* ದೇಶದಲ್ಲಿ ರೈಲು ಅಪಘಾತಗಳು ಹೆಚ್ಚಾಗುತ್ತಿದ್ದು, ಈ ಅಪಘಾತವನ್ನು ತಪ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ವಯಂಚಾಲಿತ ಸುರಕ್ಷತಾ 'ಕವಚ' ವ್ಯವಸ್ಥೆಯನ್ನು ಎಲ್ಲ ರೈಲು ಮಾರ್ಗಗಳಲ್ಲಿ ಅಳವಡಿಸಲು ಕ್ರಮವಹಿಸಲಿದೆ ಎಂದು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.* ಆಗಸ್ಟ್ 1 ರಂದು ಲೋಕಸಭೆಯಲ್ಲಿ ರೈಲ್ವೆ ಇಲಾಖೆಗೆ 7.89 ಲಕ್ಷ ಕೋಟಿ ರೂ ಮೊತ್ತದ ಅನುದಾನಕ್ಕೆ ಅನುಮೋದನೆ ನೀಡಿದ ಬಳಿಕ ಮಾತನಾಡಿದ ಅಶ್ವಿನಿ ವೈಷ್ಣವ್ ಅವರು  "ಈ  ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಯಾದ ಕವಚವನ್ನು ದೇಶದ ಎಲ್ಲ ರೈಲು ಮಾರ್ಗಗಳಲ್ಲಿ ಅಳವಡಿಸಲಾಗುವುದು. ರೈಲ್ವೆಯ ಪ್ರತಿ ಹಳಿಗಳಲ್ಲಿ ಈ ಸುರಕ್ಷತಾ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನ ನಡೆಸಿದ್ದೇವೆ" ಎಂದು ಅವರು ಹೇಳಿದರು.* ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪ್ರಯಾಣಿಕರ ಸುರಕ್ಷತೆಗಾಗಿ ಏನನ್ನೂ ಮಾಡಿಲ್ಲ. 58 ವರ್ಷಗಳ ಆಡಳಿತದಲ್ಲಿ 2014ರವರೆಗೆ ಒಂದು ಕಿಲೋ ಮೀಟರ್‌ಗೂ ಸ್ವಯಂಚಾಲಿತ ರೈಲು ಸುರಕ್ಷತಾ ವ್ಯವಸ್ಥೆಯಾದ ಕವಚವನ್ನು ಅಳವಡಿಸಿರಲಿಲ್ಲ. ಹಲವು ಪ್ರಯೋಗಗಳನ್ನು ಮಾತ್ರ ನಡೆಸಲಾಗಿತ್ತು. ಆದರೆ ಅದನ್ನು ಅನುಷ್ಠಾನಗೊಳಿಸಿರಲಿಲ್ಲ" ಎಂದು ಕೇಂದ್ರ ಸಚಿವರು ಹೇಳಿದರು.* ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಾನವರಹಿತ ರೈಲ್ವೆ ಲೆವಲ್ ಕ್ರಾಸಿಂಗ್ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ. ರೈಲ್ವೆ ನಿಲ್ದಾಣಗಳ ನಡುವೆ ಎಲೆಕ್ಟ್ರಾನಿಕ್ ಇಂಟರ್ ಲಿಂಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದ ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.* ದೇಶದ ಪ್ರತಿ ರೈಲು ಹಳಿಗಳಲ್ಲಿ ಕವಚ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ತಿಳಿಸಿರುವ ರೈಲ್ವೆ ಸಚಿವರು ಅದರ ಕಾಲಮಿತಿಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.