* ರಾಜ್ಯ ಪೊಲೀಸ್ ಇಲಾಖೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು "ಮನೆ-ಮನೆಗೆ ಪೊಲೀಸ್‌" ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ.* ಗೋವಿಂದರಾಜನಗರದ ಎಂ.ಸಿ.ಲೇಔಟ್‌ನಲ್ಲಿ ಇಂದು(ಜುಲೈ 18) ಗೃಹ ಸಚಿವ ಜಿ. ಪರಮೇಶ್ವರ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.* ಈ ಅಭಿಯಾನದ ಮೂಲಕ ಅಪರಾಧ ನಿಯಂತ್ರಣದ ಜೊತೆಗೆ ಸಾರ್ವಜನಿಕರಲ್ಲಿ ಭದ್ರತೆ ಮತ್ತು ವಿಶ್ವಾಸವನ್ನು ಹೆಚ್ಚಿಸುವುದು ಉದ್ದೇಶವಾಗಿದೆ. ಮನೆಯವರೊಂದಿಗೆ ನೇರ ಸಂಪರ್ಕ ಸಾಧಿಸುವ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಕೇಳಿ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ.* ಪೊಲೀಸ್ ಠಾಣೆ ವ್ಯಾಪ್ತಿಯನ್ನು ಬೀಟ್‌ಗಳಾಗಿ ಮತ್ತು ಸಬ್‌ಬೀಟ್‌ಗಳಾಗಿ ವಿಂಗಡಿಸಿ, ಪ್ರತಿ 40-50 ಮನೆಗಳ ಗುಚ್ಛಕ್ಕೆ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಮೇಲ್ವಿಚಾರಣೆಗೆ ಎಎಸ್‌ಐ ಮತ್ತು ಪಿಎಸ್‌ಐ ಅಧಿಕಾರಿಗಳು ಹೊಣೆವಹಿಸಲಿದ್ದಾರೆ.* ಮಹಿಳಾ ಪೊಲೀಸ್ ಸಿಬ್ಬಂದಿ ಮಹಿಳೆಯರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಲಿದ್ದಾರೆ. ಜಾಗೃತಿ ಕಾರ್ಯಕ್ರಮಗಳ ಮೂಲಕ ಕೌಟುಂಬಿಕ ದೌರ್ಜನ್ಯ, ತುರ್ತು ಸಂಪರ್ಕ ಸಂಖ್ಯೆಗಳು ಮತ್ತು ಡ್ರಗ್ಸ್‌ನ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.