➤ ವಾಷಿಂಗ್ಟನ್:  ವಾತಾವರಣದ 'ಸೂಪರ್ ಮಾಲಿನ್ಯಕಾರಕಗಳು' ಮತ್ತು 'ಕಂದು ಮೋಡಗಳ' ಕುರಿತ ಕ್ರಾಂತಿಕಾರಿ ಸಂಶೋಧನೆಗಾಗಿ ಭಾರತೀಯ ಮೂಲದ ಖ್ಯಾತ ಹವಾಮಾನ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್, ಭೂವಿಜ್ಞಾನದ 'ನೊಬೆಲ್' ಎಂದೇ ಪರಿಗಣಿಸಲಾಗುವ 2026ರ ಸಾಲಿನ ಪ್ರತಿಷ್ಠಿತ 'ಕ್ರಾಫೋರ್ಡ್ ಪ್ರಶಸ್ತಿ'ಯನ್ನು ಘೋಷಿಸಿದೆ.➤ ವೀರಭದ್ರನ್ ರಾಮನಾಥನ್: ತಮಿಳುನಾಡಿನ ಮದುರೈನಲ್ಲಿ ಜನಿಸಿದ ರಾಮನಾಥನ್ ಅವರು ಪ್ರಾಥಮಿಕ ಶಿಕ್ಷಣದ ನಂತರ ಕರ್ನಾಟಕದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.- ಇವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಎಂ.ಇ (M.E) ಪದವಿ ಪಡೆದಿದ್ದಾರೆ. ಅದಕ್ಕೂ ಮುನ್ನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು.- ಸಿಕಂದರಾಬಾದ್‌ನ ರೆಫ್ರಿಜಿರೇಟರ್ ಕಾರ್ಖಾನೆಯಲ್ಲಿ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದ ಇವರು, ನಂತರ ಅಮೆರಿಕದ ನಾಸಾ (NASA) ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇರಿಕೊಂಡರು.- ಪ್ರಮುಖ ಸಂಶೋಧನೆ (1975): ಅಲ್ಲಿಯವರೆಗೆ ಜಗತ್ತು ಕೇವಲ ಕಾರ್ಬನ್ ಡೈಆಕ್ಸೈಡ್ (CO2) ಮಾತ್ರ ಭೂಮಿಯ ತಾಪಮಾನ ಹೆಚ್ಚಿಸುತ್ತದೆ ಎಂದು ನಂಬಿತ್ತು. ಆದರೆ, ರೆಫ್ರಿಜಿರೇಟರ್‌ಗಳಲ್ಲಿ ಬಳಸುವ ಕ್ಲೋರೋಫ್ಲೋರೋ ಕಾರ್ಬನ್ (CFCs) ಅನಿಲವು CO2 ಗಿಂತ 10,000 ಪಟ್ಟು ಹೆಚ್ಚು ಅಪಾಯಕಾರಿ ಎಂದು ರಾಮನಾಥನ್ ಸಾಬೀತುಪಡಿಸಿದರು.➤ ರಾಮನಾಥನ್ ಅವರು ನಡೆಸಿದ ಇಂಡಿಯನ್ ಓಷನ್ ಎಕ್ಸ್‌ಪೆರಿಮೆಂಟ್ (INDOEX) ಸಂಶೋಧನೆಯು ದಕ್ಷಿಣ ಏಷ್ಯಾದ ಮೇಲೆ ಕಂಡುಬರುವ 'ಕಂದು ಮೋಡಗಳ' ಬಗ್ಗೆ ಎಚ್ಚರಿಸಿತ್ತು.ಈ ಮೋಡಗಳು ಭಾರತದ ಮಾನ್ಸೂನ್ ಮಾರುತಗಳನ್ನು ದುರ್ಬಲಗೊಳಿಸುತ್ತಿವೆ. ಹಿಮಾಲಯದ ಹಿಮನದಿಗಳು (Glaciers) ವೇಗವಾಗಿ ಕರಗಲು ಕಾರಣವಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.➤ ಇವರ ಸಂಶೋಧನೆಗಳ ಆಧಾರದ ಮೇಲೆ ವಿಶ್ವದಾದ್ಯಂತ CFC ಬಳಕೆಯನ್ನು ನಿಷೇಧಿಸುವ 'ಮಾಂಟ್ರಿಯಲ್ ಪ್ರೋಟೋಕಾಲ್' ಎಂಬ ಐತಿಹಾಸಿಕ ಒಪ್ಪಂದಕ್ಕೆ ಭದ್ರ ಬುನಾದಿ ದೊರೆಯಿತು. ಅಲ್ಲದೆ, ಇವರು ವ್ಯಾಟಿಕನ್ ಸಿಟಿಯ ಪೋಪ್ ಮತ್ತು ಜಾಗತಿಕ ನಾಯಕರಿಗೆ ಹವಾಮಾನ ಬದಲಾವಣೆಯ ನೈತಿಕ ಹೊಣೆಗಾರಿಕೆಯ ಬಗ್ಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ