* ಅಮೇರಿಕ ಕನ್ನಡ ಕೂಟಗಳ ಆಗರ (ಅಕ್ಕ) ನಡೆಸುವ ಪ್ರತಿಷ್ಠಿತ 12ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅಕ್ಕ ಸಮ್ಮೇಳನ ಸಮಿತಿ ಮತ್ತು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಜಂಟಿಯಾಗಿ ರಾಜ್ಯದ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ರಾಷ್ಟ್ರಪತಿಗಳ ಚಿನ್ನದ ಪದಕ ಪುರಸ್ಕೃತ ನಿವೃತ್ತ ಡಿಸಿಪಿ ಜಿ.ಎ.ಬಾವಾ ಅವರಿಗೆ ‘ವಿಶ್ವ ಮಾನ್ಯ ಕನ್ನಡಿಗ-2024' ಗೌರವ ಪುರಸ್ಕಾರ ನೀಡಿ ಸನ್ಮಾನಿಸಿದೆ.* ಕರ್ನಾಟಕ ಪೋಲೀಸ್ ಇಲಾಖೆಯಲ್ಲಿ ಮೂವತ್ತಾರು ವರ್ಷಗಳ ಸುದೀರ್ಘ ಪಯಣದಲ್ಲಿ ಅಪ್ರತಿಮ ಎದೆಗಾರಿಕೆ ತೋರಿದ ಅಧಿಕಾರಿಯೆಂಬ ಹಿರಿಮೆ ಗಿಟ್ಟಿಸಿಕೊಂಡಿದ್ದ ಬಾವಾ ಅವರು ಅತ್ಯಂತ ಕಠಿಣ ಪರಿಶ್ರಮದಿಂದ ಪದವಿ ಪೂರೈಸಿ 1971 ರಲ್ಲಿ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿ ನಂತರದ ದಿನಗಳಲ್ಲಿ ಕರ್ನಾಟಕದಾದ್ಯಂತ ಪಿಎಸ್ಐ, ಸರ್ಕಲ್ ಇನ್ಸ್ ಪೆಕ್ಟರ್, ಎಸ್ಪಿ,ಅಸಿಸ್ಟೆಂಟ್ ಕಮಿಷನರ್ ಆಪ್ ಪೋಲೀಸ್, ಡೆಪ್ಯುಟಿ ಕಮಿಷನರ್ ಆಪ್ ಪೊಲೀಸ್ ಮೊದಲಾದ ಪ್ರಮುಖ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಕರ್ನಾಟಕ ಪೋಲೀಸ್ ಇಲಾಖೆಯಲ್ಲಿ ತತ್ವನಿಷ್ಠ-ಕರ್ತವ್ಯ ಪ್ರಜ್ಞೆಯ, ಅದ್ವಿತೀಯ ಕ್ರಿಯಾಶೀಲ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ.* ಎಲ್.ಎಲ್.ಬಿ ಸ್ನಾತಕೋತ್ತರ ಪದವಿಯನ್ನು ಪೂರೈಸಿರುವ ಬಾವಾ ಅವರು ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾಡುಗಳ್ಳ ವೀರಪ್ಪನ್ ವಿರುದ್ಧ ಗೂಢಚರ್ಯ ವಿಭಾಗದಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ವೀರಪ್ಪನ್ ಸಹಚರರನ್ನು ಹಿಡಿಯುವಲ್ಲಿ ಮಹತ್ವದ ಪಾತ್ರ ಪಾತ್ರ ವಹಿಸಿದ್ದು, ಪೋಲೀಸ್ ಕರ್ತವ್ಯದ ಅವರ ಸೇವೆಗೆ ರಾಷ್ಟ್ರಪತಿಗಳ ಚಿನ್ನದ ಪದಕ, ಮೂರು ಬಾರಿ ಕರ್ನಾಟಕ ಮುಖ್ಯಮಂತ್ರಿಗಳ ಚಿನ್ನದ ಪದಕ ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಬಾವಾ ಅವರನ್ನು ಗೌರವಿಸಿ ಸನ್ಮಾನಿಸಿವೆ.‌