➤ ನವದೆಹಲಿ: ಭಾರತದ ಅತ್ಯಂತ ಹಳೆಯ ಮತ್ತು ಪರಿಸರ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾದ ಅರಾವಳಿ ಪರ್ವತ ಶ್ರೇಣಿಯನ್ನು ಅಕ್ರಮ ಗಣಿಗಾರಿಕೆಯಿಂದ ರಕ್ಷಿಸಲು ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಪರ್ವತ ಶ್ರೇಣಿಗಳ ವ್ಯಾಖ್ಯಾನ ಮತ್ತು ಗಣಿಗಾರಿಕೆಯ ಪರಿಣಾಮಗಳನ್ನು ವೈಜ್ಞಾನಿಕವಾಗಿ ಮರುಪರಿಶೀಲಿಸಲು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠವು 'ಹೈಪರ್ ಪವರ್ ತಜ್ಞರ ಸಮಿತಿ' ರಚಿಸುವುದಾಗಿ ಘೋಷಿಸಿದೆ.➤ ಸುಪ್ರೀಂಕೋರ್ಟ್‌ನ ಪ್ರಮುಖ ನಿರ್ದೇಶನಗಳು:-=> ತಜ್ಞರ ಸಮಿತಿ ರಚನೆ: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠವು ಗಣಿಗಾರಿಕೆ, ಪರಿಸರ ವಿಜ್ಞಾನ ಮತ್ತು ಭೂವಿಜ್ಞಾನ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರನ್ನು ಒಳಗೊಂಡ ಸಮಿತಿಯನ್ನು ರಚಿಸಲಿದೆ.=> ಕೇಂದ್ರಕ್ಕೆ ಸೂಚನೆ: ಮುಂದಿನ 4 ವಾರಗಳಲ್ಲಿ ಸಮಿತಿಗೆ ಅರ್ಹರಾದ ಪರಿಸರವಾದಿಗಳು ಮತ್ತು ವಿಜ್ಞಾನಿಗಳ ಹೆಸರನ್ನು ಸೂಚಿಸುವಂತೆ ಕೇಂದ್ರ ಸರ್ಕಾರದ ಪರ ವಕೀಲರಿಗೆ ಕೋರ್ಟ್ ಸೂಚಿಸಿದೆ. ಈ ಸಮಿತಿಯು ಸುಪ್ರೀಂಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ.=> ಗಣಿಗಾರಿಕೆಗೆ ತಡೆ: ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಅರಾವಳಿ ವ್ಯಾಪ್ತಿಯಲ್ಲಿ ಹೊಸ ಗಣಿಗಾರಿಕೆ ಪರವಾನಗಿ ನೀಡುವಂತಿಲ್ಲ ಅಥವಾ ಹಳೆಯ ಪರವಾನಗಿಗಳನ್ನು ನವೀಕರಿಸುವಂತಿಲ್ಲ ಎಂದು ಕೋರ್ಟ್ ತನ್ನ ಹಳೆಯ ಆದೇಶವನ್ನು ಮುಂದುವರಿಸಿದೆ. ➤ ನವೆಂಬರ್ 2025 ರಲ್ಲಿ ಸುಪ್ರೀಂಕೋರ್ಟ್ ಅರಾವಳಿ ಪರ್ವತ ಶ್ರೇಣಿಗಳನ್ನು ಗುರುತಿಸಲು 'ಸಮುದ್ರ ಮಟ್ಟದಿಂದ ಎತ್ತರ' (Elevation-linked definition) ಆಧರಿಸಿದ ಮಾನದಂಡವನ್ನು ಒಪ್ಪಿಕೊಂಡಿತ್ತು. ಅದರಂತೆ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರವಿರುವ ಪ್ರದೇಶಗಳನ್ನು ಅರಾವಳಿ ಎಂದು ಪರಿಗಣಿಸಲಾಗಿತ್ತು. ಈ ಹೊಸ ವ್ಯಾಖ್ಯಾನದಿಂದಾಗಿ ಅನೇಕ ಸಂರಕ್ಷಿತ ಪ್ರದೇಶಗಳು ಗಣಿಗಾರಿಕೆಗೆ ಮುಕ್ತವಾಗಬಹುದು ಮತ್ತು ಪರಿಸರ ನಾಶಕ್ಕೆ ದಾರಿಯಾಗಬಹುದು ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈಗ ಹಳೆಯ ಆದೇಶಕ್ಕೆ ತಡೆ ನೀಡಿ, ಮರುಪರಿಶೀಲನೆಗೆ ಮುಂದಾಗಿದೆ.➤ ಅರಾವಳಿ ಪರ್ವತ ಶ್ರೇಣಿಯ ಮಹತ್ವ: ಅರಾವಳಿ ಶ್ರೇಣಿಯನ್ನು ವಾಯುವ್ಯ ಭಾರತದ 'ಹಸಿರು ಶ್ವಾಸಕೋಶ' (Green Lungs) ಎಂದು ಕರೆಯಲಾಗುತ್ತದೆ. ಇದು ಹವಾಮಾನ ಸಮತೋಲನ, ಜೀವ ವೈವಿಧ್ಯ ಮತ್ತು ಮರುಭೂಮಿಕರಣವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಶ್ರೇಣಿಯು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿಕೊಂಡಿದೆ.➤ ಅರಾವಳಿ ಪರ್ವತ ಶ್ರೇಣಿಯ ವ್ಯಾಪ್ತಿ ಮತ್ತು ಅಕ್ರಮ ಗಣಿಗಾರಿಕೆಯ ಪರಿಣಾಮಗಳನ್ನು ಪರಿಶೀಲಿಸಿ ನಿಖರ ವ್ಯಾಖ್ಯಾನ ನೀಡಲು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠವು ಫಾರೆಸ್ಟ್ ಸರ್ವೆ ಆಫ್ ಇಂಡಿಯಾದ ವರದಿಯನ್ನಾಧರಿಸಿ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ.