➤ ಭಾರತದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿರುವ ಭಾರತೀಯ ರಿಸರ್ವ ಬ್ಯಾಂಕ್ (RBI), ದೇಶದ ಹಣಕಾಸು ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ರಾಷ್ಟ್ರೀಯ ಭದ್ರತೆ ಮತ್ತು ಭೌಗೋಳಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಆರ್‌ಬಿಐ ತನ್ನ ಎರಡನೇ ಬೃಹತ್ ದತ್ತಾಂಶ ಕೇಂದ್ರವನ್ನು (Data Centre) ಒಡಿಶಾದ ಭುವನೇಶ್ವರದಲ್ಲಿ ಸ್ಥಾಪಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಕರೆನ್ಸಿ ನಿರ್ವಹಣೆ ಹಾಗೂ ಪಾವತಿ ವ್ಯವಸ್ಥೆಗಳನ್ನು ರಕ್ಷಿಸುವ ಉದ್ದೇಶದಿಂದ ಒಡಿಶಾದ ಭುವನೇಶ್ವರದ ಖೋರ್ಧಾದಲ್ಲಿರುವ ಇನ್ಫೋ ವ್ಯಾಲಿ-II ರ 18.55 ಎಕರೆ ವಿಸ್ತೀರ್ಣದಲ್ಲಿ ನೂತನ ದತ್ತಾಂಶ ಕೇಂದ್ರವನ್ನು ಸ್ಥಾಪಿಸಿದೆ.➤  ಆರ್‌ಬಿಐ ಈ ಪ್ರದೇಶವನ್ನು ಆಯ್ಕೆ ಮಾಡಿರುವುದರ ಹಿಂದೆ ಬಲವಾದ ವ್ಯೂಹಾತ್ಮಕ ಮತ್ತು ತಾಂತ್ರಿಕ ಕಾರಣಗಳಿವೆ:- ಗಡಿಯಿಂದ ದೂರ (Strategic Location): ಈ ಕೇಂದ್ರವು ಭಾರತದ ಪಶ್ಚಿಮ ಮತ್ತು ಉತ್ತರ ಗಡಿಗಳಿಂದ ಸಾಕಷ್ಟು ದೂರದಲ್ಲಿದೆ. ಇದರಿಂದಾಗಿ ಗಡಿಯಾಚೆಗಿನ ಕ್ಷಿಪಣಿ ಅಥವಾ ಡ್ರೋನ್ ದಾಳಿಗಳ ಭೀತಿ ಇಲ್ಲಿ ತೀರಾ ಕಡಿಮೆ.- ಕಡಿಮೆ ಭೂಕಂಪನ ಅಪಾಯ: ಭಾರತದ ಹೆಚ್ಚಿನ ದತ್ತಾಂಶ ಕೇಂದ್ರಗಳು ಭೂಕಂಪನ ವಲಯಗಳಲ್ಲಿವೆ. ಆದರೆ ಭುವನೇಶ್ವರವು ಅತಿ ಹೆಚ್ಚು ಭೂಕಂಪನ ಅಪಾಯವಿರುವ ವಲಯಗಳಿಂದ ಹೊರಗಿರುವುದರಿಂದ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ದತ್ತಾಂಶವು ಸುರಕ್ಷಿತವಾಗಿರುತ್ತದೆ.- ಸೈಬರ್ ಭದ್ರತೆ ಮತ್ತು ನೆಟ್‌ವರ್ಕ್ ಪ್ರತ್ಯೇಕತೆ: ಮುಂಬೈ ಅಥವಾ ಚೆನ್ನೈನಂತೆ ಒಡಿಶಾವು ಪ್ರಮುಖ ಸಬ್‌ಸೀ ಕಮ್ಯುನಿಕೇಶನ್ ಕೇಬಲ್‌ಗಳ (Subsea Cables) ಲ್ಯಾಂಡಿಂಗ್ ಪಾಯಿಂಟ್ ಅಲ್ಲ. ಇದು ಕೇಂದ್ರೀಕೃತ ಸೈಬರ್ ದಾಳಿಗಳಿಂದ ಮೂಲಸೌಕರ್ಯವನ್ನು ದೂರವಿರಿಸಲು ಸಹಾಯ ಮಾಡುತ್ತದೆ.- ಪರ್ಯಾಯ ವ್ಯವಸ್ಥೆ (Redundancy): ಆರ್‌ಬಿಐನ ಪ್ರಾಥಮಿಕ ದತ್ತಾಂಶ ಕೇಂದ್ರವು ಮಹಾರಾಷ್ಟ್ರದ ನವಿ ಮುಂಬೈನ ಖಾರ್ಘರ್‌ನಲ್ಲಿದೆ. ಮುಂಬೈನಲ್ಲಿ ಏನಾದರೂ ತುರ್ತು ಪರಿಸ್ಥಿತಿ ಎದುರಾದಾಗ, ಭುವನೇಶ್ವರದ ಈ ಕೇಂದ್ರವು ಬ್ಯಾಕ್-ಅಪ್ ಆಗಿ ಕಾರ್ಯನಿರ್ವಹಿಸುತ್ತದೆ.➤ ಕಳೆದ ವರ್ಷ ಗಡಿ ಉದ್ವಿಗ್ನತೆಯ ಸಮಯದಲ್ಲಿ ಪ್ರಮುಖ ಬ್ಯಾಂಕೊಂದು ತನ್ನ ದತ್ತಾಂಶ ಕೇಂದ್ರವನ್ನು ಜೈಪುರದಿಂದ ಮುಂಬೈಗೆ ಸ್ಥಳಾಂತರಿಸಿತ್ತು. ಇಂತಹ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಈ ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡಿದೆ.➤ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾಥಮಿಕ ದತ್ತಾಂಶ ಕೇಂದ್ರವು ಮಹಾರಾಷ್ಟ್ರದ ನವಿ ಮುಂಬೈನ ಖಾರ್ಘರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.