Job Description: ➤ ಭಾರತ-ಮ್ಯಾನ್ಮಾರ್ ಗಡಿಭಾಗದಲ್ಲಿ ನಡೆಯುತ್ತಿರುವ ವನ್ಯಜೀವಿ ಕಳ್ಳಸಾಗಣೆಯನ್ನು ತಡೆಯಲು ನಾಗಾಲ್ಯಾಂಡ್‌ನ ಸಂಗತಂ (Sangtam) ಬುಡಕಟ್ಟು ಸಮುದಾಯವು ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಸಮುದಾಯದ ಅತ್ಯುನ್ನತ ಸಂಸ್ಥೆಯಾದ 'ಯುನೈಟೆಡ್ ಸಂಗತಂ ಲಿಖುಮ್ ಪುಮ್ಜಿ' (USLP), ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಕಿಫಿರೆ ಮತ್ತು ತುಯೆನ್ಸಾಂಗ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಳಿವಿನ ಅಂಚಿನಲ್ಲಿರುವ ಪ್ಯಾಂಗೋಲಿನ್ (ಚಿಪ್ಪುಹಂದಿ) ರಕ್ಷಣೆಗೆ ಶಪಥ ಮಾಡಿದೆ. ಕಳ್ಳಸಾಗಣೆಯ ಪ್ರಮುಖ ಮಾರ್ಗಗಳಾಗಿರುವ ಈ ಪ್ರದೇಶಗಳಲ್ಲಿ ಸಮುದಾಯವೇ ನೇರವಾಗಿ ಸಂರಕ್ಷಣೆಗೆ ಮುಂದಾಗಿರುವುದು ವನ್ಯಜೀವಿ ತಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ.➤ ಪ್ಯಾಂಗೋಲಿನ್ ಅಥವಾ ಚಿಪ್ಪುಹಂದಿಗಳು ಜಗತ್ತಿನಲ್ಲಿಯೇ ಅತಿ ಹೆಚ್ಚು ಕಳ್ಳಸಾಗಣೆಗೆ ಒಳಗಾಗುವ ಸಸ್ತನಿಗಳಾಗಿವೆ. ಇವುಗಳ ಮಾಂಸ ಮತ್ತು ಔಷಧೀಯ ಗುಣ ಹೊಂದಿವೆ ಎನ್ನಲಾದ ಇವುಗಳ 'ಚಿಪ್ಪು'ಗಳಿಗಾಗಿ (Scales) ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಭಾರತ ಮತ್ತು ಮ್ಯಾನ್ಮಾರ್ ನಡುವಿನ 1,643 ಕಿಮೀ ಉದ್ದದ ಮುಕ್ತ ಗಡಿಯು ಇವುಗಳ ಸಾಗಣೆಗೆ ಕಾರಿಡಾರ್ ಆಗಿ ಬಳಕೆಯಾಗುತ್ತಿದೆ.➤ ವನ್ಯಜೀವಿ ತಜ್ಞರ ಪ್ರಕಾರ, ಈ ನಿರ್ಣಯವು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ (WTI) ನಡೆಸುತ್ತಿರುವ 'ಪ್ಯಾಂಗೋಲಿನ್ ಕಳ್ಳಸಾಗಣೆ ತಡೆ ಯೋಜನೆ'ಯ (Countering Pangolin Trafficking Project) ಒಂದು ದೊಡ್ಡ ಯಶಸ್ಸಾಗಿದೆ. ಈ ಯೋಜನೆಗೆ 'ಪ್ಯಾಂಗೋಲಿನ್ ಕ್ರೈಸಿಸ್ ಫಂಡ್' (Pangolin Crisis Fund) ಬೆಂಬಲ ನೀಡುತ್ತಿದೆ.➤ ಈ ಹಿಂದೆ ಮಣಿಪುರದ ಉಖ್ರುಲ್ ಜಿಲ್ಲೆಯ 'ತಂಗ್ಖುಲ್ ನಾಗಾ ಅವಂಗ ಲಾಂಗ್' ಸಮುದಾಯವೂ ಇದೇ ರೀತಿಯ ನಿರ್ಣಯ ಕೈಗೊಂಡಿತ್ತು. ಈಗ ಸಂಗತಂ ಸಮುದಾಯವು ಅದನ್ನು ಅನುಸರಿಸುವ ಮೂಲಕ ಈ ಭಾಗದಲ್ಲಿ ಸಂರಕ್ಷಣಾ ಕಾರ್ಯಕ್ಕೆ ಬಲ ತುಂಬಿದೆ.➤ ನಾಗಾಲ್ಯಾಂಡ್‌ನಂತಹ ರಾಜ್ಯಗಳಲ್ಲಿ ಸಾಂಪ್ರದಾಯಿಕ ಆಡಳಿತ ಮಂಡಳಿಗಳು (Village Councils) ಬಲಿಷ್ಠವಾಗಿವೆ. ಇಂತಹ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ವನ್ಯಜೀವಿ ರಕ್ಷಣೆಗೆ ಮುಂದಾಗಿರುವುದು ಕೇವಲ ಕಾನೂನಿನ ಮೂಲಕ ಸಂರಕ್ಷಣೆ ಮಾಡುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಇದು 'ಸಮುದಾಯ ಮಾಲೀಕತ್ವದ ಸಂರಕ್ಷಣೆ'ಗೆ ಮಾದರಿಯಾಗಿದೆ