➤1780 ಜನವರಿ 29ರಂದು ಭಾರತದ ಮೊದಲ ವೃತ್ತಪತ್ರಿಕೆ ‘ದಿ ಬೆಂಗಾಲ್ ಗೆಜೆಟ್’ ಪ್ರಕಟಗೊಂಡಿತ್ತು. ಪ್ರತಿ ವರ್ಷ ಮೊದಲ ಪತ್ರಿಕೆ ಆರಂಭವಾದ ದಿನವನ್ನು ಜನವರಿ 29 ಅನ್ನು ಭಾರತೀಯ ಸುದ್ದಿ ಪತ್ರಿಕೆ ದಿನವನ್ನಾಗಿ ಆಚರಿಸಲಾಗುತ್ತದೆ.➤ ಭಾರತದ ಮೊದಲ ಸುದ್ದಿಪತ್ರಿಕೆಯಾದ ಬೆಂಗಾಲ್ ಗೆಜೆಟ್ ಪತ್ರಿಕೆಯನ್ನು ಜೇಮ್ಸ್‌ ಆಗಸ್ಟಸ್‌ ಹಿಕ್ಕಿ ಅವರು ಆರಂಭಿಸಿದರು. ಈ ಸುದ್ದಿ ಪತ್ರಿಕೆಯನ್ನು ಹಿಕ್ಕಿ ಗೆಜೆಟ್ ಅಥವಾ ದಿ ಕಲ್ಕತ್ತಾ ಜನರಲ್ ಅಡ್ವರ್ಟೈಸರ್ ಎಂದೂ ಕರೆಯಲಾಗುತ್ತದೆ. ಮೊದಲ ಪತ್ರಿಕೆ ಆರಂಭಿಸಿದ ಹಿಕ್ಕಿಯನ್ನೇ ಭಾರತೀಯ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗಿದೆ. ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿಯ ಸಮನ್ಸ್ ಪ್ರಕಾರ ಮೊದಲ ಪತ್ರಿಕೆ ಆರಂಭವಾದ ದಿನವನ್ನು ಪ್ರತಿ ವರ್ಷ ಭಾರತೀಯ ಸುದ್ದಿ ಪತ್ರಿಕೆ ದಿನವನ್ನಾಗಿ ಆಚರಿಸಲಾಗುತ್ತದೆ.➤ ಜನವರಿ 29 ರಂದು ಆಚರಿಸಲಾಗುವ ಭಾರತೀಯ ವೃತ್ತಪತ್ರಿಕೆ ದಿನವು ಮುದ್ರಣ ಮಾಧ್ಯಮ ಕ್ಷೇತ್ರವನ್ನು ಗೌರವಿಸುವ ದಿನವಾಗಿದೆ. ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉತ್ತೇಜಿಸುವಲ್ಲಿ ಪತ್ರಕರ್ತರ ಕೊಡುಗೆಗಳನ್ನು ಗುರುತಿಸುವ ದಿನ ಇದಾಗಿದೆ.➤ ಕೆಲವರ ದಿನ ಆರಂಭವಾಗುವುದೇ ದಿನ ಪತ್ರಿಕೆಯನ್ನು ಓದುವ ಮೂಲಕ. ಕೈಯಲ್ಲಿ ಒಂದು ಕಪ್ ಕಾಫಿ ಅಥವಾ ಟೀ ಜೊತೆಗೆ ದಿನಪತ್ರಿಕೆಯಿದ್ದರೆ ಸುದ್ದಿಯನ್ನು ಓದುತ್ತಾ ಓದುಗರು ತಮ್ಮ ದಿನವನ್ನು ಆರಂಭಿಸುತ್ತಾರೆ. ರಾಜ್ಯ, ದೇಶ, ವಿದೇಶಗಳಲ್ಲಿ ನಡೆಯುವ ಸುದ್ದಿಗಳನ್ನು ಜನರಿಗೆ ತಲುಪಿಸುವ ದಿನ ಪತ್ರಿಕೆಗಳು ಇವತ್ತಿಗೂ ನಂಬಿಕೆಗೆ ಅರ್ಹವಾಗಿದೆ.➤ ಸಮಾಜವನ್ನು ಜಾಗೃತಗೊಳಿಸುವಲ್ಲಿ ಗಣನೀಯ ಕೊಡುಗೆ ನೀಡಿದ ಎಲ್ಲ ಪತ್ರಕರ್ತರನ್ನು ನೆನಪಿಸಲಾಗುತ್ತದೆ. ಈ ದಿನದಂದು ಪತ್ರಕರ್ತರ ಹಕ್ಕುಗಳು ಮತ್ತು ಸುರಕ್ಷತೆಯ ಬಗ್ಗೆ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತದೆ. ಈ ದಿನದಂದು ಶಾಲಾ ಮಕ್ಕಳಿಗೆ, ಯುವಕರಿಗೆ ಪತ್ರಿಕೋದ್ಯಮದ ಮಹತ್ವ ಮತ್ತು ಇತಿಹಾಸದ ತಿಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.➤ ಕರ್ನಾಟಕದ ಪತ್ರಿಕೋದ್ಯಮ: ಕನ್ನಡದ ಮೊಟ್ಟಮೊದಲ ಪತ್ರಿಕೆಯಾದ 'ಮಂಗಳೂರು ಸಮಾಚಾರ' (Mangalore Samachara) 1843ರಲ್ಲಿ ಜನ್ಮತಾಳಿತು.- ಸ್ಥಾಪಕರು: ಬಾಸೆಲ್ ಮಿಷನ್‌ನ ಜರ್ಮನ್ ಪಾದ್ರಿ ಹರ್ಮನ್ ಮೊಗ್ಲಿಂಗ್ (Hermann Mogling).- ಪ್ರಾರಂಭ: ಜುಲೈ 1, 1843 ರಂದು ಮಂಗಳೂರಿನಲ್ಲಿ ಪ್ರಾರಂಭವಾಯಿತು.- ಈ ಪತ್ರಿಕೆಯು ಕೇವಲ ಧಾರ್ಮಿಕ ವಿಷಯಗಳಿಗೆ ಸೀಮಿತವಾಗದೆ, ಸ್ಥಳೀಯ ಸುದ್ದಿಗಳು, ಶೈಕ್ಷಣಿಕ ವಿಚಾರಗಳು ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಒಳಗೊಂಡಿತ್ತು. ಇದು ಕಲ್ಲಿನ ಅಚ್ಚಿನಲ್ಲಿ (Lithography) ಮುದ್ರಿತವಾಗುತ್ತಿತ್ತು.- ಸ್ಥಳಾಂತರ: ನಂತರ ಇದು ಬೆಳಗಾವಿಗೆ ಸ್ಥಳಾಂತರಗೊಂಡು 'ಕನ್ನಡ ಸಮಾಚಾರ' ಎಂದು ಮರುನಾಮಕರಣಗೊಂಡಿತು.