* ದೇಶದಲ್ಲಿ 'ಡಿಜಿಟಲ್ ಅರೆಸ್ಟ್' (Digital Arrest) ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ವಂಚನೆ ಹಗರಣದ ಕುರಿತು ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬಿಐ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಈ ಪಿಡುಗಿನಿಂದ ಈಗಾಗಲೇ ₹3,000 ಕೋಟಿಗೂ ಹೆಚ್ಚು ಮೊತ್ತವನ್ನು ಸುಲಿಗೆ ಮಾಡಲಾಗಿದೆ ಎಂದು ತಿಳಿಸಿವೆ. ಈ ಭೀಕರ ವರದಿಯಿಂದ ತೀವ್ರ ಆಘಾತಗೊಂಡಿರುವ ಸುಪ್ರೀಂ ಕೋರ್ಟ್, 'ಈ ಪಿಡುಗು ನಿಯಂತ್ರಣಕ್ಕೆ ಕಠಿಣ ಕ್ರಮ ಅಗತ್ಯ' ಎಂದು ಹೇಳಿದೆ.* ಹರಿಯಾಣದ ವೃದ್ಧ ದಂಪತಿ ತಾವು ‘ಡಿಜಿಟಲ್‌ ಅರೆಸ್ಟ್‌’ನಲ್ಲಿ ₹1.5 ಕೋಟಿ ಕಳೆದುಕೊಂಡಿರುವ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಅವರಿಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.* ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ನಡೆದ ಇಂಥ ಪ್ರಕರಣಗಳ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌ ಅ.27ರಂದು ನಡೆದ ವಿಚಾರಣೆ ವೇಳೆ ಸೂಚನೆ ನೀಡಿತ್ತು. ಇದರಂತೆ, ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬಿಐ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿವೆ.* ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌, ಉಜ್ಜಲ್‌ ಭುಯಾನ್‌ ಮತ್ತು ಜಾಯ್‌ ಮಾಲ್ಯಾ ಬಾಗ್ಚಿ ಅವರಿರುವ ಪೀಠವು ಈ ವರದಿಯನ್ನು ಪರಿಶೀಲಿಸಿತು. ‘ಗೃಹ ಸಚಿವಾಲಯ ಮತ್ತು ಸಿಬಿಐ ವರದಿಯನ್ನು ಪರಿಶೀಲಿಸಿ ನಮ್ಮ ಕಚೇರಿಯು ಸಣ್ಣ ವರದಿಯೊಂದನ್ನು ಸಿದ್ಧಪಡಿಸಿದೆ’ ಎಂದು ಪೀಠ ತಿಳಿಸಿತು.* ‘ಡಿಜಿಟಲ್‌ ಅರೆಸ್ಟ್‌’ ಎನ್ನವುದು ನಾವು ಅಂದುಕೊಂಡಿದ್ದಕ್ಕಿಂತ ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವರದಿಯನ್ನು ನೋಡಿದರೆ ಭಯಾನಕವಾಗಿದೆ  ಎಂದರು.*  ‘ಭಾರತದಲ್ಲಿ ಅಧಿಕ ಪ್ರಮಾಣದ ಪ್ರಕರಣಗಳು  ವರದಿಯಾಗುತ್ತಿವೆ ಎಂದರೆ, ವಿದೇಶಗಳಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಏನಿರಬಹುದು’ ಎಂದು ನ್ಯಾ. ಸೂರ್ಯ ಕಾಂತ್‌.ಆಂತಕ ವ್ಯಕ್ತ ಪಡಿಸಿದ್ದಾರೆ .* ಸೈಬರ್ ಅಪರಾಧ ಮತ್ತು 'ಡಿಜಿಟಲ್ ಅರೆಸ್ಟ್' ವಂಚನೆ ನಿಯಂತ್ರಣ ಕುರಿತು ನ್ಯಾಯಾಲಯಕ್ಕೆ ಸಲಹೆ ಮತ್ತು ಸಹಕಾರ ನೀಡಲು ಪೀಠವು ಅಮಿಕಸ್ ಕ್ಯೂರಿಯನ್ನು (ನ್ಯಾಯಾಲಯದ ಮಿತ್ರ) ನೇಮಿಸುವುದಾಗಿ ಘೋಷಿಸಿತು. ಹಿರಿಯ ವಕೀಲೆ ಮತ್ತು ಸೈಬರ್ ಕಾನೂನು ತಜ್ಞೆಯಾದ ಎನ್.ಎಸ್. ನಪ್ಪಿನಾಯ್ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿದೆ. ಇವರು ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಮಾಹಿತಿ ನೀಡುವ 'ಸೈಬರ್ ಸಾಥಿ' ಎಂಬ ವೆಬ್‌ಸೈಟ್‌ ಅನ್ನೂ ಸ್ಥಾಪಿಸಿದ್ದಾರೆ.ಈ ನಿರ್ಧಾರವು ದೇಶದಲ್ಲಿ ಸೈಬರ್ ಅಪರಾಧಗಳನ್ನು ಎದುರಿಸಲು ಕಾನೂನು ಮತ್ತು ತಾಂತ್ರಿಕ ಮಟ್ಟದಲ್ಲಿ ಕಠಿಣ ಮತ್ತು ವ್ಯವಸ್ಥಿತ ಕ್ರಮಗಳನ್ನು ಅಳವಡಿಸಲು ದಾರಿ ಮಾಡಿಕೊಡುವ ನಿರೀಕ್ಷೆಯಿದೆ.