Job Description: ➤ ಭಾರತದ ಗಣಿಗಾರಿಕೆ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಮೈಲಿಗಲ್ಲೊಂದು ದಾಖಲಾಗಿದೆ. ಸ್ವಾತಂತ್ರ್ಯದ ನಂತರ ದೇಶದಲ್ಲೇ ಮೊದಲ ಬಾರಿಗೆ ವಾಣಿಜ್ಯ ಮಟ್ಟದ ಬೃಹತ್ ಖಾಸಗಿ ಚಿನ್ನದ ಗಣಿ ಮತ್ತು ಸಂಸ್ಕರಣಾ ಘಟಕ ಅಧಿಕೃತವಾಗಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತುಗ್ಗಲಿ ಮಂಡಲಕ್ಕೆ ಒಳಪಡುವ ಜೊನ್ನಗಿರಿ (Jonnagiri) ಎಂಬಲ್ಲಿ ಈ ಐತಿಹಾಸಿಕ ಯೋಜನೆಗೆ ಚಾಲನೆ ನೀಡಲಾಗಿದೆ. ➤ ಜಿಯೋ ಮೈಸೂರು ಸರ್ವೀಸಸ್ ಮತ್ತು ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಜಂಟಿಯಾಗಿ ₹405 ಕೋಟಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ, 13.1 ಟನ್ ಚಿನ್ನದ ಅದಿರಿನ ನಿಕ್ಷೇಪ ಹೊಂದಿರುವ 598 ಹೆಕ್ಟೇರ್ ವಿಸ್ತೀರ್ಣದ ಈ ಗಣಿಯು ಮುಂದಿನ 15 ವರ್ಷಗಳ ಕಾಲ ಸಕ್ರಿಯವಾಗಿರಲಿದ್ದು, ಮೊದಲ ವರ್ಷ 400 ಕೆ.ಜಿ ಚಿನ್ನ ಉತ್ಪಾದಿಸಿ ಹಂತಹಂತವಾಗಿ ವಾರ್ಷಿಕ 1 ರಿಂದ 2 ಟನ್‌ಗೆ ಹೆಚ್ಚಿಸುವ ಗುರಿ ಹೊಂದಿದೆ.➤ 'ಜೊನ್ನಗಿರಿ' ಇನ್ಮುಂದೆ 'ಸ್ವರ್ಣಗಿರಿ': ಈ ಯೋಜನೆಯ ಉದ್ಘಾಟನೆ ನೆರವೇರಿಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಜೊನ್ನಗಿರಿ ಗ್ರಾಮವನ್ನು ಇನ್ಮುಂದೆ 'ಸ್ವರ್ಣಗಿರಿ' ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದಾರೆ.➤ ಮೌರ್ಯ ಸಾಮ್ರಾಜ್ಯದ ಪ್ರಸಿದ್ಧ ದೊರೆ ಸಾಮ್ರಾಟ್ ಅಶೋಕನ ಕಾಲದಲ್ಲೂ (ಕ್ರಿ.ಪೂ. 3ನೇ ಶತಮಾನ) ಈ ಪ್ರದೇಶವು ಚಿನ್ನದ ಪ್ರಮುಖ ಉತ್ಪಾದನಾ ಕೇಂದ್ರವಾಗಿತ್ತು. ಅಶೋಕನ ಶಾಸನಗಳು ದೊರೆತಿರುವ ಇಲ್ಲಿನ 'ಎರ್ರಗುಡಿ' ಸಮೀಪದ ಪ್ರದೇಶವನ್ನು ಆ ಕಾಲದಲ್ಲಿ 'ಸುವರ್ಣಗಿರಿ' ಎಂದೇ ಕರೆಯಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಕಾಲದಲ್ಲೂ ಈ ಭಾಗವು ರತ್ನ ಹಾಗೂ ಖನಿಜಗಳ ವ್ಯಾಪಾರಕ್ಕೆ ಪ್ರಸಿದ್ಧವಾಗಿತ್ತು.