* ಭಾರತದಲ್ಲಿ ಪ್ರತಿ ವರ್ಷ ಜುಲೈ 22 ರಂದು ರಾಷ್ಟ್ರೀಯ ಧ್ವಜ ದಿನವನ್ನು ಆಚರಿಸಲಾಗುತ್ತದೆ. * ಜುಲೈ 22 ನಮ್ಮ ಸಂವಿಧಾನವು ಸ್ವರಾಜ್ಯ ಧ್ವಜ ತಿರಂಗಾವನ್ನು ಭಾರತದ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಿದ ದಿನ. 1947ರ ಜುಲೈ 22ರಂದು ಭಾರತದ ಸಂವಿಧಾನ ಸಭೆಯಲ್ಲಿ ಪ್ರಸ್ತುತ ನಾವು ಬಳಕೆ ಮಾಡುತ್ತಿರುವ ತ್ರಿವರ್ಣ ಧ್ವಜವನ್ನು ನಮ್ಮ ದೇಶದ ಅಧಿಕೃತ ಧ್ವಜವನ್ನಾಗಿ ಅಂಗೀಕಾರ ಮಾಡಲಾಯಿತು.* ಕೇಸರಿ, ಬಿಳಿ, ಹಸಿರು ಬಣ್ಣಗಳ ನಡುವೆ ಚಕ್ರವನ್ನು ಒಳಗೊಂಡ ತ್ರಿವರ್ಣ ಧ್ವಜವನ್ನು ಪಿಂಗಳಿ ವೆಂಕಯ್ಯ ಅವರು ರಚಿಸಿದ್ದಾರೆ. 1923 ಏಪ್ರಿಲ್ 13ರಂದು ಈ ಧ್ವಜವು ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಸ್ಮರಣೆಯ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಆರೋಹಣವಾಯಿತು. * ಈ ಧ್ವಜಕ್ಕೆ ಸ್ವರಾಜ್ ಧ್ವಜ ಎಂದು ಕರೆಯಲಾಗುತ್ತಿದ್ದು, ಸ್ವರಾಜ್ಯಕ್ಕಾಗಿ ಭಾರತದ ಬೇಡಿಕೆಯ ಪ್ರತೀಕವಾಗಿಯೂ ಭಾರತೀಯ ನ್ಯಾಷನಲ್ ಕಾಂಗ್ರೆಸ್ ಈ ಧ್ವಜವನ್ನು ಬಳಕೆ ಮಾಡಿತು. * 1931ರಲ್ಲಿ ತಿರಂಗಾ ವನ್ನು ಭಾರತದ ರಾಷ್ಟ್ರ ಧ್ವಜ ವನ್ನಾಗಿ ಅಂಗೀಕರಿಸಲಾಯಿತು. 1947 ಜುಲೈ 22 ರಂದು ಭಾರತದ ಸಂವಿಧಾನ ಅಧಿಕೃತವಾಗಿ ಇದನ್ನು ರಾಷ್ಟ್ರಧ್ವಜ ವನ್ನಾಗಿ ಅಂಗೀಕರಿಸಿತು. ವೆಂಕಯ್ಯ ಅವರು ಮೂರು ಬಣ್ಣಗಳ ನಡುವೆ ಚಿತ್ರಿಸಿದ್ದ ಚಕ್ರಕ್ಕೆ ಬದಲಾಗಿ ಅಶೋಕ ಚಕ್ರವನ್ನು ಬಳಕೆ ಮಾಡಲಾಯಿತು.* ವೆಂಕಯ್ಯ ಅವರು ಆಂಧ್ರಪ್ರದೇಶದ ಮಚಲಿಪಟ್ಟಣಂ ಬಳಿಯ ಗ್ರಾಮದವರು. ಪಿಂಗಳಿ ವೆಂಕಯ್ಯನವರು ತಮ್ಮ 19ನೇ ವಯಸ್ಸಿನಲ್ಲಿ ಆಂಗ್ಲೋ-ಬೋರ್ ಯುದ್ಧದಲ್ಲಿಯೂ ಪಾಲ್ಗೊಂಡಿದ್ದರು. * ತ್ರಿವರ್ಣ ಧ್ವಜದ ಅರ್ಥ - ಕೇಸರಿ : ಧ್ವಜದ ಮೇಲ್ಬಾಗದಲ್ಲಿ ಕೇಸರಿ ಬಣ್ಣವಿದ್ದು, ಇದು ಧೈರ್ಯ, ತ್ಯಾಗ ಮತ್ತು ದೇಶದ ಹಿತಕ್ಕಾಗಿ ನಡೆಯುವ ಬಲಿದಾನಗಳನ್ನು ಪ್ರತಿನಿಧಿಸುತ್ತದೆ.- ಬಿಳಿ : ಮಧ್ಯ ಭಾಗದಲ್ಲಿರುವ ಬಿಳಿ ಬಣ್ಣವು ಸತ್ಯ, ಶಾಂತಿ ಮತ್ತು ಶುದ್ಧತೆಯ ಪ್ರತೀಕವಾಗಿದೆ.- ಹಸಿರು : ಕೆಳ ಭಾಗದಲ್ಲಿರುವ ಹಸಿರು ಬಣ್ಣ ಪ್ರಗತಿ, ಸಮೃದ್ಧಿಯ ಸಂಕೇತವಾಗಿದೆ.- ಅಶೋಕ ಚಕ್ರ : ಈ ಚಕ್ರವು ಧರ್ಮವನ್ನು ಪ್ರತಿನಿಧಿಸಿದರೆ, ಇದರಲ್ಲಿರುವ 24 ಗೆರೆಗಳು ನಮ್ಮಲ್ಲಿರುವ ವಿವಿಧ ಆಚರಣೆ, ಸಂಸ್ಕೃತಿ, ವಿವಿಧತೆಯಂತಹ ಬಹುತ್ವದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ.