* ರಾಷ್ಟ್ರೀಯ ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಪ್ರತಿವರ್ಷ ಡಿಸೆಂಬರ್ 7ರಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ಭಾರತದ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಯೋಧರ ತ್ಯಾಗ, ಧೈರ್ಯ ಮತ್ತು ದೇಶಸೇವೆಯನ್ನು ಗೌರವಿಸಲು ಸಮರ್ಪಿಸಲಾಗಿದೆ. ಜೊತೆಗೆ, ಹುತಾತ್ಮ ಸೈನಿಕರ ಕುಟುಂಬಗಳ ಕಲ್ಯಾಣ, ಯುದ್ಧದಲ್ಲಿ ಗಾಯಗೊಂಡ ಯೋಧರ ಪುನರ್ವಸತಿ, ಹಾಗೂ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿಗೆ ಹಣ ಸಂಗ್ರಹಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.* ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ, ರಕ್ಷಣಾ ಸಿಬ್ಬಂದಿಯ ಕಲ್ಯಾಣವನ್ನು ಸಂಘಟಿತ ರೀತಿಯಲ್ಲಿ ನಿರ್ವಹಿಸುವ ಅಗತ್ಯತೆ ಎದುರಾಯಿತು. ಇದರ ಅಂಗವಾಗಿ 1949ರ ಆಗಸ್ಟ್ 28ರಂದು ರಕ್ಷಣಾ ಸಚಿವಾಲಯದ ಅಡಿಯಲ್ಲಿ ರಚಿಸಲಾದ ಸಮಿತಿಯು ಪ್ರತಿವರ್ಷ ಡಿಸೆಂಬರ್ 7ನ್ನು ಧ್ವಜ ದಿನವಾಗಿ ಆಚರಿಸಲು ನಿರ್ಧರಿಸಿತು. ಆಗಿನಿಂದಲೇ ಈ ದಿನವು ನಿರಂತರವಾಗಿ ಆಚರಿಸಲಾಗುತ್ತಿದೆ. ಅಂದು ಪ್ರಧಾನಮಂತ್ರಿ ಆಗಿದ್ದ ಜವಾಹರಲಾಲ್ ನೆಹ್ರು ಅವರು 1954ರಲ್ಲಿ, ದೇಶಕ್ಕಾಗಿ ಸೇವೆ ಸಲ್ಲಿಸುವ ಯೋಧರ ಬಗ್ಗೆ ನಾಗರಿಕರಲ್ಲಿ ಕೃತಜ್ಞತೆ ಮತ್ತು ಹೊಣೆಗಾರಿಕೆಯನ್ನು ಮೂಡಿಸುವ ಅಗತ್ಯವಿದೆ ಎಂದು ಹೇಳಿ, ಧ್ವಜ ದಿನ ನಿಧಿಗೆ ಕೊಡುಗೆ ನೀಡುವಂತೆ ದೇಶವಾಸಿಗಳಿಗೆ ಮನವಿ ಮಾಡಿದ್ದರು.* ಧ್ವಜ ದಿನದ ಮಹತ್ವ ಮತ್ತು ಉದ್ದೇಶ : => ಧ್ವಜ ದಿನವು ಮುಖ್ಯವಾಗಿ ಈ ಮೂರು ಉದ್ದೇಶಗಳನ್ನು ಒಳಗೊಂಡಿದೆ:1. ಯುದ್ಧದಲ್ಲಿ ಗಾಯಗೊಂಡ ಯೋಧರ ಪುನರ್ವಸತಿ2. ಸೇವೆಯಲ್ಲಿರುವ ಸೈನಿಕರು ಮತ್ತು ಅವರ ಕುಟುಂಬಗಳ ಕಲ್ಯಾಣ3. ನಿವೃತ್ತ ಸೈನಿಕರು (ಎಕ್ಸ್-ಸರ್ವೀಸ್‌ಮೆನ್) ಮತ್ತು ಅವರ ಅವಲಂಬಿತರ ಕ್ಷೇಮಾಭಿವೃದ್ಧಿಈ ದಿನವು ದೇಶದ ರಕ್ಷಣೆಗೆ ತಮ್ಮ ಬದುಕನ್ನೇ ಅರ್ಪಿಸಿದ ಸೈನಿಕರಿಗೆ ಭಾರತ ಕೃತಜ್ಞತೆ ಸಲ್ಲಿಸುವ ಒಂದು ಮಹತ್ವದ ಸಂಕೇತವಾಗಿದೆ.* ಆಚರಣೆ : ಧ್ವಜ ದಿನದ ಸಂದರ್ಭದಲ್ಲಿ, ಸ್ವಯಂಸೇವಕರು ಮತ್ತು ಸಾರ್ವಜನಿಕ ಸಂಸ್ಥೆಗಳು ದೇಶದಾದ್ಯಂತ ಸಣ್ಣ ಧ್ವಜಗಳು, ಕಾರ್ ಧ್ವಜಗಳು, ಸ್ಟಿಕ್ಕರ್‌ಗಳು ಮತ್ತು ಕೂಪನ್‌ಗಳನ್ನು ಮಾರಾಟ ಮಾಡುವುದರ  ಮೂಲಕ ಸಂಗ್ರಹಿಸುವ ಹಣವನ್ನು ಸಂಪೂರ್ಣವಾಗಿ ಸೈನಿಕರ ಮತ್ತು ಅವರ ಕುಟುಂಬಗಳ ಹಿತರಕ್ಷಣೆಗೆ ಬಳಸಲಾಗುತ್ತದೆ. ಈ ವೇಳೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರದರ್ಶನಗಳು, ನಾಟಕಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ರಾಷ್ಟ್ರದ ಸುರಕ್ಷತೆಯಲ್ಲಿ ತಮ್ಮ ಪಾತ್ರವನ್ನು ಸಾರ್ವಜನಿಕರಿಗೆ ಪರಿಚಯಿಸುತ್ತವೆ.* ಭಾರತೀಯ ಸಶಸ್ತ್ರ ಪಡೆಗಳ ಧ್ವಜಗಳು ಕೆಂಪು (ಭಾರತೀಯ ಸೇನೆ), ಗಾಢ ನೀಲಿ (ನೌಕಾಪಡೆ) ಹಾಗೂ ಆಕಾಶ ನೀಲಿ (ವಾಯುಪಡೆ) ಬಣ್ಣಗಳನ್ನು ಪ್ರತಿನಿಧಿಸುತ್ತವೆ.* ಧ್ವಜ ದಿನ ನಿಧಿ (Flag Day Fund) : ಮೊದಲ ಬಾರಿಗೆ 1949ರಲ್ಲಿ ಧ್ವಜ ದಿನ ನಿಧಿಯನ್ನು ಸ್ಥಾಪಿಸಲಾಯಿತು. ನಂತರ 1993ರಲ್ಲಿ, ವಿವಿಧ ಕಲ್ಯಾಣ ನಿಧಿಗಳನ್ನು ಒಗ್ಗೂಡಿಸಿ ಒಂದು ಏಕೈಕ Armed Forces Flag Day Fund ರೂಪಿಸಲಾಯಿತು. ಈ ನಿಧಿಗಳು ಯುದ್ಧದಲ್ಲಿ ಹುತಾತ್ಮರಾದವರ, ಅಶಕ್ತರಾದ ಯೋಧರ ಮತ್ತು ನಿವೃತ್ತ ಸೈನಿಕರ ಕಲ್ಯಾಣಕ್ಕಾಗಿ ಬಳಸಲಾಗುತ್ತವೆ.* ನಿಧಿ ಸಂಗ್ರಹ ಮತ್ತು ನಿರ್ವಹಣೆ : ಧ್ವಜ ದಿನ ನಿಧಿ ಸಂಗ್ರಹವನ್ನು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರೀಯ ಸೈನಿಕ ಬೋರ್ಡ್ (Kendriya Sainik Board – KSB) ನಿರ್ವಹಿಸುತ್ತದೆ. ರಾಷ್ಟ್ರಮಟ್ಟದಲ್ಲಿ ಕೇಂದ್ರೀಯ ಸೈನಿಕ ಬೋರ್ಡ್, ರಾಜ್ಯಗಳಲ್ಲಿ ರಾಜ್ಯ ಸೈನಿಕ ಬೋರ್ಡ್‌ಗಳು, ಜಿಲ್ಲಾಮಟ್ಟದಲ್ಲಿ ಜಿಲ್ಲಾ ಸೈನಿಕ ಬೋರ್ಡ್‌ಗಳು ಯೋಧರ ಪುನರ್ವಸತಿ ಮತ್ತು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತವೆ. ಈ ನಿಧಿಯನ್ನು ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿರುವ ವ್ಯವಸ್ಥಾಪಕ ಸಮಿತಿ ಕೇಂದ್ರದಲ್ಲಿ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಬಂಧಿತ ಆಡಳಿತ ಮುಖ್ಯಸ್ಥರು ನಿಯಂತ್ರಿಸುತ್ತಾರೆ.* ಸಮಾರೋಪ : ರಾಷ್ಟ್ರೀಯ ಸಶಸ್ತ್ರ ಪಡೆಗಳ ಧ್ವಜ ದಿನವು ಕೇವಲ ಒಂದು ಆಚರಣೆಯಲ್ಲ, ಅದು ದೇಶಕ್ಕಾಗಿ ಜೀವನವನ್ನು ಅರ್ಪಿಸುವ ಸೈನಿಕರಿಗೆ ಭಾರತ ಸಲ್ಲಿಸುವ ಗೌರವ ಮತ್ತು ಕೃತಜ್ಞತೆಯ ಸಂಕೇತ. ಈ ದಿನ ಧ್ವಜ ದಿನ ನಿಧಿಗೆ ಕೊಡುಗೆ ನೀಡುವ ಮೂಲಕ, ಪ್ರತಿಯೊಬ್ಬ ನಾಗರಿಕರೂ ದೇಶರಕ್ಷಣೆಯ ಹೊಣೆಗಾರಿಕೆಯಲ್ಲಿ ಭಾಗಿಯಾಗಬಹುದು.