* ಈ ವರ್ಷದ ಉತ್ತಮ ಮುಂಗಾರಿನ ನಿರೀಕ್ಷೆಯ ನಡುವೆ ರೈತರಲ್ಲಿ ಸಂತಸ ಮೂಡಿದೆ. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ "ವಿಕಸಿತ ಕೃಷಿ ಸಂಕಲ್ಪ ಅಭಿಯಾನ" ಎಂಬ ಹೊಸ ಕಾರ್ಯಕ್ರಮ ರೂಪಿಸಿದ್ದು, ಮೇ 29ರಿಂದ ಜೂನ್ 12 ರವರೆಗೆ ಕೊಡಗು ಜಿಲ್ಲೆಯಲ್ಲಿ ಈ ಅಭಿಯಾನ ನಡೆಯಲಿದೆ.* ಕೃಷಿ ಸಂಶೋಧನೆ ಮತ್ತು ರೈತರ ನಡುವೆ ಇರುವ ಅಂತರ ಕಡಿಮೆ ಮಾಡುವುದು ನೂತನ ತಂತ್ರಜ್ಞಾನ, ಹೊಸ ತಳಿಗಳು, ನಿಖರ ಹವಾಮಾನ ಮಾಹಿತಿ, ಮತ್ತು ಸರಕಾರದ ಯೋಜನೆಗಳ ಮಾಹಿತಿ ರೈತರಿಗೆ ನೇರವಾಗಿ ನೀಡುವುದು ಮತ್ತು ರೈತರ ಪ್ರತಿಕ್ರಿಯೆ ಸಂಗ್ರಹಿಸಿ, ಅದನ್ನು ಮುಂದಿನ ಸಂಶೋಧನೆ ಹಾಗೂ ಪ್ರಸಾರದ ಭಾಗವಾಗಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.* ಮಡಿಕೇರಿ, ಗೋಣಿಕೊಪ್ಪಲು, ವಿರಾಜಪೇಟೆ ಸೇರಿದಂತೆ ಹಲವು ಹೋಬಳಿ-ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಪೂರ್ವ ಮಾಹಿತಿ ನೀಡಲಾಗುತ್ತದೆ.* ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಬೆಳೆ, ಮಣ್ಣು, ಹವಾಮಾನ, ಮಾರುಕಟ್ಟೆ ಬೇಡಿಕೆ ಇತ್ಯಾದಿಗಳ ಆಧಾರದ ಮೇಲೆ ಸಲಹೆ ನೀಡಲಾಗುತ್ತದೆ. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಲು ಈ ಅಭಿಯಾನ ನೆರವಾಗಲಿದೆ.* ಸಣ್ಣ ರೈತರಿಗೆ ತಂತ್ರಜ್ಞಾನ ತಲುಪುವಂತೆ ಮಾಡುವ, ಕೃಷಿಯ ಉತ್ಪಾದನೆ ಮತ್ತು ಲಾಭ ಹೆಚ್ಚಿಸಲು ಸಹಾಯ ಮಾಡುವ ಈ ಅಭಿಯಾನ ಕೃಷಿಯಲ್ಲಿ ನೂತನ ಅಲೆಯನ್ನು ತರಲಿದೆ.