*  ವಿಶ್ವದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾದ 'ದುಬೈ ಏರ್ ಶೋ'ನಲ್ಲಿ ಭಾರತದ ತೇಜಸ್ ಲಘು ಯುದ್ಧ ವಿಮಾನ ಪ್ರದರ್ಶನ ನೀಡುತ್ತಿದ್ದ ವೇಳೆ ಪತನಗೊಂಡಿದ್ದು, ಶುಕ್ರವಾರ ಪೈಲಟ್ ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಪಡೆ (ಐಎಎಫ್) ಖಚಿತಪಡಿಸಿದೆ.* 2025 ರ ದುಬೈ ಏರಶೋಗೆ ನವೆಂಬರ್ 17 ರಂದು ಚಾಲನೆ ಲಭಿಸಿತ್ತು.ಈ ಬಾರಿ 1 ,500 ಕ್ಕೂ ಹೆಚ್ಚು ಪ್ರದರ್ಶನಕಾರರು,150 ದೇಶಗಳಿಂದ ವೈಮಾನಿಕ ಕ್ಷೇತ್ರದ 1.48 ಲಕ್ಷ ವೃತ್ತಿಪರರು ಭಾಗವಹಿಸಿದ್ದರು.* ದುಬೈನ ಅಲ್ ಮಕ್ತುಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ಸ್ಥಳೀಯ ಕಾಲಮಾನ ಮಧ್ಯಾಹ್ನ 2:10ಕ್ಕೆ ಈ ದುರಂತ ಸಂಭವಿಸಿದೆ. ಭಾರತದ ದೇಶೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯಗಳನ್ನು ಪ್ರದರ್ಶಿಸಲು ತೇಜಸ್‌ ಈ ಜಾಗತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. * ಅಲ್‌ ಮಕ್ತೌಮ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹಾರಾಟ ನಡೆಸುತ್ತಿದ್ದ ವಿಮಾನ, ನೋಡ ನೋಡುತ್ತಿದ್ದಂತೆಯೇ ನಿಯಂತ್ರಣ ಕಳೆದುಕೊಂಡು ಕೆಳಮುಖವಾಗಿ ಚಲಿಸತೊಡಗಿತು. ಕೆಲವೇ ಸೆಕೆಂಡ್‌ಗಳಲ್ಲಿನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿತು. ಭಾರಿ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿತು. ಘಟನೆಯಲ್ಲಿತೀವ್ರವಾಗಿ ಗಾಯಗೊಂಡ ಪೈಲಟ್‌ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಭಾರತೀಯ ವಾಯುಪಡೆ ಖಚಿತಪಡಿಸಿದೆ.* ಪತನಕ್ಕೆ ನಿಖರ ಕಾರಣ ತಿಳಿಯಲು ತನಿಖಾ ತಂಡವನ್ನು ರಚಿಸುವುದಾಗಿ ‘ಐಎಎಫ್‌’ ಹೇಳಿದೆ. ಗುರುತ್ವಾಕರ್ಷಣೆ ಶಕ್ತಿಗೆ ವಿರುದ್ಧವಾಗಿ ಆಗಸದಲ್ಲಿಪೈಲಟ್‌ ಕಸರತ್ತು ನಡೆಸುತ್ತಿದ್ದಾಗ (ಜಿ ಮನೂವರ್‌) ಅದು ನಿಯಂತ್ರಣ ಕಳೆದುಕೊಂಡು ಕೆಳಮುಖವಾಗಿ ಚಲಿಸಿದೆ.* ಇದು ಎರಡು ವರ್ಷಗಳ ಅವಧಿಯಲ್ಲಿ ಸಂಭವಿಸಿದ ಎರಡನೇ ಘಟನೆಯಾಗಿದೆ. ಮಾರ್ಚ್ 2024ರಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತೇಜಸ್ ಯುದ್ಧ ವಿಮಾನ ಪತನಗೊಂಡವಾದ ಬಗ್ಗೆ ವರದಿಯಾಗಿತ್ತು.* 2001ರ ಮೊದಲ ಪರೀಕ್ಷಾರ್ಥ ಹಾರಾಟದ ನಂತರ ನಡೆದ ಮೊದಲ ಪತನ ಇದಾಗಿತ್ತು. ಆದರೆ ಆ ಘಟನೆಯಲ್ಲಿ ಪೈಲಟ್ ಸುರಕ್ಷಿತವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಎಚ್‌ಎಎಲ್‌ನೊಂದಿಗೆ 97 ಹೆಚ್ಚುವರಿ ತೇಜಸ್ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು, 2027ರಿಂದ ವಿತರಣೆ ಆರಂಭವಾಗುವ ನಿರೀಕ್ಷೆಯಿದೆ.* ತೇಜಸ್‌ 4.5ನೇ ತಲೆಮಾರಿನ ಸೂಪರ್‌ಸಾನಿಕ್‌ ಸಾಮರ್ಥ್ಯದ ಒಂದೇ ಎಂಜಿನ್‌ ಹೊಂದಿರುವ, ಲಘು ತೂಕದ, ಮತ್ತು ಬಹು-ಪಾತ್ರದ ಯುದ್ಧ ವಿಮಾನವಾಗಿದೆ. * ಸುಮಾರು ನಾಲ್ಕು ಸಾವಿರ ಕೆ.ಜಿ.ವರೆಗೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹಾರಾಟದ ಮಧ್ಯದಲ್ಲೇ ಇಂಧನವನ್ನು ತುಂಬಿಸಿಕೊಳ್ಳುವ ಸಾಮರ್ಥ್ಯವೂ ಇದಕ್ಕಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಂಗಸಂಸ್ಥೆ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ ನೇತೃತ್ವದಲ್ಲಿವಿನ್ಯಾಸಗೊಂಡಿರುವ ತೇಜನಸ್‌, ಹಿಂದೂಸ್ತಾನ್‌ ಏರೋನಾಟಿಪ್ಸ ಲಿಮಿಟೆಡ್  ತಯಾರಿಸಲ್ಪಡುತ್ತಿದೆ. * 1980ರ ದಶಕದಿಂದ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ಮಿಗ್‌-21 ಯುದ್ಧ ವಿಮಾನಗಳನ್ನು ಬದಲಾಯಿಸುವ ಮುಖ್ಯ ಉದ್ದೇಶದಿಂದ ಈ ಯೋಜನೆಯನ್ನು 2017ರಲ್ಲಿಆರಂಭಿಸಲಾಗಿತ್ತು.* ತೇಜಸ್ ಯುದ್ಧ ವಿಮಾನದ ಜತೆಗೆ ಭಾರತೀಯ ವಾಯುಪಡೆಯ ಸೂರ್ಯ ಕಿರಣ ತಂಡವೂ ಪ್ರದರ್ಶನದಲ್ಲಿ ಭಾಗವಹಿಸಿದೆ.