* ಮೈಸೂರು ದಸರಾದ ಜಂಬೂ ಸವಾರಿಯ ಪ್ರಮುಖ ಘಟ್ಟವಾದ ಜಂಬೂಸವಾರಿ ಮೂರು ಗಂಟೆಗೂ ಹೆಚ್ಚು ಕಾಲ ಅಂಬಾರಿ ಬಗೆಬಗೆಯ ಕಲಾ ತಂಡಗಳು, ಕರ್ನಾಟಕದ ಜಿಲ್ಲೆಗಳ ಮಹತ್ವ ಸಾರುವ ಸ್ಥಬ್ಧಚಿತ್ರಗಳು, ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿ ಬಂದ ಅಭಿಮನ್ಯುವಿನ ನೇತೃತ್ವದಲ್ಲಿ ನಡೆಯಿತು.* ಮೈಸೂರಿನಲ್ಲಿ ನಡೆದಿರುವ ಜಂಬೂ ಸವಾರಿ ಮೆರವಣಿಗೆ ಕನ್ನಡದ ಭವ್ಯ ಸಂಸ್ಕೃತಿಯನ್ನು ಅನಾವರಣಗೊಳಿಸಿದರೆ ಮತ್ತೊಂದು ಕಡೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಕಾದಿದ್ದ ಸಹಸ್ರಾರು ಜನರಲ್ಲಿ ಸಂತೃಪ್ತಿಯ ಭಕ್ತಿಯ ಭಾವವೂ ಮೂಡಿತು. ಐದು ಲಕ್ಷಕ್ಕೂ ಅಧಿಕ ಜನ ಈ ಬಾರಿ ಜಂಬೂ ಸವಾರಿಯನ್ನು ನೇರವಾಗಿಯೇ ಕಣ್ತುಂಬಿಕೊಂಡರು.* ಇನ್ನು ಇಡೀ ಮೆರವಣಿಗೆಯಲ್ಲಿ ಪೊಲೀಸ್‌ ಪಡೆಗಳೂ ಹೆಜ್ಜೆಹಾಕಿದವು. ಮೈಸೂರಿನ ನಗರ ಪೊಲೀಸ್‌, ಜಿಲ್ಲಾ ಪೊಲೀಸ್‌, ಮೀಸಲು ಪಡೆ, ಅಶ್ವರೋಹಿ ಪಡೆ, ಸಂಗೀತ ಪಡೆ, ಮಹಿಳಾ ಪಡೆ ಸೇರಿ ಹಲವು ಪಡೆಗಳು ಪರೇಡ್‌ ನಡೆಸುತ್ತಲೇ ಗಣರಾಜ್ಯೋತ್ಸವ ದಿನದ ಮೆರವಣಿಗೆ ನೆನಪು ಮಾಡಿದವು.* ಜಿಲ್ಲೆಗಳ ಜತೆಯಲ್ಲಿ ಸರ್ಕಾರಿ ಇಲಾಖೆಗಳು, ನಿಗಮ, ಮಂಡಳಿಗಳನ್ನು ಒಳಗೊಂಡ 49 ಸ್ಥಬ್ಧಚಿತ್ರಗಳು ಗಮನ ಸೆಳೆದವು. ಬಹುತೇಕ ಸಂಸ್ಕೃತಿ ಮಹತ್ವ ತಿಳಿಸಿಕೊಡುವ, ಧರ್ಮಗುರುಗಳು, ದಾರ್ಶನಿಕರು, ಪ್ರವಾಸಿ ಸ್ಥಳ, ದೇಗುಲಗಳ, ಅರಣ್ಯ, ವನ್ಯಜೀವಿ ಸೇರಿ ವಿಭಿನ್ನ ವಿಷಯದ ಮಾಹಿತಿ ಪೂರ್ಣ ಸ್ಥಬ್ಧ ಚಿತ್ರಗಳೇ ಆಗಿದ್ದವು.