➤ ಭಾರತದ ಕೃಷಿ ಮತ್ತು ಸಹಕಾರಿ ವಲಯದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಲಿರುವ 'ಸಹಕಾರಿ ವಲಯದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹಣೆ ಯೋಜನೆ'ಯ (World’s Largest Grain Storage Plan in Cooperative Sector) ಅನುಷ್ಠಾನ ಭರದಿಂದ ಸಾಗಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ರಾಜ್ಯಸಭೆಯಲ್ಲಿ ಈ ಯೋಜನೆಯ ಪ್ರಗತಿಯ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಗ್ರಾಮೀಣ ಕೃಷಿ ಮೂಲಸೌಕರ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಗುರಿಯನ್ನು ಈ ಯೋಜನೆ ಹೊಂದಿದೆ.➤ ಪ್ರಾಯೋಗಿಕ ಯೋಜನೆ (Pilot Project): ಮಧ್ಯಪ್ರದೇಶದ ಬಾಲಾಘಾಟ್: ಈ ಬೃಹತ್ ಯೋಜನೆಯನ್ನು ಪರೀಕ್ಷಿಸಲು ಮೊದಲು ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯನ್ನು ಪ್ರಾಯೋಗಿಕ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಬಾಲಾಘಾಟ್‌ನ ಪರ್ಸವಾಡಾದಲ್ಲಿರುವ 'ಬಹುಉದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ' (PACS).ಇಲ್ಲಿ 500 ಮೆಟ್ರಿಕ್ ಟನ್ (MT) ಸಾಮರ್ಥ್ಯದ ಆಧುನಿಕ ಗೋದಾಮನ್ನು ನಿರ್ಮಿಸಲಾಗಿದೆ. ಈ ಪ್ರಾಯೋಗಿಕ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 24, 2024 ರಂದು ಉದ್ಘಾಟಿಸಿದ್ದರು.ಈ ಗೋದಾಮನ್ನು ಮಧ್ಯಪ್ರದೇಶ ವೇರ್‌ಹೌಸಿಂಗ್ ಅಂಡ್ ಲಾಜಿಸ್ಟಿಕ್ಸ್ ಕಾರ್ಪೊರೇಷನ್ (MPWLC) ಬಾಡಿಗೆಗೆ ಪಡೆದಿದೆ, ಇದು ಸಹಕಾರ ಸಂಘಗಳಿಗೆ ನಿರಂತರ ಆದಾಯವನ್ನು ಖಚಿತಪಡಿಸುತ್ತದೆ.➤ ಈ ಯೋಜನೆಯ ವಿಶೇಷತೆಯೆಂದರೆ ಇದು ಕೇಂದ್ರ ಸರ್ಕಾರದ ಹಲವು ಪ್ರಮುಖ ಯೋಜನೆಗಳನ್ನು ಒಂದೇ ವೇದಿಕೆಯಡಿ ತರುತ್ತದೆ:- ಕೃಷಿ ಮೂಲಸೌಕರ್ಯ ನಿಧಿ (AIF): ಗೋದಾಮು ನಿರ್ಮಾಣಕ್ಕೆ ಪಡೆಯುವ ಸಾಲಕ್ಕೆ ಬಡ್ಡಿ ರಿಯಾಯಿತಿ ನೀಡಲು.- ಕೃಷಿ ಮಾರುಕಟ್ಟೆ ಮೂಲಸೌಕರ್ಯ ಯೋಜನೆ (AMI): ಸಂಗ್ರಹಣಾ ಘಟಕಗಳ ನಿರ್ಮಾಣಕ್ಕೆ ಸಬ್ಸಿಡಿ ನೀಡಲು.- ಕೃಷಿ ಯಾಂತ್ರೀಕರಣ ಉಪ ಮಿಷನ್ (SMAM): ರೈತರಿಗೆ ಕೃಷಿ ಉಪಕರಣಗಳ ಲಭ್ಯತೆಗಾಗಿ.- ಪಿಎಂ ಕಿಂತ ಆಹಾರ ಸಂಸ್ಕರಣಾ ಯೋಜನೆ (PMFME): ಕಿರು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು.➤ ಸಹಕಾರ ಸಂಘಗಳನ್ನು (PACS) ಬಲಪಡಿಸಲು ಸರ್ಕಾರ ಕೆಲವು ಪ್ರಮುಖ ನಿಯಮಗಳನ್ನು ಬದಲಾಯಿಸಿದೆ:- AIF ಯೋಜನೆಯಡಿ ಸಾಲ ತೀರಿಸುವ ಅವಧಿಯನ್ನು 2+5 ವರ್ಷಗಳಿಂದ 2+8 ವರ್ಷಗಳಿಗೆ ಹೆಚ್ಚಿಸಲಾಗಿದೆ.- AMI ಯೋಜನೆಯಡಿ ರೈತರು ಭರಿಸಬೇಕಾದ ಮಾರ್ಜಿನ್ ಹಣವನ್ನು ಶೇ. 20 ರಿಂದ ಶೇ. 10ಕ್ಕೆ ಇಳಿಸಲಾಗಿದೆ.- ಗೋದಾಮುಗಳ ಜೊತೆಗೆ ಒಳರಸ್ತೆ, ತೂಕದ ಯಂತ್ರ (Weighbridge) ಮತ್ತು ಕಾಂಪೌಂಡ್ ಗೋಡೆಗಳಂತಹ ಮೂಲಸೌಕರ್ಯಗಳಿಗೆ 1/3 ರಷ್ಟು ಹೆಚ್ಚುವರಿ ಸಹಾಯಧನ ನೀಡಲಾಗುತ್ತದೆ.- ಬಯಲು ಪ್ರದೇಶಗಳಲ್ಲಿ ಪ್ರತಿ ಟನ್‌ಗೆ ನಿರ್ಮಾಣ ವೆಚ್ಚವನ್ನು ₹7000ಕ್ಕೆ ಹಾಗೂ ಈಶಾನ್ಯ ರಾಜ್ಯಗಳಲ್ಲಿ ₹8000ಕ್ಕೆ ಹೆಚ್ಚಿಸಲಾಗಿದೆ.➤ ಈ ಯೋಜನೆಯು ಗ್ರಾಮ ಮಟ್ಟದಲ್ಲಿ ವೈಜ್ಞಾನಿಕ ಸಂಗ್ರಹಣಾ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡಿ, ರೈತರು ತಮ್ಮ ಉತ್ಪನ್ನಗಳನ್ನು ಸ್ಥಳೀಯವಾಗಿ ಸಂಗ್ರಹಿಸಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಮತ್ತು ಸಾರಿಗೆ ವೆಚ್ಚ ಉಳಿಸಲು ಸಹಕಾರಿಯಾಗಿದೆ.