* ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಕೊಡಮಾಡುವ 'ಡಾ. ರಾಜ್‌ಕುಮಾರ್ ಸಾಂಸ್ಕೃತಿಕ ದತ್ತಿ ಪ್ರಶಸ್ತಿ'ಗೆ ಹಿರಿಯ ಕಲಾವಿದ ಎಂ.ಎಸ್. ಉಮೇಶ್ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.* ವರನಟ ಡಾ. ರಾಜ್‌ಕುಮಾರ್ ಅವರು ತಮಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ ಅದರ ಸಂಪೂರ್ಣ ಮೊತ್ತವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪಿಸಿದರು. ನಂತರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ ಅವರು ಈ ದತ್ತಿನಿಧಿಗೆ ಇನ್ನಷ್ಟು ಮೊತ್ತವನ್ನು ಸೇರಿಸಿದ್ದರು.* ತೊಟ್ಟಿಲ ಮಗುವಾಗಿದ್ದಾಗಲೇ ರಂಗಭೂಮಿ ಪ್ರವೇಶಿಸಿದ ಉಮೇಶ್ ಅವರು ಕೆ. ಹಿರಣ್ಣಯ್ಯ ಮಿತ್ರ ಮಂಡಲಿ, ಗುಬ್ಬಿ ಕಂಪನಿಯಲ್ಲಿ ಬಾಲನಟರಾಗಿ ಪ್ರಸಿದ್ಧಿ ಪಡೆದಿದ್ದರು.* ಪುಟ್ಟಣ್ಣ ಕಣಗಾಲ್ ಅವರ 'ಕಥಾ ಸಂಗಮ' ಮೂಲಕ ಬೆಳ್ಳಿತೆರೆಗೆ ಮರಳಿ ಈವರೆಗೂ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ಹೆಸರು ತಂದುಕೊಟ್ಟದ್ದು ಹಾಸ್ಯ ಪಾತ್ರಗಳು. ರಾಜ್‌ಕುಮಾರ್ ಅವರೊಂದಿಗೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. * ಇವರ 'ಸೀತಾಪತಿ ಸಿಟಿ ಲೈಫ್' ಧಾರಾವಾಹಿ ರಾಜ್‌ಕುಮಾರ್ ಅಚ್ಚುಮೆಚ್ಚಾಗಿತ್ತು. ಹಾರ್ಮೋನಿಯಂ ವಾದಕ, ಗಾಯಕರೂ ಆಗಿರುವ ಉಮೇಶ್ ಬರಹಗಾರರೂ ಹೌದು. ಕಿರುತೆರೆಗೆ ಧಾರಾವಾಹಿಗಳನ್ನು ಬರೆದು ನಿರ್ದೇಶಿಸಿರುವ ಉಮೇಶ್, 80ನೇ ವಯಸ್ಸಿನಲ್ಲೂ ಅಭಿನಯದಲ್ಲಿ ಸಕ್ರಿಯರಾಗಿದ್ದಾರೆ.* ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು, ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು ಮತ್ತು ದತ್ತಿ ದಾನಿಗಳ ಪರವಾಗಿ ಎಸ್.ಎ. ಚಿನ್ನೇಗೌಡ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಈ ಆಯ್ಕೆ ಮಾಡಿದೆ.