➤ ಕೇಂದ್ರ ರಕ್ಷಣಾ ಸಚಿವಾಲಯವು ಘೋಷಿಸಿದ ಪ್ರತಿಷ್ಠಿತ 'ವೀರಗಾಥಾ 5.0' (Veergatha 5.0) ಯೋಜನೆಯಡಿ, ಗುವಾಹಟಿಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಆಯೆಷಾ ಕರೀಮ್ 'ಸೂಪರ್ 100' ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಈ ಗೌರವಕ್ಕೆ ಪಾತ್ರರಾದ ಅಸ್ಸಾಂನ ಏಕೈಕ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.➤ ಆಯೆಷಾ ಕರೀಮ್: ಅಸ್ಸಾಂನ ಅಮಿನಗಾಂವ್‌ನಲ್ಲಿರುವ 'ಸರಳಾ ಬಿರ್ಲಾ ಜ್ಞಾನ ಜ್ಯೋತಿ' ಶಾಲೆಯ 4ನೇ ತರಗತಿ ವಿದ್ಯಾರ್ಥಿನಿಯಾದ ಆಯೆಷಾ ಕರೀಮ್, ತಮ್ಮ ಅದ್ಭುತ ಕಲಾಕೃತಿಯ ಮೂಲಕ ಈ ಸಾಧನೆ ಮಾಡಿದ್ದಾರೆ.➤ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಕಲಾ ನಮನ: 2008ರ ಮುಂಬೈ ಭೀಕರ ಭಯೋತ್ಪಾದನಾ ದಾಳಿಯ ವೇಳೆ ವೀರಮರಣ ಅಪ್ಪಿದ ಕನ್ನಡಿಗ, ಭಾರತೀಯ ಸೇನೆಯ ಹೆಮ್ಮೆಯ ಅಧಿಕಾರಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಶೌರ್ಯವನ್ನು ಬಿಂಬಿಸುವ ಚಿತ್ರವನ್ನು ಆಯೆಷಾ ಬಿಡಿಸಿದ್ದರು. ಇವರ ಈ ಭಾವಪೂರ್ಣ ಸ್ಕೆಚ್ ಮತ್ತು ಅದರಲ್ಲಿನ ದೇಶಭಕ್ತಿಯ ಅಭಿವ್ಯಕ್ತಿಯನ್ನು ಮೆಚ್ಚಿದ ತೀರ್ಪುಗಾರರು ಇವರನ್ನು ವಿಜೇತರನ್ನಾಗಿ ಆಯ್ಕೆ ಮಾಡಿದ್ದಾರೆ.➤ ವೀರಗಾಥಾ ಯೋಜನೆ :ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯದ ಜಂಟಿ ಉಪಕ್ರಮವಾದ ವೀರಗಾಥಾ ಯೋಜನೆಯು ಶಾಲಾ ವಿದ್ಯಾರ್ಥಿಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಪ್ರಶಸ್ತಿ ವಿಜೇತರ ಬಗ್ಗೆ ಜಾಗೃತಿ ಮೂಡಿಸುವ ಮತ್ತು ದೇಶಭಕ್ತಿಯನ್ನು ಬೆಳೆಸುವ ಮಹತ್ವದ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳು ಪ್ರಬಂಧ, ಕವನ, ಚಿತ್ರಕಲೆ ಅಥವಾ ಡಿಜಿಟಲ್ ಕಲಾಕೃತಿಗಳ ಮೂಲಕ ದೇಶದ ವೀರರ ಶೌರ್ಯಗಾಥೆಗಳನ್ನು ಅಭಿವ್ಯಕ್ತಪಡಿಸಲು ಅವಕಾಶವಿರುತ್ತದೆ. ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ 'ಸೂಪರ್ 100' ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ನಗದು ಬಹುಮಾನ, ಪದಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ, ಇದು ಯುವ ಪೀಳಿಗೆಯಲ್ಲಿ ನಾಗರಿಕ ಜವಾಬ್ದಾರಿ ಮತ್ತು ಮಿಲಿಟರಿ ಪರಂಪರೆಯ ಬಗ್ಗೆ ಹೆಮ್ಮೆಯನ್ನು ಮೂಡಿಸುತ್ತದೆ.➤ ಆಯೆಷಾ ಕರೀಮ್ ಅವರಿಗೆ ಕೇಂದ್ರ ರಕ್ಷಣಾ ಸಚಿವಾಲಯದಿಂದ ನಗದು ಪುರಸ್ಕಾರ ಮತ್ತು ಪದಕ ನೀಡಲಾಗಿದೆ. ಅಲ್ಲದೆ, ಜನವರಿ 26 ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಪರೇಡ್ ಅನ್ನು ವೀಕ್ಷಿಸಲು ಇವರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು.