* ಮಂಗಳೂರು ವಿಶ್ವವಿದ್ಯಾನಿಲಯ (Mangalore University - MU) ಮತ್ತು ಯೆನೆಪೋಯ ಡೀಮ್ಡ್ ವಿಶ್ವವಿದ್ಯಾಲಯದ (Yenepoya (Deemed to be University)) ಸಂಶೋಧಕರು ಈ ಮಹತ್ವದ ಅಧ್ಯಯನವನ್ನು ನಡೆಸಿದ್ದಾರೆ.* ಯೆನೆಪೋಯ ಡೀಮ್ಡ್ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ರಣಜಿತ್ ದಾಸ್, ಮಂಗಳೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. M. S. ಮುಸ್ತಾಕ್ ಹಾಗೂ ಸಂಶೋಧಕ ಜೈಸನ್ ಜೀವನ್ ಸಿಕ್ವೇರಾ ಅವರ ನೇತೃತ್ವದಲ್ಲಿ ನಡೆಸಿದ ಜೀನೋಮಿಕ್ ಮಾದರಿ ಅಧ್ಯಯನದಲ್ಲಿ ಈ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಈ ಸಂಶೋಧನಾ ತಂಡದ ಸಮಗ್ರ ಅಧ್ಯಯನವು ಜೀವಶಾಸ್ತ್ರ ಕ್ಷೇತ್ರಕ್ಕೆ ಹೊಸ ವೈಜ್ಞಾನಿಕ ಅರಿವು ತಂದಿದೆ.* ಭಾರತೀಯ ಉಪಖಂಡದ ಆಧುನಿಕ ಜನಸಂಖ್ಯೆಗೆ ಮೂಲ ಕಾರಣವಾದ ಹಿಂದೆ ಗುರುತಿಸಲಾದ ಮೂರು ಆನುವಂಶಿಕ ಮೂಲಗಳ ಜೊತೆಗೆ, ಒಂದು ವಿಶಿಷ್ಟವಾದ ನಾಲ್ಕನೇ ಆನುವಂಶಿಕ ಮೂಲ ವಂಶವನ್ನು (Fourth Ancestral Component) ಸಂಶೋಧಕರು ಪತ್ತೆಹಚ್ಚಿದ್ದಾರೆ.* ಈ ಹಿಂದಿನ ಅಧ್ಯಯನಗಳು ಸಾಮಾನ್ಯವಾಗಿ ಭಾರತೀಯರಿಗೆ ಮೂರು ಪ್ರಮುಖ ಮೂಲಗಳನ್ನು ಸೂಚಿಸಿದ್ದವು:1.ಇರಾನಿನ ಪ್ರಸ್ಥಭೂಮಿಯ ಕೃಷಿಕರ ವಂಶ (Iranian Plateau farmer-related)2.ಪಾಂಟಿಕ್-ಕ್ಯಾಸ್ಪಿಯನ್ ಸ್ಟೆಪ್ಪೆ ಪಶುಪಾಲಕರ ವಂಶ (Pontic-Caspian Steppe pastoralist-related)3.ಅಂಡಮಾನೀಸ್ ಬೇಟೆಗಾರ-ಸಂಗ್ರಾಹಕರ ವಂಶ (Andamanese hunter-gatherer-related)* ಈ ಹೊಸ 'ಪ್ರೊಟೊ ದ್ರಾವಿಡಿಯನ್' ಆನುವಂಶಿಕ ಗುರುತನ್ನು ಮುಖ್ಯವಾಗಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವ ಕೊರಗ ಬುಡಕಟ್ಟು ಸಮುದಾಯದ ಆನುವಂಶಿಕ (ಜೀನೋಮ್) ಅಧ್ಯಯನದ ಆಧಾರದ ಮೇಲೆ ಗುರುತಿಸಲಾಗಿದೆ.* ಈ ಹೊಸ ಆನುವಂಶಿಕ ಮೂಲವು ಸುಮಾರು 4,400 ವರ್ಷಗಳ ಹಿಂದೆ, ಸಿಂಧೂ ಕಣಿವೆ ನಾಗರಿಕತೆಯ ಉದಯದ ಸಮಯದೊಂದಿಗೆ ಹೊಂದಿಕೆಯಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.* ಈ ವಂಶವು ಇರಾನಿನ ಪ್ರಸ್ಥಭೂಮಿ ಮತ್ತು ಸಿಂಧೂ ಕಣಿವೆಯ ನಡುವಿನ ಪ್ರದೇಶದಲ್ಲಿ ಹುಟ್ಟಿಕೊಂಡಿರಬಹುದು ಮತ್ತು ಇದು ಭಾರತದಲ್ಲಿ ಇಂಡೋ-ಯೂರೋಪಿಯನ್ ಭಾಷೆಗಳು ಹರಡುವ ಮೊದಲು ಅಸ್ತಿತ್ವದಲ್ಲಿದ್ದ ದ್ರಾವಿಡ ಭಾಷಾ ಹೃದಯಭಾಗಕ್ಕೆ (Dravidian heartland) ಬೆಂಬಲ ನೀಡುತ್ತದೆ.* ಈ ಅದ್ಭುತ ಸಂಶೋಧನೆಯ ವಿವರಗಳು ಯುರೋಪಿಯನ್ ಜರ್ನಲ್ ಆಫ್ ಹ್ಯೂಮನ್ ಜೆನೆಟಿಕ್ಸ್ (European Journal of Human Genetics - EJHG) ಎಂಬ ಪ್ರತಿಷ್ಠಿತ ನಿಯತಕಾಲಿಕದಲ್ಲಿ ಪ್ರಕಟಗೊಂಡಿದೆ.ಈ ಅಧ್ಯಯನವು ಭಾರತದ ಪ್ರಾಚೀನ ಮಾನವ ವಲಸೆ ಮತ್ತು ಜನಸಂಖ್ಯಾ ಇತಿಹಾಸದ ಬಗ್ಗೆ ಹೊಸ ಬೆಳಕನ್ನು ಚೆಲ್ಲುತ್ತದೆ.