* ಮಹಾರಾಷ್ಟ್ರ ರಾಜ್ಯವು ಸೌರ ಕೃಷಿ ಪಂಪ್‌ಸೆಟ್‌ಗಳ ಅನುಷ್ಠಾನದಲ್ಲಿ ದೇಶದಾದ್ಯಂತ ಅಗ್ರ ಸ್ಥಾನ ಪಡೆದುಕೊಂಡಿದೆ. ರಾಜ್ಯ ವಿದ್ಯುತ್ ವಿತರಣೆ ಕಂಪನಿ ಎಂಎಸ್‌ಇಡಿಸಿಎಲ್ (MSEDCL) ಕೇಂದ್ರ ಸರ್ಕಾರದ ಪಿಎಂ–ಕುಸುಮ್ ಬಿ ಯೋಜನೆ ಅಡಿಯಲ್ಲಿ ಕೇವಲ 30 ದಿನಗಳಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ 45,911 ಸೌರ ಕೃಷಿ ಪಂಪ್‌ ಸೆಟ್‌ಗಳನ್ನು ಯಶಸ್ವಿಯಾಗಿ ಸ್ಥಾಪಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಈ ಅಸಾಧಾರಣ ಸಾಧನೆ ಗಿನ್ನೆಸ್ ವಿಶ್ವ ದಾಖಲೆಯಲ್ಲೂ ಸ್ಥಾನ ಪಡೆದಿದ್ದು, ಸೌರಶಕ್ತಿ ಆಧಾರಿತ ಕೃಷಿ ಚಟುವಟಿಕೆಗಳನ್ನು ಅತೀವ ವೇಗವಾಗಿ ಅಳವಡಿಸಿರುವ ರಾಜ್ಯವಾಗಿ ಮಹಾರಾಷ್ಟ್ರ ಹೊರಹೊಮ್ಮಿದೆ. ಜಾಗತಿಕ ಮಟ್ಟದಲ್ಲಿಯೂ ಈ ಕ್ಷೇತ್ರದಲ್ಲಿ ಚೀನಾದ ನಂತರ ಮಹಾರಾಷ್ಟ್ರ ಎರಡನೇ ಸ್ಥಾನ ಪಡೆದಿದೆ.* ಈ ಸಾಧನೆ ಕೇಂದ್ರ ಸರ್ಕಾರದ ಪಿಎಂ–ಕುಸುಮ್ ಬಿ ಹಾಗೂ ರಾಜ್ಯ ಸರ್ಕಾರದ ಮಗೇಲ್ ತ್ಯಾಲಾ ಸೌರ್ ಕೃಷಿ ಪಂಪ್ ಯೋಜನೆ (ಎಂಟಿಎಸ್‌ಕೆಪಿವೈ)ಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಫಲವಾಗಿದೆ. ಈ ಯೋಜನೆಗಳು ಶುದ್ಧ ಮತ್ತು ನವೀಕರಿಸಬಹುದಾದ ಇಂಧನ ಬಳಕೆಗೆ ಉತ್ತೇಜನ ನೀಡುವ ಜೊತೆಗೆ, ರೈತರ ಜೀವನೋಪಾಯವನ್ನು ಬಲಪಡಿಸಿ, ಸುಸ್ಥಿರ ನೀರಾವರಿ ವ್ಯವಸ್ಥೆಯನ್ನು ಖಚಿತಪಡಿಸುತ್ತಿವೆ. ಮುಖ್ಯಮಂತ್ರಿ ಹಾಗೂ ಇಂಧನ ಸಚಿವರಾದ ದೇವೇಂದ್ರ ಫಡಣವೀಸ್ ಅವರ ಪ್ರಕಾರ, ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರೊಂದಿಗೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿ, ರೈತರ ಆದಾಯ ವೃದ್ಧಿಗೆ ಈ ಯೋಜನೆಗಳು ನೆರವಾಗುತ್ತಿವೆ.* ಈವರೆಗೆ ಮಹಾರಾಷ್ಟ್ರದಲ್ಲಿ 7.47 ಲಕ್ಷಕ್ಕೂ ಹೆಚ್ಚು ಸೌರ ಕೃಷಿ ಪಂಪ್‌ಸೆಟ್‌ಗಳನ್ನು ಸ್ಥಾಪಿಸಲಾಗಿದ್ದು, ಮುಂದಿನ ಹಂತದಲ್ಲಿ 10.45 ಲಕ್ಷ ಪಂಪ್‌ಗಳನ್ನು ಅಳವಡಿಸುವ ಗುರಿಯನ್ನು ರಾಜ್ಯ ಹೊಂದಿದೆ. ಈ ಮಹತ್ವಾಕಾಂಕ್ಷಿ ಯೋಜನೆ ರಾಜ್ಯದಷ್ಟೇ ಅಲ್ಲದೆ ದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅನುಸರಿಸಬಹುದಾದ ಮಾದರಿಯಾಗಲಿದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.