Job Description: * ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ದೇಶದ ಆಹಾರ ಭದ್ರತೆ ಮತ್ತು ಆರ್ಥಿಕತೆಯಲ್ಲಿ ರೈತನ ಪಾತ್ರ ಅಮೂಲ್ಯವಾಗಿದೆ. ತನ್ನ ಕಷ್ಟವನ್ನು ಲೆಕ್ಕಿಸದೆ ಬೆವರು ಸುರಿಸಿ ದುಡಿಯುವ ಅನ್ನದಾತನ ಸೇವೆ ಮತ್ತು ತ್ಯಾಗವನ್ನು ಗೌರವಿಸಲು ಪ್ರತಿವರ್ಷ ಡಿಸೆಂಬರ್‌ 23ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ.* ರಾಷ್ಟ್ರೀಯ ರೈತರ ದಿನವನ್ನು ದೇಶದ ಐದನೇ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಅವರು 1979 ರಿಂದ 1980ರ ವರೆಗೆ ಭಾರತದ ಪ್ರಧಾನಿಯಾಗಿದ್ದರು. ರೈತರ ಶ್ರೇಯೋಭಿವೃದ್ಧಿ ಅವರ ರಾಜಕೀಯ ಜೀವನದ ಕೇಂದ್ರಬಿಂದುವಾಗಿತ್ತು. ರೈತರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬಲಿಷ್ಠರಾಗದೇ ದೇಶದ ಒಟ್ಟಾರೆ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ದೃಢ ನಂಬಿಕೆ ಅವರದ್ದು. ಜಮೀನ್ದಾರಿ ಪದ್ಧತಿ ನಿರ್ಮೂಲನೆ, ಕೃಷಿ ಸುಧಾರಣೆಗಳು, ರೈತ ಪರ ಕಾನೂನುಗಳು ಮತ್ತು ನೀತಿಗಳ ಮೂಲಕ ರೈತರ ಸಬಲೀಕರಣಕ್ಕೆ ಅವರು ಶ್ರಮಿಸಿದರು. ಅವರ ಸೇವೆಯನ್ನು ಗೌರವಿಸಿ 2001ರಲ್ಲಿ ಭಾರತ ಸರ್ಕಾರ ಡಿಸೆಂಬರ್‌ 23 ಅನ್ನು ರಾಷ್ಟ್ರೀಯ ರೈತರ ದಿನವೆಂದು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.* ರಾಷ್ಟ್ರೀಯ ರೈತರ ದಿನದ ಮಹತ್ವವೆಂದರೆ ದೇಶದ ಆಹಾರ ಭದ್ರತೆ ಮತ್ತು ಆರ್ಥಿಕತೆಯಲ್ಲಿ ರೈತರ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ ಗೌರವಿಸುವುದಲ್ಲದೆ, ಕೃಷಿ ಕ್ಷೇತ್ರದ ಸಮಸ್ಯೆಗಳತ್ತ ಸರ್ಕಾರ, ಸಮಾಜ ಮತ್ತು ನೀತಿ ರೂಪಕರ ಗಮನ ಸೆಳೆಯುವುದಾಗಿದೆ. ಈ ದಿನ ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಮಾರುಕಟ್ಟೆ ಅನಿಶ್ಚಿತತೆ, ಬೆಲೆ ಸಮಸ್ಯೆಗಳು ಹಾಗೂ ತಾಂತ್ರಿಕ ಬದಲಾವಣೆಗಳಂತಹ ಸವಾಲುಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಯುವ ಪೀಳಿಗೆಗೆ ಕೃಷಿಯ ಮಹತ್ವದ ಅರಿವು ಮೂಡಿಸಿ ರೈತರ ಬಗ್ಗೆ ಗೌರವ ಬೆಳೆಸುವ ಉದ್ದೇಶವೂ ಹೊಂದಿದೆ. ಜೊತೆಗೆ, ದೇಶದ ಆಹಾರ ಸ್ವಾವಲಂಬನೆ ಸಂಪೂರ್ಣವಾಗಿ ರೈತರ ಕಠಿಣ ಪರಿಶ್ರಮದ ಮೇಲೆಯೇ ಅವಲಂಬಿತವಾಗಿದೆ ಎಂಬ ಸತ್ಯವನ್ನು ಈ ದಿನ ಮತ್ತೊಮ್ಮೆ ನೆನಪಿಸುತ್ತದೆ.* ಕೇಂದ್ರ ಸರ್ಕಾರದ ರೈತಪರ ಯೋಜನೆಗಳು: ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಮುಖವಾದವು:=> ಪ್ರಧಾನ ಮಂತ್ರಿ ಕಿಸಾನ್ ನೀರಾವರಿ ಯೋಜನೆ – ನೀರಾವರಿ ಸೌಲಭ್ಯ ವಿಸ್ತರಣೆಗಾಗಿ=> ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ – ಬೆಳೆ ನಷ್ಟಕ್ಕೆ ವಿಮಾ ರಕ್ಷಣೆ=> ಪರಂಪರಾಗತ ಕೃಷಿ ವಿಕಾಸ ಯೋಜನೆ – ಸಾಂಪ್ರದಾಯಿಕ ಮತ್ತು ಸಾವಯವ ಕೃಷಿ ಉತ್ತೇಜನ=> ಕಿಸಾನ್ ಕ್ರೆಡಿಟ್ ಕಾರ್ಡ್ – ರೈತರಿಗೆ ಸುಲಭ ಸಾಲ ಸೌಲಭ್ಯ=> ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ – ನೇರ ಆರ್ಥಿಕ ನೆರವು* ಚೌಧರಿ ಚರಣ್ ಸಿಂಗ್ ಅವರ ಪ್ರಮುಖ ಹೆಜ್ಜೆಗಳು:-=> ಜೈ ಜವಾನ್ ಜೈ ಕಿಸಾನ್’ ಎಂಬ ಪ್ರಸಿದ್ಧ ಘೋಷಣೆಯ ಅನುಸರಣೆ=> ಜಮೀನ್ದಾರಿ ಪದ್ಧತಿ ವಿರುದ್ಧ ಧ್ವನಿ ಎತ್ತಿ ಅದರ ನಿರ್ಮೂಲನೆಗೆ ಶ್ರಮ=> ಅಗ್ರಿಕಲ್ಚರಲ್ ಪ್ರೊಡ್ಯೂಸ್ ಮಾರ್ಕೆಟ್ (APMC) ವ್ಯವಸ್ಥೆಯ ಜಾರಿಗೆ ಬೆಂಬಲ => 1959ರ ನಾಗಪುರ ಕಾಂಗ್ರೆಸ್ ಅಧಿವೇಶನದಲ್ಲಿ ನೆಹರು ಅವರ ನೀತಿಗಳನ್ನು ಸಾರ್ವಜನಿಕವಾಗಿ ವಿರೋಧಿಸಿ ರೈತರ ಪರ ನಿಲುವು* ಕರ್ನಾಟಕ ರಾಜ್ಯ ಸರ್ಕಾರದ ರೈತಪರ ಯೋಜನೆಗಳು:- ಕರ್ನಾಟಕ ಸರ್ಕಾರವೂ ರೈತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಮುಖವಾದವು:=> ರೈತ ಸುರಕ್ಷಾ ಹಾಗೂ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ=> ರೈತ ಸಂಪರ್ಕ ಕೇಂದ್ರಗಳು=> ಬೆಳೆ ಸಮೀಕ್ಷೆ ಯೋಜನೆ=> ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮ=> ಕರ್ನಾಟಕ ರೈತ ಸಮೃದ್ಧಿ ಯೋಜನೆ=> ಕೃಷಿ ನವೋದ್ಯಮ ಉತ್ತೇಜನ=> ಕೃಷಿ ಯಂತ್ರಧಾರೆ ಯೋಜನೆ=> ಮಣ್ಣು ಆರೋಗ್ಯ ಅಭಿಯಾನ=> ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮ* ರೈತನೇ ದೇಶದ ನಿಜವಾದ ಬೆನ್ನೆಲುಬು. ಅವನ ಶ್ರಮವಿಲ್ಲದೆ ದೇಶದ ಆಹಾರ ಭದ್ರತೆ ಮತ್ತು ಆರ್ಥಿಕ ಪ್ರಗತಿ ಅಸಾಧ್ಯ. ರಾಷ್ಟ್ರೀಯ ರೈತರ ದಿನವು ರೈತರ ತ್ಯಾಗ, ಸೇವೆ ಮತ್ತು ಪರಿಶ್ರಮವನ್ನು ಗೌರವಿಸುವ ದಿನ ಮಾತ್ರವಲ್ಲ, ಅವರ ಸಮಸ್ಯೆಗಳ ಪರಿಹಾರಕ್ಕೆ ಸಮಾಜ ಮತ್ತು ಸರ್ಕಾರ ಬದ್ಧವಾಗಬೇಕೆಂಬ ಸಂದೇಶವನ್ನೂ ನೀಡುತ್ತದೆ. ಅನ್ನದಾತನಿಗೆ ನಮನ ಸಲ್ಲಿಸುವುದೇ ಈ ದಿನದ ನಿಜವಾದ ಅರ್ಥ.