➤ ಭಾರತದ ಪ್ರಮುಖ ಜೈವಿಕ ತಂತ್ರಜ್ಞಾನ ಸಂಸ್ಥೆಯಾದ ಬಯೋಕಾನ್ ಲಿಮಿಟೆಡ್ (Biocon Limited) ನ ನೂತನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀಹಾಸ್ ತಾಂಬೆ ನೇಮಕಗೊಂಡಿದ್ದು, ಅವರು 2026ರ ಏಪ್ರಿಲ್ 1 ರಿಂದ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ತಾಂಬೆ ಅವರು ಬಯೋಕಾನ್‌ನ 'ಬಯೊಸಿಮಿಲರ್ಸ್' (Biosimilars) ಮತ್ತು 'ಜೆನೆರಿಕ್ಸ್' (Generics) ವಿಭಾಗಗಳನ್ನು ಒಳಗೊಂಡ ಸಮಗ್ರ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ ಕಂಪನಿಯು ಕೇದಾರ್ ಉಪಾಧ್ಯೆ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ನೇಮಿಸಿದ್ದು, ಈ ಬದಲಾವಣೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಕಂಪನಿಯ ವಹಿವಾಟನ್ನು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಿವೆ.➤ ಶ್ರೀಹಾಸ್ ತಾಂಬೆ ಅವರು ಬಯೋಕಾನ್ ಸಂಸ್ಥೆಯೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿರುವ ಅನುಭವಿ ನಾಯಕರು. ಇವರು ಮುಂಬೈ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ICT/UDCT) ಇಂದ ಬಯೊ ಪ್ರೊಸೆಸ್ ಟೆಕ್ನಾಲಜಿಯಲ್ಲಿ (Bio-process Technology) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಬಯೋಕಾನ್‌ನಲ್ಲಿ ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಬಯೋಕಾನ್ ಸಂಸ್ಥೆಯ ವಹಿವಾಟನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವಲ್ಲಿ ಮತ್ತು ಕಂಪನಿಯ ಸಂಶೋಧನಾ ವಿಭಾಗಗಳನ್ನು ಬಲಪಡಿಸುವಲ್ಲಿ ಇವರ ಪಾತ್ರ ಬಹಳ ದೊಡ್ಡದಿದೆ. ಈ ಹಿಂದೆ ಇವರು ಬಯೋಕಾನ್ ಬಯೋಲಜಿಕ್ಸ್‌ನ ಸಿಇಒ ಆಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.➤ ಬಯೋಕಾನ್ ಲಿಮಿಟೆಡ್ : ಕಿರಣ್ ಮುಜುಂದಾರ್ ಶಾ ಅವರಿಂದ ಸ್ಥಾಪಿಸಲ್ಪಟ್ಟು ಕರ್ನಾಟಕದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಯೋಕಾನ್ ಲಿಮಿಟೆಡ್ (Biocon Limited), ಜಾಗತಿಕ ಮಟ್ಟದಲ್ಲಿ ಬಯೋಟೆಕ್ನಾಲಜಿ ಮತ್ತು ಫಾರ್ಮಾಸ್ಯುಟಿಕಲ್ಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು, ಪ್ರಮುಖವಾಗಿ ಜೀವರಕ್ಷಕ ಔಷಧಗಳು, ಬಯೊಸಿಮಿಲರ್ಸ್ ಮತ್ತು ಜೆನೆರಿಕ್ಸ್ ಸಂಶೋಧನೆ ಹಾಗೂ ಉತ್ಪಾದನೆಯಲ್ಲಿ ತೊಡಗಿಸಿಕೊಂಡು ವಿಶ್ವದಾದ್ಯಂತ ಆರೋಗ್ಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತಿದೆ.