* ಸಾಮಾಜಿಕ ಬಹಿಷ್ಕಾರವನ್ನು ಸಂಪೂರ್ಣವಾಗಿ ನಿಷೇಧಿಸಲು ಕರ್ನಾಟಕ ಸರ್ಕಾರ ಹೊಸ ಮಸೂದೆ ಸಿದ್ಧಪಡಿಸಿದೆ. ಯಾವುದೇ ವ್ಯಕ್ತಿ ಅಥವಾ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದು ಅಪರಾಧವೆಂದು ಪರಿಗಣಿಸಲಾಗುತ್ತಿದ್ದು, ಇಂತಹ ಕೃತ್ಯ ಎಸಗಿದವರಿಗೆ ₹1 ಲಕ್ಷ ದಂಡ ಮತ್ತು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಮಸೂದೆ ಪ್ರಸ್ತಾಪಿಸಿದೆ. * ಈ ಮಸೂದೆಗೆ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ – 2025’ ಎಂದು ಹೆಸರಿಸಲಾಗಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಇದನ್ನು ಮಂಡಿಸಲು ಸರ್ಕಾರ ಸಿದ್ಧವಾಗಿದೆ. * ಈ ಮಸೂದೆ ಅಡಿ —ಬಹಿಷ್ಕಾರಕ್ಕೆ ಕರೆ ನೀಡುವುದು, ಸಭೆ–ಪಂಚಾಯಿತಿ ನಡೆಸುವುದು, ಬಹಿಷ್ಕಾರಕ್ಕೆ ಪ್ರಚೋದನೆ ನೀಡುವುದು, ಬಹಿಷ್ಕಾರದ ಪರವಾಗಿ ಮತ ಹಾಕುವುದು ಇತ್ಯಾದಿ ಎಲ್ಲವೂ ಶಿಕ್ಷಾರ್ಹ ಅಪರಾಧವಾಗಲಿದೆ.* ಬಹಿಷ್ಕಾರಕ್ಕೆ ಒಳಗಾದವರು ನೇರವಾಗಿ ಥಾಣೆ ಅಥವಾ ಪ್ರಥಮ ದರ್ಜೆ ನ್ಯಾಯಾಧೀಶರಿಗೆ ದೂರು ನೀಡಬಹುದು. ನ್ಯಾಯಾಧೀಶರು ತನಿಖೆಗೆ ಆದೇಶಿಸಿ, ಪೀಡಿತರಿಗೆ ಸೂಕ್ತ ಸಹಾಯ ಒದಗಿಸುವಂತೆಯೂ ನಿರ್ದೇಶಿಸಬಹುದು. * ಜಿಲ್ಲಾಧಿಕಾರಿಗಳು ಬಹಿಷ್ಕಾರಕ್ಕೆ ಸಂಬಂಧಿಸಿದ ಸಭೆಗಳನ್ನು ನಿಷೇಧಿಸಲು ಆದೇಶ ಹೊರಡಿಸಬಹುದು. ಸರ್ಕಾರ ಗ್ರೂಪ್–ಎ ಅಧಿಕಾರಿಗಳನ್ನು ‘ಸಾಮಾಜಿಕ ಬಹಿಷ್ಕಾರ ತಡೆ ಅಧಿಕಾರಿಗಳಾಗಿ’ ನೇಮಿಸಿ, ಕಾಯ್ದೆಯ ಜಾರಿಗೆ, ಪ್ರಕರಣಗಳ ಪತ್ತೆಗೆ, ಹಾಗೂ ನ್ಯಾಯಾಲಯಕ್ಕೆ ಸಹಕಾರಕ್ಕೆ ಜವಾಬ್ದಾರಿಯನ್ನು ನೀಡಲಿದೆ. ಮಸೂದೆ ಪ್ರಕಾರ, ವ್ಯಕ್ತಿಯ ಗೌರವವನ್ನು ಕಾಪಾಡುವುದು ಸಂವಿಧಾನಾತ್ಮಕ ಕರ್ತವ್ಯವಾಗಿದ್ದು, ಸಾಮಾಜಿಕ ಬಹಿಷ್ಕಾರವು ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. * ಯಾವ ಕೃತ್ಯಗಳು ನಿಷೇಧಕ್ಕೆ ಒಳಪಡುತ್ತವೆ?1. ಗ್ರಾಮ/ಸಮುದಾಯದಿಂದ ಹೊರಹಾಕುವುದು2. ಧಾರ್ಮಿಕ/ಸಾರ್ವಜನಿಕ ಸ್ಥಳಗಳ ಬಳಕೆಗೆ ತಡೆಯೊಡ್ಡುವುದು3. ದೇವಾಲಯ–ಪೂಜಾ ಸ್ಥಳಗಳಲ್ಲಿ ಪ್ರವೇಶ ನಿರಾಕರಿಸುವುದು4. ಮದುವೆ, ಅಂತ್ಯಕ್ರಿಯೆ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಡೆಯುವುದು5. ಉದ್ಯೋಗ, ವ್ಯವಹಾರ, ಸೇವೆಗಳನ್ನು ನಿರಾಕರಿಸುವುದು6. ಶಾಲೆ, ಆಸ್ಪತ್ರೆಗೆ ಪ್ರವೇಶ ತಡೆಯುವುದು7. ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಯಾವುದೇ ಕ್ರಮ8. ಸಾಂಸ್ಕೃತಿಕ, ಭಾಷಾ, ಬಟ್ಟೆಗಳ ಆಧಾರದ ಮೇಲೆ ಭೇದಭಾವ9. ಮಕ್ಕಳಿಗೆ ಒಟ್ಟಿಗೆ ಆಡಲು ತಡೆಯುವುದು10. ಸಂಬಂಧಗಳನ್ನು ಕಡಿತಗೊಳಿಸಲು ಒತ್ತಡ/ಪ್ರಚೋದನೆ ನೀಡುವುದು.* ಭಾರತದಲ್ಲಿ ಈ ಕಾಯ್ದೆ ಜಾರಿಗೊಳಿಸಿದ ಮೊದಲ ರಾಜ್ಯ – ಮಹಾರಾಷ್ಟ್ರ ಮಹಾರಾಷ್ಟ್ರವು 2016ರಲ್ಲಿ ಸಾಮಾಜಿಕ ಬಹಿಷ್ಕಾರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಮೊದಲ ರಾಜ್ಯ. ಈ ಕಾಯ್ದೆ ಅಡಿಯಲ್ಲಿ ಅಪರಾಧಿಗಳಿಗೆ ಏಳು ವರ್ಷಗಳ ಜೈಲು ಮತ್ತು ₹5 ಲಕ್ಷ ದಂಡ ವಿಧಿಸಲು ಅವಕಾಶವಿದೆ.