* ದೇಶದ ಅತ್ಯಂತ ಪ್ರಭಾವಶಾಲಿ ತತ್ವಜ್ಞಾನಿ, ಆಧ್ಯಾತ್ಮಿಕ ನಾಯಕ ಮತ್ತು ಸಾಮಾಜಿಕ ಸುಧಾರಕರಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12ನ್ನು ಭಾರತದಲ್ಲಿ ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. * ರಾಷ್ಟ್ರೀಯ ಯುವ ದಿನ 2025ರ ಥೀಮ್ ʼಸುಸ್ಥಿರ ಭವಿಷ್ಯಕ್ಕಾಗಿ ಯುವಕರು:ಸ್ಥಿತಿಸ್ಥಾಪಕತ್ವ ಮತ್ತು ಜವಾಬ್ದಾರಿಯೊಂದಿಗೆ ರಾಷ್ಟ್ರವನ್ನು ರೂಪಿಸುವುದುʼ ಎಂಬುದು ಥೀಮ್ ಆಗಿದೆ.* ಕೇಂದ್ರ ಸರಕಾರ 1985ರಿಂದ ಈ ದಿನವನ್ನು ಆಚರಿಸಲು ಕರೆ ಕೊಟ್ಟಿತು. ಸ್ವಾಮಿ ವಿವೇಕಾನಂದರು ಸಾರಿದ ತತ್ವಗಳಿಂದ ಯುವ ಜನರು ಸ್ಫೂರ್ತಿಗೊಂಡು ಬಲಿಷ್ಠ ಭಾರತವನ್ನು ನಿರ್ಮಾಣ ಮಾಡುವಂತೆ ಪ್ರೇರೇಪಿಸುವುದು ಈ ಆಚರಣೆಯ ಉದ್ದೇಶವಾಗಿದೆ.* 'ಸ್ವಾಮಿ ವಿವೇಕಾನಂದರ ತತ್ವಗಳು, ಬೋಧನೆ ಮತ್ತು ಸಿದ್ಧಾಂತಗಳು ಭಾರತದ ಅತ್ಯುನ್ನತ ಸಂಸ್ಕೃತಿ ಮತ್ತು ಸಂಪ್ರದಾಯದ ಆಸ್ತಿಯಾಗಿವೆ. ದೇಶವನ್ನು ಮುನ್ನಡೆಸುವ ನಿಟ್ಟಿನಲ್ಲಿ ಪ್ರಮುಖ ಭಾಗವಾಗಿರುವ ಯುವ ಸಮೂಹವು ವಿವೇಕಾನಂದರ ತತ್ವಗಳು ಮತ್ತು ಬೋಧನೆಯಿಂದ ಪ್ರೇರೇಣೆಗೊಂಡು ಉತ್ತಮ ಮಾರ್ಗದಲ್ಲಿ ಮುನ್ನಡೆಯಬೇಕೆಂಬ ಆಶಯದಿಂದ ಯುವ ದಿನವನ್ನು ಆಚರಿಸಲಾಗುತ್ತಿದೆ.* ಸ್ವಾಮಿ ವಿವೇಕಾನಂದರು ಭಾರತಕ್ಕೆ ಮಾತ್ರವಲ್ಲದೇ ಪ್ರಪಂಚದ ಇತರೆ ದೇಶಗಳಿಗೂ ಸಹ ಅವರ ತತ್ವಗಳು, ಬದುಕಿದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿಯ ಕರೆಗಳಿಂದ ಅವರು ಇಂದಿಗೂ ಎಂದೆಂದಿಗೂ ಪ್ರಪಂಚದ ಆಧ್ಯಾತ್ಮಿಕ ಗುರು.* 1862ರ ಜನವರಿ 12ರಂದು ಕೋಲ್ಕತ್ತದಲ್ಲಿ ಜನಿಸಿದರು. ಇವರ ತಂದೆ ವಿಶ್ವನಾಥ ದತ್ತ, ವೃತ್ತಿಯಲ್ಲಿ ವಕೀಲರಾಗಿದ್ದರು. ತಾಯಿ ಭುವನೇಶ್ವರಿ ದೇವಿ. ವಿವೇಕಾನಂದ ಪೂರ್ವ ಹೆಸರು ನರೇದ್ರನಾಥ ದತ್ತ.* 19 ನೇ ಶತಮಾನದಲ್ಲಿ ಪ್ರಪಂಚದ ಪ್ರಮುಖ ಧರ್ಮಗಳ ಪೈಕಿ ಹಿಂದು ಧರ್ಮವು ಒಂದು ಶ್ರೇಷ್ಠ ಧರ್ಮ ಎಂಬ ಭಾವನೆ ಮೂಡಿಸಿದವರಲ್ಲಿ ಸ್ವಾಮಿವಿವೇಕಾನಂದರು ಪ್ರಮುಖರಾಗಿದ್ದಾರೆ. * ಸ್ವಾಮಿ ವಿವೇಕಾನಂದರು ಯುವಜನತೆಗೆ ನೀಡಿದ ಸಂದೇಶಗಳು:-'ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ'.- 'ಜೀವನ ಎಂಬುದು ಕಠಿಣ ಸತ್ಯ, ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು'.- 'ನಮ್ಮ ಹಾಗೂ ದೇವರ ಬಗ್ಗೆ ನಮಗಿರುವ ನಂಬಿಕೆಯೇ ಹಿರಿಮೆಗೆ ಸ್ಪೂರ್ತಿ'. ಹೀಗೆ ಹಲವಾರು ಸಂದೇಶಗಳನ್ನು ನೀಡಿದ್ದಾರೆ.