➤ ಹೊಸದಿಲ್ಲಿ: ಭಾರತದ ಆಂತರಿಕ ಭದ್ರತೆಗೆ ದಶಕಗಳಿಂದ ಸವಾಲಾಗಿದ್ದ ನಕ್ಸಲಿಸಂ ಪಿಡುಗನ್ನು ದೇಶದಿಂದ ಸಂಪೂರ್ಣವಾಗಿ ಕಿತ್ತೆಸೆಯಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಸೋಮವಾರ (30-03-2026) ಲೋಕಸಭೆಯಲ್ಲಿ ನಡೆದ ಮಹತ್ವದ ಚರ್ಚೆಯ ವೇಳೆ ಮಾತನಾಡಿದ ಅವರು, "ಭಾರತವು ಈಗ ನಕ್ಸಲ್ ಮುಕ್ತ ದೇಶವಾಗಿದೆ" ಎಂದು ಅಧಿಕೃತವಾಗಿ ಸಾರಿದರು. 2026ರ ಮಾರ್ಚ್ 31ರ ಒಳಗಾಗಿ ನಕ್ಸಲ್ ಮುಕ್ತ ಭಾರತ ನಿರ್ಮಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿತ್ತು. ಈ ಗಡುವಿನ ಒಳಗೇ ಈ ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.➤ ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ: ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ನಕ್ಸಲಿಸಂ ಎಂಬುದು ಅಭಿವೃದ್ಧಿಯ ಕೊರತೆಯಿಂದ ಬಂದಿದ್ದಲ್ಲ, ಬದಲಿಗೆ ಸಶಸ್ತ್ರ ಕ್ರಾಂತಿಯ ಮೂಲಕ ಅಧಿಕಾರ ಹಿಡಿಯುವ ಸಿದ್ಧಾಂತವಾಗಿದ್ದು, ಇದನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ರಾಜಕೀಯ ಲಾಭಕ್ಕಾಗಿ ಬೆಂಬಲಿಸಿದ್ದರು ಎಂದು ಆರೋಪಿಸಿದರು. ಕಳೆದ 60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಬುಡಕಟ್ಟು ಜನರನ್ನು ಉದ್ದೇಶಪೂರ್ವಕವಾಗಿ ಅಭಿವೃದ್ಧಿಯಿಂದ ವಂಚಿತರನ್ನಾಗಿ ಮಾಡಿ, ಆ ಪ್ರದೇಶಗಳಿಗೆ ರಸ್ತೆ, ಶಾಲೆ ಹಾಗೂ ಆಸ್ಪತ್ರೆಗಳು ತಲುಪದಂತೆ ನಕ್ಸಲಿಸಂಗೆ ಪರೋಕ್ಷವಾಗಿ ಸಹಕರಿಸಲಾಯಿತು ಎಂದು ದೂರಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಕ್ಸಲಿಸಂ ಅನ್ನು ದೇಶದ ಅತಿದೊಡ್ಡ ಭದ್ರತಾ ಸವಾಲು ಎಂದು ಕರೆದಿದ್ದರೂ, ಅದನ್ನು ಹತ್ತಿಕ್ಕಲು ಕಾಂಗ್ರೆಸ್ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಟೀಕಿಸಿದರು.➤ ಅಂಕಿ-ಅಂಶಗಳಲ್ಲಿ ನಕ್ಸಲ್ ನಿಗ್ರಹ (2024 - 2026): ಮೋದಿ ಸರ್ಕಾರದ 12 ವರ್ಷಗಳ ಸತತ ಪ್ರಯತ್ನದಿಂದಾಗಿ ನಕ್ಸಲ್ ಹಾವಳಿ ಅಳಿವಿನ ಅಂಚಿಗೆ ಬಂದಿದೆ. ಕಳೆದ ಕೆಲವು ವರ್ಷಗಳ ಸಾಧನೆ ಹೀಗಿದೆ:ಶರಣಾದ ನಕ್ಸಲೀಯರು: 4,839ಜೈಲು ಪಾಲಾದವರು: 2,218ಎನ್‌ಕೌಂಟರ್‌ನಲ್ಲಿ ಹತರಾದವರು: 706ನಕ್ಸಲ್ ಪೀಡಿತ ಜಿಲ್ಲೆಗಳು126 ರಿಂದ 07ಕ್ಕೆ ಇಳಿಕೆ➤ ಅಭಿವೃದ್ಧಿಯ ಹಾದಿಯಲ್ಲಿ ಬಸ್ತಾರ್: ಒಂದು ಕಾಲದಲ್ಲಿ ಮಾವೋವಾದಿಗಳ ಭದ್ರಕೋಟೆಯಾಗಿದ್ದ ಛತ್ತೀಸ್‌ಗಢದ ಬಸ್ತಾರ್ ಈಗ ಬದಲಾಗುತ್ತಿದೆ. ಅಲ್ಲಿನ ಪ್ರತಿ ಗ್ರಾಮದಲ್ಲೂ ರೇಷನ್ ಅಂಗಡಿಗಳು ಮತ್ತು ಶಾಲೆಗಳನ್ನು ತೆರೆಯುವ ಅಭಿಯಾನ ಆರಂಭವಾಗಿದೆ. "ನಕ್ಸಲಿಸಂನಿಂದಾಗಿ ಬಡತನ ಉಂಟಾಯಿತೇ ಹೊರತು, ಬಡತನದಿಂದ ನಕ್ಸಲಿಸಂ ಬರಲಿಲ್ಲ" ಎಂದು ಶಾ ಸ್ಪಷ್ಟಪಡಿಸಿದರು.➤ ಸರ್ಕಾರದ ಮುಂದಿನ ನಡೆ: ಸದ್ಯ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗಿದ್ದರೂ, ಅಧಿಕೃತ ಔಪಚಾರಿಕ ಪ್ರಕ್ರಿಯೆಗಳು ಮುಗಿದ ನಂತರ ಈ ಬಗ್ಗೆ ಮತ್ತೊಮ್ಮೆ ರಾಷ್ಟ್ರಕ್ಕೆ ಮಾಹಿತಿ ನೀಡಲಾಗುವುದು. "ಶಸ್ತ್ರಾಸ್ತ್ರ ಕೆಳಗಿಡುವವರ ಜೊತೆ ಸಂಧಾನ, ಗುಂಡು ಹಾರಿಸುವವರಿಗೆ ಗುಂಡಿನ ಮೂಲಕವೇ ಉತ್ತರ" ಎಂಬ ನೀತಿಯನ್ನು ಸರ್ಕಾರ ಮುಂದುವರಿಸಲಿದೆ ಎಂದು ಅವರು ಎಚ್ಚರಿಸಿದರು.