* ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪಿನ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ.* ಭಾರತ ಸರಕಾರದ ಏಜೆಂಟ್ ಗಳು ಲಾರೆನ್ಸ್ ಬಿಷ್ನೋಯಿ ಗುಂಪಿನ ಜೊತೆ ಸೇರಿಕೊಂಡು ನಮ್ಮ ನೆಲದಲ್ಲಿ ರಹಸ್ಯ ಕಾರ್ಯಾಚರಣೆಗಳನ್ನೂ ನಡೆಸುತ್ತಿವೆ ಎಂದು ಕೆನಡಾ ಮಾಡಿರುವ ಆರೋಪವನ್ನು ಭಾರತ ತಳ್ಳಿ ಹಾಕಿದೆ.* ಹರ್ದೀಪ್‌ ಸಿಂಗ್‌ ಹತ್ಯೆ ಪ್ರಕರಣದಲ್ಲಿ ಭಾರತದ ಹೈಕಮಿಷನರ್‌ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸುವುದಾಗಿ ಕೆನಡಾ ಸರ್ಕಾರ ಹೇಳಿತ್ತು. ಈ ಬೆನ್ನಲ್ಲೇ ಭಾರತ ಸರ್ಕಾರ ಕೆನಡಾದಲ್ಲಿರುವ ತನ್ನ ಹೈಕಮಿಷನರ್‌ ಅವರನ್ನು ವಾಪಸ್‌ ಕರೆಸಿಕೊಳ್ಳುವ ನಿರ್ಧಾರಕ್ಕೆ ಮುಂದಾಗಿದೆ.* 2023ರ ಜೂನ್‌ನಲ್ಲಿ ನಡೆದ ಖಲಿಸ್ತಾನಿ ಉಗ್ರ ಹಾಗೂ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್‌ನ ಕೊಲೆ ಪ್ರಕರಣದ ಬಳಿಕ ಶುರುವಾದ ಬಿಕ್ಕಟ್ಟು, ಈಗ ರಾಯಭಾರ ಅಧಿಕಾರಿಗಳನ್ನು ವಜಾಗೊಳಿಸುವ ಪ್ರತೀಕಾರದ ಹಂತಕ್ಕೆ ತಲುಪಿದೆ.* ಭಾರತವು ರಾಜತಾಂತ್ರಿಕರನ್ನು ಬಳಸಿಕೊಂಡು ಸಂಘಟಿತ ಅಪರಾಧಗಳನ್ನು ನಡೆಸುವ ಮೂಲಕ ಕೆನಡಾ ಪ್ರಜೆಗಳಿಗೆ ತಮ್ಮ ನೆಲದಲ್ಲೇ ಅಸುರಕ್ಷಿತ ಭಾವನೆಯನ್ನು ಮೂಡುವಂತೆ ಮಾಡುತ್ತಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ದೂರಿದ್ದಾರೆ.* ಭಾರತದ ವಿರುದ್ಧ ನಿರ್ಬಂಧ ಹಾಕುವ ಸುಳಿವನ್ನು ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ನೀಡಿದ್ಧಾರೆ.*  ನಿಜ್ಜಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವುದಾಗಿ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು (ಆರ್‌ಸಿಎಂಪಿ) ಮೇ 3ರಂದು ಪ್ರಕಟಿಸಿದ್ದರು. ಕಮಲ್‌ಪ್ರೀತ್ ಸಿಂಗ್, ಕರಣ್‌ಪ್ರೀತ್ ಸಿಂಗ್ ಮತ್ತು ಕರಣ್ ಬ್ರಾರ್ ಅವರನ್ನು ಆಲ್ಬರ್ಟಾದ ಎಡ್ಮಾಂಟನ್‌ನಲ್ಲಿ ಬಂಧಿಸಲಾಗಿತ್ತು.* ಮೇ 11ರಂದು ಮತ್ತೊಬ್ಬ ಭಾರತೀಯ ಅಮನ್‌ದೀಪ್ ಸಿಂಗ್‌ ಮೇಲೆಯೂ ಈ ಪ್ರಕರಣ ಹೊರಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಐದು ಬಾರಿ ಮುಂದೂಡಿಕೆಯಾಗಿದೆ. ಇದರ ತನಿಖೆ ಇಲ್ಲಿಗೇ ಮುಗಿಯುವುದಿಲ್ಲ, ಇದರ ಹಿಂದಿರುವ ಪ್ರಮುಖರನ್ನು ಬಯಲಿಗೆ ಎಳೆಯಲಾಗುವುದು ಎಂದು ಕೆನಡಾ ಹೇಳಿದೆ. ಭಾರತ ಸರ್ಕಾರವೇ ಈ ಹತ್ಯೆ ಸಂಚು ರೂಪಿಸಿದೆ ಎನ್ನುವುದು ಕೆನಡಾ ಆರೋಪ.* ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್, ಕೆನಡಾದ ಆರೋಪಗಳು ಅತ್ಯಂತ ಗಂಭೀರವಾಗಿದೆ ಮತ್ತು ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದ್ದೇವೆ.* ಭಾರತ ಕೆನಡಾದ ತನಿಖೆಗೆ ಸಹಕರಿಸುವುದನ್ನು ನೋಡಲು ನಾವು ಬಯಸುತ್ತೇವೆ. ಆದರೆ, ಭಾರತ ಪರ್ಯಾಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ ಎಂದರು.