* ‘ಸಂಚಾರ್ ಸಾಥಿ’ ಆ್ಯಪ್‌ ಅಳವಡಿಕೆ ಕಡ್ಡಾಯ – ಟೆಲಿಕಾಂ ಇಲಾಖೆಯ ಹೊಸ ಆದೇಶ  :ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ಅಪರಾಧಗಳು, ಕಳೆದುಹೋಗುವ ಮತ್ತು ಕಳುವಾಗುವ ಸ್ಮಾರ್ಟ್‌ಫೋನ್‌ಗಳ ಪ್ರಕರಣಗಳು, ನಕಲಿ ಸಿಮ್‌ ಕಾರ್ಡ್‌ಗಳ ಸೃಷ್ಟಿ ಇತ್ಯಾದಿಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರದ ಟೆಲಿಕಾಂ ಇಲಾಖೆ (DoT) ಮಹತ್ವದ ನಿರ್ಧಾರ ಕೈಗೊಂಡಿದೆ. ‘ಸಂಚಾರ್ ಸಾಥಿ’ ಎಂಬ ಸರ್ಕಾರಿ ಸೈಬರ್–ಭದ್ರತಾ ಆ್ಯಪ್‌ನ್ನು ಎಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಿ–ಇನ್‌ಸ್ಟಾಲ್‌ ಮಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಯಿಟರ್ಸ್ ವರದಿ ಪ್ರಕಾರ, ಈ ನಿರ್ಧಾರಕ್ಕೆ ಆಪಲ್ ಸೇರಿದಂತೆ ಕೆಲವು ಸ್ಮಾರ್ಟ್‌ಫೋನ್ ತಯಾರಕರು ಹಾಗೂ ಡಿಜಿಟಲ್ ಗೌಪ್ಯತೆ ಪರ ಹೋರಾಟಗಾರರಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.* ನವೆಂಬರ್ 28 ರಂದು ಹೊರಡಿಸಲಾದ ಆದೇಶದಲ್ಲಿ ಎಲ್ಲಾ ಸ್ಮಾರ್ಟ್‌ಫೋನ್ ತಯಾರಕರು ಮುಂದಿನ 90 ದಿನಗಳಲ್ಲಿ ಹೊಸ ಮಾದರಿಗಳಲ್ಲಿ ಸಂಚಾರ್ ಸಾಥಿ ಆ್ಯಪ್‌ನ್ನು ಕಡ್ಡಾಯವಾಗಿ ಅಳವಡಿಸಬೇಕು, ಬಳಕೆದಾರರು ಈ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಅಥವಾ ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ,  ಈಗಿರುವ ಹಳೆಯ ಫೋನ್‌ಗಳಿಗೂ ಮುಂದೆ ಬರುವ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಆ್ಯಪ್ ಅನ್ನು ಸೇರಿಸುವಂತೆ ಸೂಚಿಸಲಾಗಿದೆ, ನಿರ್ದೇಶನ ನೀಡಿದ 120 ದಿನಗಳ ಒಳಗೆ ಅನುಸರಣಾ ವರದಿ (Compliance Report) ಅನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ, ಸ್ಯಾಮ್‌ಸಂಗ್, ಶಿಯೋಮಿ, ವಿವೋ, ಓಪ್ಪೋ, ರಿಯಲ್‌ಮಿ, ಹಾಗೂ ಆ್ಯಪಲ್‌  ಎಲ್ಲಾ ಪ್ರಮುಖ ಕಂಪನಿಗಳು ಈ ನಿಯಮವನ್ನು ಪಾಲಿಸಬೇಕಿದೆ * ಸಂಚಾರ್ ಸಾಥಿ ಆ್ಯಪ್‌ನ ಪ್ರಮುಖ ವೈಶಿಷ್ಟ್ಯಗಳು : 1. ಕಳೆದುಹೋದ ಅಥವಾ ಕದ್ದ ಸ್ಮಾರ್ಟ್‌ಫೋನ್‌ಗಳನ್ನು ಟ್ರ್ಯಾಕ್ ಮಾಡಿ ಕಂಡುಹಿಡಿಯಲು ಸಹಾಯ ಮಾಡುತ್ತದೆ.2. ಕಳುವಾದ ಫೋನ್‌ಗಳನ್ನು ಎಲ್ಲಾ ಟೆಲಿಕಾಂ ನೆಟ್‌ವರ್ಕ್‌ಗಳಿಂದ ಬ್ಲಾಕ್ ಮಾಡುವ ಸಾಮರ್ಥ್ಯವಿದೆ.3. ಬಳಕೆದಾರರ ಹೆಸರಿನಲ್ಲಿ ಇತರರು ಮಾಡಿರುವ ನಕಲಿ ಅಥವಾ ಅನುಮಾನಾಸ್ಪದ ಮೊಬೈಲ್ ಸಂಪರ್ಕಗಳನ್ನು ಪತ್ತೆಹಚ್ಚಲು ಮತ್ತು ಅವನ್ನು ನಿಷ್ಕ್ರಿಯಗೊಳಿಸಲು ಸಹಾಯ ಮಾಡುತ್ತದೆ.4. ASTR (AI-driven system) ಆಧಾರಿತ ವ್ಯವಸ್ಥೆಯಿಂದ ಅಪರಾಧಪೂರಿತ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ.* ಆ್ಯಪ್‌ನ ಸಾಧನೆ :  ಸರಕಾರದ ಅಂಕಿಅಂಶಗಳ ಪ್ರಕಾರ, ಸಂಚಾರ್ ಸಾಥಿ ಆ್ಯಪ್ ಈಗಾಗಲೇ 7 ಲಕ್ಷಕ್ಕೂ ಹೆಚ್ಚು ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿದೆ, ಸುಮಾರು 37 ಲಕ್ಷ ಕದ್ದ ಫೋನ್‌ಗಳನ್ನು ಬ್ಲಾಕ್ ಮಾಡಲಾಗಿದೆ. ಈ ಅಂಶಗಳು ಆ್ಯಪ್‌ನ ಪರಿಣಾಮಕಾರಿತ್ವವನ್ನು ಸ್ಪಷ್ಟಪಡಿಸುತ್ತವೆ.* ಈ ಆದೇಶ ಜಾರಿಯಾದರೆ ದೇಶದಲ್ಲಿ ಸೈಬರ್ ಭದ್ರತೆ ಮತ್ತಷ್ಟು ಬಲಪಡುವುದು, ಆದರೆ ಗೌಪ್ಯತಾ ಹಕ್ಕುಗಳನ್ನು ಪ್ರಶ್ನಿಸುವ ಚರ್ಚೆಗಳು ಹೆಚ್ಚುವ ಸಾಧ್ಯತೆ ಇದೆ.