ವಕೀಲೆ ತಾನ್ಯಾ ನಾಥನ್ ಸಿ (Thanya Nathan C) ಅವರು ಕೇರಳದ ಮೊದಲ ದೃಷ್ಟಿಹೀನ ಮಹಿಳಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ನಡೆದ ಕೇರಳ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ (ಸಿವಿಲ್ ಜಡ್ಜ್ - ಜೂನಿಯರ್ ಡಿವಿಷನ್) ವಿಶೇಷ ಚೇತನರ ವಿಭಾಗದಲ್ಲಿ ಅವರು ಮೊದಲ ರ್‍ಯಾಂಕ್ ಗಳಿಸಿದ್ದಾರೆ.➤ ಜನ್ಮತಃ ದೃಷ್ಟಿಹೀನರಾದ ಕಣ್ಣೂರಿನ ತಾನ್ಯಾ ನಾಥನ್, ಕಣ್ಣೂರು ವಿವಿಯ LLB ಪರೀಕ್ಷೆಯಲ್ಲಿ ಟಾಪರ್ ಆಗುವ ಮೂಲಕ ಸಾಧನೆ ಆರಂಭಿಸಿದವರು. ಹಿರಿಯ ವಕೀಲ ಕೆ.ಜಿ. ಸುನಿಲ್ ಕುಮಾರ್ ಅವರಲ್ಲಿ ಜೂನಿಯರ್ ಆಗಿ ವೃತ್ತಿ ಅನುಭವ ಪಡೆದ ಇವರು, ಬ್ರೈಲ್ ಲಿಪಿ ಮತ್ತು ಸ್ಕ್ರೀನ್ ರೀಡಿಂಗ್ ಸಾಫ್ಟ್‌ವೇರ್ ನೆರವಿನಿಂದ ನ್ಯಾಯಾಂಗ ಪರೀಕ್ಷೆ ಜಯಿಸಿದ್ದಾರೆ. ➤ ತಾನ್ಯಾ ನಾಥನ್ ಅವರ ಈ ಸಾಧನೆಯ ಹಿಂದೆ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪಿದೆ. 2025ರಲ್ಲಿ ಸುಪ್ರೀಂ ಕೋರ್ಟ್‌ನ ಪೀಠವು (ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್), "ಕೇವಲ ದೃಷ್ಟಿಹೀನತೆಯ ಕಾರಣಕ್ಕೆ ಅಭ್ಯರ್ಥಿಗಳು ನ್ಯಾಯಾಂಗ ಸೇವೆಗೆ ಅನರ್ಹರಲ್ಲ" ಎಂದು ಮಹತ್ವದ ತೀರ್ಪು ನೀಡಿತ್ತು. ಇದು ವಿಶೇಷ ಚೇತನರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮಾನ ಅವಕಾಶ ಕಲ್ಪಿಸಲು ದಾರಿಯಾಯಿತು.➤  ವ್ಯವಸ್ಥೆಗಳು ಇನ್ನೂ ಸಂಪೂರ್ಣವಾಗಿ ಪ್ರವೇಶಿಸಬಹುದಾದ (Accessible) ಹಂತಕ್ಕೆ ತಲುಪಿಲ್ಲ. ಆದರೆ ತಂತ್ರಜ್ಞಾನ ಬೆಳೆದಿದೆ. ಸ್ಕ್ರೀನ್ ರೀಡರ್ ಮತ್ತು ಡಿಕ್ಟೇಶನ್ ಸಾಫ್ಟ್‌ವೇರ್ ಬಳಸಿ ನ್ಯಾಯಾಂಗದ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಬಹುದು" ಎಂಬುದು ತಾನ್ಯಾ ಅವರ ಆತ್ಮವಿಶ್ವಾಸದ ನುಡಿಗಳು.