* ಮೈಸೂರಿನ ಎಸ್ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ 'ಎಸ್ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ' ಪ್ರಶಸ್ತಿಯನ್ನು ಖ್ಯಾತ ಮರಾಠಿ ಅನುವಾದಕಿ ಹಾಗೂ ಲೇಖಕಿ ಉಮಾ ಕುಲಕರ್ಣಿ ಅವರಿಗೆ ಜ.19 (ಭಾನುವಾರ) ರಂದು ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.* ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುಣೆಯ ಲೇಖಕಿ ಉಮಾ ಕುಲಕರ್ಣಿ ಅವರಿಗೆ ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪ ಪ್ರಶಸ್ತಿ ಪ್ರದಾನ ಮಾಡಿದರು.* ಈ ಪ್ರಶಸ್ತಿಯು ರೂ. 1 ಲಕ್ಷ ನಗದು ಬಹುಮಾನ ಹಾಗೂ ಡಾ.ಭೈರಪ್ಪ ಅವರು ಸಹಿ ಇರುವ ಪ್ರಮಾಣ ಪತ್ರವನ್ನು ಒಳಗೊಂಡಿದೆ.* ಬೆಳಗಾವಿ ಮೂಲದ ಮತ್ತು ಪುಣೆ ನಿವಾಸಿಯಾಗಿರುವ ಉಮಾ ಕುಲಕರ್ಣಿ ಅವರು 55 ಕ್ಕೂ ಹೆಚ್ಚು ಕೃತಿಗಳನ್ನು ಹೊಂದಿದ್ದಾರೆ ಮತ್ತು ಡಾ. ಎಸ್ಎಲ್ ಭೈರಪ್ಪ ಅವರ ಅನೇಕ ಶ್ರೇಷ್ಠ ಕೃತಿಗಳನ್ನು ಮರಾಠಿಗೆ ಅನುವಾದಿಸಿದ್ದಾರೆ.* ಉಮಾ ಕುಲಕರ್ಣಿ ಅವರು ‘ಭೈರಪ್ಪ ಅವರ ‘ವಂಶವೃಕ್ಷ’ ಕಾದಂಬರಿ ಅನುವಾದ ಮಾಡುವಾಗ ನಾನು ಕಣ್ಣೀರು ಹಾಕಿದ್ದೂ ಇದೆ. ಕೆಲವು ಕಾದಂಬರಿಗಳು ಆನಂದ ಕೊಟ್ಟಿದ್ದೂ ಇದೆ. ‘ಮಂದ್ರ’ ಕಾದಂಬರಿ ಅನುವಾದ ಮಾಡುವಾಗ ಪದಗಳ ಭಾಷಾಂತರ ಕಷ್ಟವಾಗಿತ್ತು. ಆದರೂ ಮೂಲ ಕಥೆಗೆ ಧಕ್ಕೆಯಾಗದ ರೀತಿಯಲ್ಲಿ, ಮರಾಠಿ ಓದುಗರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಕಟ್ಟಿಕೊಟ್ಟಿದ್ದೇನೆ’ ಎಂದು ಹೇಳಿದರು.* ಲೇಖಕಿ ಸಹನಾ ವಿಜಯಕುಮಾರ್, ‘ಭೈರಪ್ಪ ಅವರನ್ನು ಮರಾಠಿ ಓದುಗರಿಗೆ ತಲುಪಿಸಿದ ಶ್ರೇಯಸ್ಸು ಉಮಾ ಕುಲಕರ್ಣಿ ಅವರಿಗೆ ಸಲ್ಲುತ್ತದೆ. ಕನ್ನಡದ ನಂತರ ಮರಾಠಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಭೈರಪ್ಪ ಹೊಂದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. * ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರು ತಮ್ಮ ಕೃತಿಯನ್ನು ಮರಾಠಿ ಓದುಗರಿಗೆ ತಲುಪಿಸಿದಕ್ಕಾಗಿ ಧನ್ಯವಾದ ತಿಳಿಸಿದರು. ಲೇಖಕಿಯರಾದ ಅಂಜಲಿ ಜೋಶಿ, ಉಮಾ ರಾಮರಾವ್, ಭೈರಪ್ಪ ಅವರ ಪತ್ನಿ ಸರಸ್ವತಿ, ಪ್ರತಿಷ್ಠಾನದ ಟ್ರಸ್ಟಿ ಉದಯಶಂಕರ್, ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ.ಜಿ.ಎಲ್. ಶೇಖರ್ ಹಾಗೂ ಸಾಹಿತ್ಯ ಭಂಡಾರದ ರಾಜ ಅವರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.