* ಭಾರತದ ಸಾಗರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗೋವಾದ ವಾಸ್ಕೋದಲ್ಲಿರುವ ಗೋವಾ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ (GSL), ಭಾರತೀಯ ಕರಾವಳಿ ರಕ್ಷಣಾ ಪಡೆಯ (ICG) ಚೊಚ್ಚಲ ಸ್ವದೇಶಿ ನಿರ್ಮಿತ ಮಾಲಿನ್ಯ ನಿಯಂತ್ರಣ ಹಡಗು ‘ಸಮುದ್ರ ಪ್ರತಾಪ್’ (Samudra Pratap) ಅನ್ನು ಅಧಿಕೃತವಾಗಿ ದೇಶದ ಸೇವೆಗೆ ಸಮರ್ಪಿಸಿದ್ದಾರೆ.* 114.5 ಮೀಟರ್ ಉದ್ದ ಮತ್ತು 4,200 ಟನ್ ತೂಕ ಹೊಂದಿರುವ ಈ ಹಡಗನ್ನು ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ್ದು, ಇದರಲ್ಲಿ 60 ಶೇಕಡಕ್ಕಿಂತ ಹೆಚ್ಚು ಸ್ವದೇಶಿ ಅಂಶಗಳು ಬಳಕೆಯಲ್ಲಿವೆ. ಗಂಟೆಗೆ 22 ನಾಟ್‌ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹಾಗೂ 6,000 ನಾಟಿಕಲ್ ಮೈಲ್‌ಗಳ ದೀರ್ಘ ಸಂಚಲನ ಶಕ್ತಿ ಈ ಹಡಗಿಗೆ ಇದೆ.* ‘ಸಮುದ್ರ ಪ್ರತಾಪ್’ ಹಡಗು ಸಮುದ್ರ ಮಾಲಿನ್ಯ ನಿಯಂತ್ರಣ ನಿಯಮಗಳ ಜಾರಿ, ಸಾಗರ ಕಾನೂನು ಅನುಷ್ಠಾನ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಹಾಗೂ ಭಾರತದ ವಿಶೇಷ ಆರ್ಥಿಕ ವಲಯ (EEZ) ರಕ್ಷಣೆಗೆ ಅತ್ಯಂತ ಪ್ರಮುಖ ವೇದಿಕೆಯಾಗಲಿದೆ. ಈ ಹಡಗನ್ನು ಡಿಸೆಂಬರ್ ತಿಂಗಳಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆಯಿಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿತ್ತು.* ಈ ಉದ್ಘಾಟನಾ ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಹಾಗೂ ಭಾರತೀಯ ಕರಾವಳಿ ರಕ್ಷಣಾ ಪಡೆಯ ಮಹಾನಿರ್ದೇಶಕ ಪರಮೇಶ್ ಶಿವಮಣಿ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್,ಭಾರತದ ಮಹಾನ್ ಸಾಗರ ದೃಷ್ಟಿಕೋನದೊಂದಿಗೆ ಈ ಕ್ಷಣ ಸಂಬಂಧಿಸಿದೆ ಎಂದು ಹೇಳಿದರು.“ಸಮುದ್ರ ಸಂಪನ್ಮೂಲಗಳು ಯಾವುದಾದರೂ ಒಂದು ದೇಶದ ಆಸ್ತಿ ಅಲ್ಲ, ಅವು ಮಾನವಕುಲದ ಸಂಯುಕ್ತ ಪರಂಪರೆ. ಪರಂಪರೆ ಹಂಚಿಕೊಂಡಾಗ, ಅದರ ಹೊಣೆಗಾರಿಕೆಯೂ ಹಂಚಿಕೊಳ್ಳಬೇಕು. ಈ ಕಾರಣದಿಂದಲೇ ಭಾರತ ಇಂದು ಜವಾಬ್ದಾರಿಯುತ ಸಾಗರ ಶಕ್ತಿಯಾಗಿ ಹೊರಹೊಮ್ಮಿದೆ” ಎಂದು ಅವರು ಹೇಳಿದರು.* ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದ ಅವರು, ಕರಾವಳಿ ರಕ್ಷಣಾ ಪಡೆ ಮಹಿಳೆಯರಿಗೆ ಸಮರ್ಪಕ ಅವಕಾಶ ನೀಡುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಪೈಲಟ್, ವೀಕ್ಷಕ, ಏರ್ ಟ್ರಾಫಿಕ್ ಕಂಟ್ರೋಲರ್, ಲಾಜಿಸ್ಟಿಕ್ಸ್ ಅಧಿಕಾರಿ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು. ಹೋವರ್‌ಕ್ರಾಫ್ಟ್ ಕಾರ್ಯಾಚರಣೆಗಳಿಗೂ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದ್ದು, ಮುಂಚೂಣಿ ಕಾರ್ಯಾಚರಣೆಗಳಲ್ಲಿಯೂ ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. “ಇಂದು ಮಹಿಳೆಯರು ಸಹಾಯಕ ಪಾತ್ರದಲ್ಲಷ್ಟೇ ಅಲ್ಲ, ಮುಂಚೂಣಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ” ಎಂದು ರಾಜನಾಥ್ ಸಿಂಗ್ ಹೇಳಿದರು.* ಸಮುದ್ರ ಪ್ರತಾಪ್’ ಹಡಗಿನ ಸೇವೆಗೆ ಸೇರ್ಪಡೆ, ಹಡಗು ನಿರ್ಮಾಣ ಮತ್ತು ಸಾಗರ ಸಾಮರ್ಥ್ಯ ಅಭಿವೃದ್ಧಿಯಲ್ಲಿ ಭಾರತದ ‘ಆತ್ಮನಿರ್ಭರತೆ’ (Atmanirbharta) ಗುರಿಯತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ತಿಳಿಸಿದೆ. ಸಮುದ್ರ ಪ್ರತಾಪ್’ ಎಂದರೆ ‘ಸಮುದ್ರದ ಮಹಿಮೆ’ ಎಂಬ ಅರ್ಥ ಹೊಂದಿದ್ದು, ಸುರಕ್ಷಿತ, ಸ್ವಚ್ಛ ಮತ್ತು ಭದ್ರ ಸಾಗರಗಳನ್ನು ಕಾಯ್ದುಕೊಳ್ಳುವ ಜೊತೆಗೆ ರಾಷ್ಟ್ರದ ಸಾಗರ ಹಿತಾಸಕ್ತಿಗಳನ್ನು ರಕ್ಷಿಸುವ ಭಾರತೀಯ ಕರಾವಳಿ ರಕ್ಷಣಾ ಪಡೆಯ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಇದು ಸ್ವದೇಶಿ ಹಡಗು ವಿನ್ಯಾಸ ಮತ್ತು ನಿರ್ಮಾಣದಲ್ಲಿ ದೊಡ್ಡ ಸಾಧನೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.