* ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ವಿಚಾರಧಾರೆ ಮತ್ತು ರಾಷ್ಟ್ರದೃಷ್ಟಿಯನ್ನು ಒಳಗೊಂಡ “ಸನಾತನ ಸಂಸ್ಕೃತಿ ಕಿ ಅಟಲ್ ದೃಷ್ಟಿ” ಎಂಬ ಪುಸ್ತಕವನ್ನು 2025ರ ಡಿಸೆಂಬರ್ 23ರಂದು ನವದೆಹಲಿಯಲ್ಲಿರುವ ಉಪರಾಷ್ಟ್ರಪತಿ ಭವನದಲ್ಲಿ ಬಿಡುಗಡೆ ಮಾಡಿದರು.* ಈ ಪುಸ್ತಕವನ್ನು ರಾಜಸ್ಥಾನ ವಿಧಾನಸಭೆಯ ಸ್ಪೀಕರ್ ಶ್ರೀ ವಾಸುದೇವ್ ದೇವನಾನಿ ಅವರು ರಚಿಸಿದ್ದು, ಅಟಲ್ ಬಿಹಾರಿ ವಾಜಪೇಯಿಯವರ ಜೀವನ, ನಾಯಕತ್ವ, ಸಂಸ್ಕೃತಿ ಪ್ರಜ್ಞೆ ಮತ್ತು ರಾಷ್ಟ್ರ ನಿರ್ಮಾಣದ ಕೊಡುಗೆಗಳನ್ನು ಆಳವಾಗಿ ವಿವರಿಸುತ್ತದೆ. ವಾಜಪೇಯಿಯವರ ಜನ್ಮಶತಾಬ್ದಿ ಆಚರಣೆಯ ಸಂದರ್ಭದಲ್ಲಿ ಈ ಕೃತಿ ಬಿಡುಗಡೆಯಾಗಿರುವುದು ಅತ್ಯಂತ ಅರ್ಥಪೂರ್ಣ ಹಾಗೂ ಸಮಯೋಚಿತವಾಗಿದೆ ಎಂದು ಉಪರಾಷ್ಟ್ರಪತಿ ಅವರು ಅಭಿಪ್ರಾಯಪಟ್ಟರು.* ಕಾರ್ಯಕ್ರಮದಲ್ಲಿ ಮಾತನಾಡಿದ ಉಪರಾಷ್ಟ್ರಪತಿ, ಅಟಲ್ ಬಿಹಾರಿ ವಾಜಪೇಯಿ ಒಬ್ಬ ವ್ಯಕ್ತಿಯಷ್ಟೇ ಅಲ್ಲ, ಸ್ವತಃ ಒಂದು ಸಂಸ್ಥೆಯಂತಿದ್ದರು ಎಂದು ಹೇಳಿದರು. ಅವರ ನಾಯಕತ್ವವು ಗಟ್ಟಿಯಾದ ಮೌಲ್ಯಗಳು, ಪ್ರಜಾಸತ್ತಾತ್ಮಕ ಆದರ್ಶಗಳ ಮೇಲಿನ ನಿಷ್ಠೆ ಹಾಗೂ ರಾಷ್ಟ್ರಭಕ್ತಿಯನ್ನು ಒಳಗೊಂಡ ಸಮಾವೇಶಾತ್ಮಕ ದೃಷ್ಟಿಕೋನದಿಂದ ರೂಪುಗೊಂಡಿತ್ತು ಎಂದು ಅವರು ಸ್ಮರಿಸಿದರು.* ವಾಜಪೇಯಿಯವರ ಪ್ರಧಾನಮಂತ್ರಿ ಅವಧಿಯಲ್ಲಿ ನಡೆದ 1998ರ ಪೊಖ್ರಾನ್ ಅಣುಪರೀಕ್ಷೆಗಳು (ಆಪರೇಷನ್ ಶಕ್ತಿ) ಭಾರತದ ಆತ್ಮವಿಶ್ವಾಸ ಮತ್ತು ತಂತ್ರಜ್ಞಾನದ ಸ್ವಾಯತ್ತತೆಯನ್ನು ಜಗತ್ತಿಗೆ ಸಾರಿದ ಮಹತ್ವದ ಘಟನೆ ಎಂದು ಉಪರಾಷ್ಟ್ರಪತಿ ಹೇಳಿದರು. ಈ ಪರೀಕ್ಷೆಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಿ ಸ್ಥಾಪಿಸಿದವು ಎಂದರು ಅದೇ ಸಂದರ್ಭದಲ್ಲಿ ವಾಜಪೇಯಿಯವರ ಪ್ರಸಿದ್ಧ ಘೋಷಣೆ  “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ”ವನ್ನು ಉಲ್ಲೇಖಿಸಿದ ಅವರು, ದೇಶದ ರಕ್ಷಣಾ ಶಕ್ತಿ, ಕೃಷಿ ಕ್ಷೇತ್ರ ಮತ್ತು ವಿಜ್ಞಾನ–ತಂತ್ರಜ್ಞಾನಗಳ ಸಮಗ್ರ ಅಭಿವೃದ್ಧಿಯೇ ವಾಜಪೇಯಿಯವರ ರಾಷ್ಟ್ರದೃಷ್ಟಿಯ ಮೂಲವಾಗಿತ್ತು ಎಂದು ಹೇಳಿದರು.* “ಸನಾತನ ಸಂಸ್ಕೃತಿ ಕಿ ಅಟಲ್ ದೃಷ್ಟಿ” ಪುಸ್ತಕವು ಅಟಲ್ ಬಿಹಾರಿ ವಾಜಪೇಯಿಯವರ ಆಲೋಚನೆಗಳು, ಆಡಳಿತದ ಪರಂಪರೆ ಮತ್ತು ಭಾರತದ ಅಭಿವೃದ್ಧಿ ಪಥದ ಮೇಲೆ ಅವರ ಶಾಶ್ವತ ಪ್ರಭಾವವನ್ನು ಮನೋಜ್ಞವಾಗಿ ದಾಖಲಿಸುವ ಮಹತ್ವದ ಕೃತಿಯಾಗಿದೆ.